Saturday, December 1, 2012

ಎರಡು ಕವನಗಳು....

 ನನ್ನ ಪೇಂಟಿಂಗ್....
ಕೆಟ್ಟ ಸಮಯವಿದು...
1.
ಕಳೆಯೋಣ
ಈ ಸಮಯವನು

ತಲೆಯೆತ್ತಿದರೆ ಗ್ರಹಣ
ಹಿಡಿ ಅನ್ನ  ಮಣ್ಣು
ಕಣ್ಣ  ತುಂಬದ ನಿದಿರೆ
ಸೋಲು ಸೋಲೇ ಉಸಿರು.

ಹಾದು ಹೋಗಲಿ ಹೀಗೆ
ತಪ್ಪಿಸುವ ಮಾತೇಕೆ?

2.
 ಕಾಯೋಣ
ಆ ಕಾಲವನು

ಬದುಕು ಬೆಳದಿಂಗಳು
ಭರ್ತಿ ತೃಪ್ತಿಯ ಉದರ
ಸಂತೆಯಲು ನಿದ್ರೆ
ಕೈತಾಕಿದ್ದು ಚಿನ್ನ.

ಕಾಲ ಬರಲೇ ಬೇಕು ..
ಕಳೆದರೆ ರಾತ್ರಿ
ಉಳಿದದ್ದು ಹಗಲೇ ತಾನೇ..?

2. ಸೋತಿದ್ದೇನೆ..ಗೆಲ್ಲಲು ಬೇಕಿದೆ ಕನಸು...

ಒದ್ದಾಡುತ್ತಿದ್ದೇನೆ
ಮಗ್ಗುಲು ಬದಲಿಸುತ್ತಾ
ಕಣ್ಣರೆಪ್ಪೆ ಅದುಮುತ್ತಾ
ನೂರು ಸೋಲುಗಳನ್ನು ಪಕ್ಕಕ್ಕಿರಿಸಿ,
ಸುಡುಚಿಂತೆಗಳಿಗೆ ತಣ್ಣೀರೆರೆಚಿ,
ಇತಿಹಾಸವನ್ನು ಮೆದುಳಿ೦ದ ಅಳಿಸಿ
ನನ್ನ ನಾ ಮರೆಯುವ ಯತ್ನಗಳಿಂದ
ಸೋತು ಸೋತು ಮತ್ತೆ ಸೋತು
ಮಲಗಿದ್ದೇನೆ ನಿದ್ರೆ ಬಾರದೆ..!
****
ಬಾರದ ಪ್ರಿಯತಮೆಗಾಗಿ ಕಾದಿದ್ದೆ.
ಒಡನಾಡಿದ ನೆನಪುಗಳು ನನ್ನನ್ನುಳಿಸಿದ್ದವು
ಬೇಸರಿಸದಂತೆ ಬಸವಳಿಯದಂತೆ
ಸೋತು ಸಾಯದಂತೆ
ಮುಖ ತಿರುಗಿಸಿದವಳಿಗೆರೆಡು ಅಕ್ಷತೆ ಹಾಕಿ ಬಂದೆ
ಮತ್ತೆ ಕಾಯಲು ಹೋಗಲಿಲ್ಲ.

. ಬಾರದ ಮಳೆಗಾಗಿ ಕಾದಿದ್ದೆ. 
ಮಳೆ ಬಂದಂತೆ ಬೆಳೆ ಬೆಳೆದಂತೆ
ಬದುಕು  ಹಸನಾದಂತೆ...
ಹಗಲುಗನಸುಗಳೆನ್ನ  ಕಾದಿದ್ದವು
ಜಿಗುಪ್ಸೆಯಿಂದ ,ಹಸಿವಿಂದ
ಆತ್ಮಹತ್ಯಯಂತಹ ಪಾಪದಿಂದ

ಮಳೆಬರಲಿಲ್ಲ.
ರೂಢಿ ಬದುಕಾಗಿ ,
ಬದುಕು ರೂಢಿಯಾಗಿ ನಾನೀಗ ಮಳೆಗೆ ಕಾಯುತ್ತಿಲ್ಲ.
***
ಈಗ
ಬಾರದ ನಿದ್ರೆಗಾಗಿ ಕಾಯುತ್ತಿದ್ದೇನೆ
ನಿದ್ರೆ ಬಾರದೆ,ಕಣ್ಣು ಮುಚ್ಚದೆ
ಬೀಳದ ಕನಸುಗಳನ್ನ ಶಪಿಸುತ್ತಾ
ಕತ್ತಲಿದೆ, ಮಂಚವಿದೆ,
ಬದುಕು ನಿರ್ವರ್ಣ..

ನಿದ್ರೆಯಿಲ್ಲದೆ, ಕನಸಿಲ್ಲದೆ,
ನಾಳೆಗಳೆಲ್ಲವೂ ಶೂನ್ಯ...!!!

*****

ನನ್ನ ಹಳೆಯ ಡೈರಿಯಲ್ಲಿದ್ದ ಕವನಗಳಿವು. ಬೆಂಗಳೂರಿಗೂ  ಬರುವ ಮುಂಚಿನ ದಿನಗಳ ನನ್ನ ಪರಿಸ್ಥಿತಿಯನ್ನು ವ್ಯಕ್ತಪಡಿಸುತ್ತವೆ  . ಆಶ್ಚರ್ಯದ ಸಂಗತಿಯೆಂದರೆ ಈವತ್ತಿಗೂ ನನಗದು ಸೂಕ್ತ ಅನಿಸುತ್ತದೆ... ಇರಲಿ ನನಗೆ ಕವನವನ್ನು ಓದುವುದು ಇಷ್ಟ. ಬರೆಯುವುದೆಂದರೆ ಕಷ್ಟ . ಎಷ್ಟೋ ತಲೆಗೆ ಬಂದದ್ದನ್ನು ಗೀಚಿ ಆಮೇಲೆ ಹರಿದುಹಾಕಿದ್ದೇನೆ . ಈ ಎರಡು ಕವನಗಳೂ  ಅಷ್ಟೇ ಹತಾಶ ಮನೋಭಾವದಿಂದ ನಾನು ಹೊರಬರಲು ನನಗಾಗೆ ಬರೆದುಕೊಂಡದ್ದು .

Monday, November 26, 2012

ಡ್ರಾಮಾ:ಚಿತ್ರ ವಿಮರ್ಶೆ.

ಡ್ರಾಮಾ ಚಿತ್ರ ಬಂದಿದೆ.ನಿರ್ದೇಶಕ ಯೋಗರಾಜ್ ಭಟ್, ಅವರ ಹಿಂದಿನ ಚಿತ್ರಗಳು, ನಿರೀಕ್ಷೆಗಳನ್ನು ಬಿಟ್ಟು ಸುಮ್ಮನೆ ಕನ್ನಡ ಪ್ರೇಕ್ಷಕನಾಗಿ [ಅದು ಅತ್ಯವಶ್ಯ-ಯಾಕೆಂದರೆ ಭಟ್ಟರ ಸಿನೆಮಾದಲ್ಲಿ ಮಾತೆ ಬಂಡವಾಳ] ಸಿನಿಮಾಮಂದಿರದ ಒಳಹೊಕ್ಕರೆ ನಮಗೆ ಕಾಣಸಿಗುವುದು ಏನು ಎಂಬುದನ್ನು ಗಮನಿಸೋಣ. ಚಿತ್ರದ ಪ್ರಾರಂಭ ಅಂದರೆ ಟೈಟಲ್ ಕಾರ್ಡ್ ನಿಂದ ಹಿಡಿದು ಕೊನೆಯವರೆಗೆ ನಿರ್ದೇಶಕರು ಆಸಕ್ತಿ ವಹಿಸಿರುವುದು ಕಾಣಸಿಗುತ್ತದೆ. ಚಿತ್ರದಲ್ಲಿ ಇಬ್ಬರು ನಾಯಕರೂ ಮಹಾನ್ ತರಲೆಗಳು. ಉಡಾಫೆ ಮನೋಭಾವದವರು. ಪಿಯುಸಿಯಲ್ಲಿ ಆರು ಸಲ ಡುಮ್ಕಿ ಹೊಡೆದಿದ್ದಾರೆ. ಹಳ್ಳಿಯಲ್ಲಿ ಏನೆಲ್ಲಾ ತರಲೆ ಮಾಡಬಹುದೋ ಅಷ್ಟನ್ನು ಮಾಡಿಕೊಂಡಿದ್ದಾರೆ. ಅಲ್ಲಿಗೆ ಅಚಾನಕ್ಕಾಗಿ ಬರುವ ನಾಯಕಿ ಹುಡುಗರನ್ನು ನೋಡಿ ಕಬಡ್ಡಿ ಆಡಲು ಆಹ್ವಾನಿಸಿ, ಅದೇ ದೃಶ್ಯದಲ್ಲೇ ನಾಯಕನ ಮನಗೆದ್ದು 'ನಾನು ಬೇಕಿದ್ದರೆ ನನ್ನ ಹಿಂದೆ ಬಾ' ಎನ್ನುತ್ತಾಳೆ. ಇವನು ಗೆಳೆಯನನ್ನೂ ಕರೆದುಕೊಂಡು ಅಲ್ಲಿಂದ ಹೊರಟುಬಿಡುತ್ತಾನೆ. ಕಾಲೇಜು, ವಿಚಿತ್ರ ಪ್ರಾಂಶುಪಾಲರು, ಹುಡುಗ-ಹುಡುಗಿಯರ ಹಾಸ್ಟೆಲ್ಲು ಇದೆಲ್ಲದರ ಜೊತೆಗೆ ನಾಯಕಿಯ ತಂದೆ ಭೂಗತ ಜಗತ್ತಿನ ನಾಯಕ ಇಷ್ಟೆಲ್ಲಾ ಇದ್ದಮೇಲೆ ಒಂದು ಸಿನೆಮಾದ ಕಂಪ್ಲೀಟ್ ಪ್ಯಾಕೇಜ್ ರೆಡಿ ತಾನೇ? ಹೊಡೆದಾಟ, ಹಾಸ್ಯ, ಹಾಡುಗಳು ಕೊಲೆ ಸೆಂಟಿಮೆಂಟ್ ಎಲ್ಲದಕ್ಕೂ ಇಲ್ಲಿ ಸಾಕಷ್ಟು ಅವಕಾಶವಿದೆ. ಅದನ್ನೆಲ್ಲಾ ನಿರ್ದೇಶಕರು ಸಾಕಷ್ಟು ಸದುಪಯೋಗ ಪಡಿಸಿಕೊಂಡಿದ್ದಾರೆ ಎನ್ನಬಹುದು. ಹುಡುಗಿಯ ಮುತ್ತಿಗಾಗಿ, ಆ ಮೂಲಕ ಪ್ರೀತಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಾಗುವ ನಾಯಕ ಆ ಒಂದು ಘನಕಾರ್ಯದಿಂದಾಗಿ ಬಹುದೊಡ್ಡ ಸಮಸ್ಯೆಯೊಂದಕ್ಕೆ ಸಿಲುಕಿಕೊಳ್ಳುತ್ತಾನೆ. ಆದರೆ ಪ್ರೇಕ್ಷಕನಿಗೆ ಅಚ್ಚರಿಯಾಗುವಂತೆ ಬಹುಬೇಗ ಅದರಿಂದ ಹೊರಬಂದು ಮತ್ತೊಂದು ಸಮಸ್ಯೆಯಲ್ಲದ ಸಮಸ್ಯೆಗೆ ಸಿಲುಕಿಕೊಂಡ ನೆಪಹೇಳಿ ನಾಯಕಿಯೊಂದಿಗೆ ಗೆಳೆಯನನ್ನೂ ಆಕೆಯ ಗೆಳತಿಯನ್ನೂ ಕರೆದುಕೊಂಡು ಸಮುದ್ರ ತೀರಕ್ಕೆ ಹೋಗಿ ಹಾಡಿ ಕುಣಿದು ಅಲ್ಲೇ ಗೆಳೆಯನಿಗೆ ಬುದ್ಧಿಬರುವಂತೆ ಮಾಡಿ ಕ್ಲೈಮ್ಯಾಕ್ಸ್ ಕೂಡ ಮುಗಿಸುತ್ತಾನೆ. 
ಡ್ರಾಮಾ ಚಿತ್ರದಲ್ಲಿ ಕಥೆಯ ಎಳೆಯಷ್ಟೇ  ಇಲ್ಲ, ಗಟ್ಟಿಯಾದ ಹಲವಾರು ಕವಲುಗಳುಲ್ಲ ಕಥೆಯೇ ಇದೆ.ಅಲ್ಲಲ್ಲಿ  ಅಥವಾ ಅಗತ್ಯಕ್ಕಿಂತ ಹೆಚ್ಚಾಗಿಯೇ ಪಂಚಿಂಗ್ ಇರುವ ಸಂಭಾಷಣೆಗಳಿವೆ. ಚಂದನೆಯ, ಮಜಾ ಕೊಡುವ ಹಾಡುಗಳಿವೆ. ಕಚಗುಳಿಯಿಕ್ಕುವ ಹಾಸ್ಯದ ಸನ್ನಿವೇಶಗಳಿವೆ. ಆದರೆ ಬರೀ ಕಥೆಯಿದ್ದ ಮಾತ್ರಕ್ಕೆ ಅದು ಎಲ್ಲರಿಗೂ ಆಪ್ತವಾಗಬೇಕೆಂದೇನೂ ಇಲ್ಲವಲ್ಲ. ಇಲ್ಲೂ ಅದೇ ಆಗಿದೆ. ಇಬ್ಬರ ನಾಯಕರ ಉಡಾಫೆ ಕೊನೆಯವರೆಗೂ ಎಲ್ಲೂ ಒಂದು ತೂಕಕ್ಕೆ ಬರುವುದೇ ಇಲ್ಲ. ಪ್ರತಿ ಮಾತಿನಲ್ಲೂ ಉಡಾಫೆ ಮಾಡುತ್ತಾ , ಏನೇನೋ ಮಾಡುತ್ತಾ ಕಾಲ ಕಳೆಯುವವರು ಗಂಭೀರವಾದಾಗಲೂ  ಪ್ರೇಕ್ಷಕ ಮಾತ್ರ ಅನುಮಾನದಿಂದಲೇ ನೋಡುತ್ತಾನೆ. ಅಲ್ಲಿನ ಪಾತ್ರಗಳು ಅಳುವಾಗಲೂ, ಗಂಭೀರವಾಗಿ ಮಾತನಾಡುವಾಗಲೂ ನಮ್ಮದು ಅದೇ ನಿರೀಕ್ಷೆ. ಇಲ್ಲೇನಾದರೂ ಪಂಚಿಂಗ್ ಡೈಲಾಗ್ ಹೊಡಿಯಬಹುದಾ..? ಎಂಬುದು. ಅದಕ್ಕೆ ಕಾರಣ ನಿರ್ದೇಶಕರು. ನಮ್ಮನ್ನು ಅವರು ಹಾಗೆ ಮಾಡಿಬಿಟ್ಟಿದ್ದಾರೆ.  ಹಾಗಾಗಿಯೇ ಕೆಲವೊಂದು ಸನ್ನಿವೇಶಗಳು ಚೆನ್ನಾಗಿವೆಯಾದರೂ ತೀರ ಮನಸ್ಸಿಗೆ ತಟ್ಟುವುದಿಲ್ಲ. ಮಗಳು ಸುಖವಾಗಿರಲಿ ಎಂದು ಕೊನೆಯಲ್ಲಿ ತನ್ನನ್ನು ಕೊಂದುಕೊಂಡು  , ಎದುರಾಳಿಗಳನ್ನೂ ಸಾಯಿಸುವ ನಾಯಕಿಯ ಅಪ್ಪ ಗ್ರೇಟ್ ಎನಿಸುವುದಿಲ್ಲ. ಬಿಟ್ಟುಹೋದ ಹೆಂಡತಿಗಾಗಿ, ನೋಡೇ ಇರದ ಮಗಳಿಗೆ ಪರಿತಪಿಸುವ, ಕನ್ನಡದಲ್ಲೇ ಮಾತಾಡುವ ಪ್ರಾಂಶುಪಾಲ ಹುಚ್ಚನಂತೆ, ತಿಕ್ಕಲುನಂತೆ ಭಾಸವಾಗುವುದಕ್ಕೆ ಕಾರಣ ನಿರ್ದೇಶಕರೇ...ಇಲ್ಲಿನ ನಾಯಕಿ ತುಂಟಿಯಾ? ತಂದೆತಾಯಿ ಪ್ರೀತಿಯಿಂದ ವಂಚಿತ ಹುಡುಗಿಯಾ...? ಫ್ಲರ್ಟ್ ?.ಅಥವಾ ಈ ಎಲ್ಲವನ್ನೂ ಹೊಂದಿರುವ ಹೆಣ್ಣಾ ಎಂಬುದು ನಮಗೆ ಸ್ಪಷ್ಟವಾಗುವುದಿಲ್ಲ.
ಹಾಗಂತ ಡ್ರಾಮಾ ಕೆಟ್ಟ ಚಿತ್ರವಲ್ಲ. ನಾವು  ಅಂದರೆ ಪ್ರೇಕ್ಷಕರು ಇನ್ನೂ ಹೆಚ್ಚು ನಿರೀಕ್ಷಿಸುವುದಕ್ಕೆ ಕಾರಣವಿದೆ. ಅದೆಂದರೆ ನಿರ್ದೇಶಕ ಯೋಗರಾಜ್ ಭಟ್. ಅದ್ಯಾರೋ ಬೇರೆ ನಿರ್ದೇಶಕರು ಮಾಡಿದ್ದರೆ ಪರವಾಗಿಲ್ಲ ಎಂದು ಸುಮ್ಮನಿದ್ದುಬಿಡಬಹುದಿತ್ತು. ಆದರೆ ಮುಂಗಾರುಮಳೆಯ ನಂತರದ ಭಟ್ ಸಿನಿಮಾಗಳಿಗೆ  ಈಗಾಗಲೇ ಮೂರುಮೂರು ಸಾರಿ ಹಾಗೆ ಹೇಳಿ ಆಗಿದೆ. ಈ ಚಿತ್ರದಲ್ಲಿ ಏನೋ ಮಾಡುತ್ತಾರೆ ಎಂದು ಕಾದದ್ದೂ ಆಗಿದೆ. ಅದೂ ಭಟ್ಟರೇ ಕೊಟ್ಟಂತಹ ಭರವಸೆ. ಆದರೆ ಎರಡು ಉಡಾಫೆ ಹುಡುಗರ ಸರಳ ಕಥೆಯನ್ನೂ ನಿರೂಪಿಸುವುದಕ್ಕೆ ಭಟ್ ಬೇಕಾ..? ಚಿತ್ರದ ಎಲ್ಲಾ ಪಾತ್ರಗಳೂ ಅದೇ ಉಡಾಫೆಯಿಂದ ಮಾತಾಡಲೇ ಬೇಕಾ..? ಇವೆಲ್ಲಕ್ಕೂ ಭಟ್ರೇ ಉತ್ತರ ಹೇಳಬೇಕು. ಆಯಾ ದೃಶ್ಯಕ್ಕೆ ನಗೆತರಿಸಲು ಎಷ್ಟು ಬೇಕೋ ಅಷ್ಟನ್ನೇ ಮಾಡಿರುವ ಭಟ್ಟರು ಅದರಿಂದಾಚೆಗೆ ಯೋಚಿಸಿಲ್ಲವೇನೋ..? ಹಾಗಾಗಿಯೇ ಕೆಲವು ಪಾತ್ರಗಳು ಪೇಲವ ಎನಿಸುತ್ತವೆ. ಎಲ್ಲೋ ಬಂದು ಹೇಗೋ ಆಡಿ ಹೊರಟುಹೋಗುತ್ತವೆ. ದ್ವಿತೀಯ ನಾಯಕನ ನಾಯಕಿ ಮೂಕಿಯ ಪಾತ್ರವೂ ಅಷ್ಟೇ. ಅವರ ಪ್ರೀತಿಯೂ ಅಷ್ಟೇ. ಕಾಡುವುದಿಲ್ಲ.ಹಾಗೆ ನಾಯಕಿ ರಾಧಿಕಾಪಂಡಿತ್  ಪಾತ್ರವೇ ಜಾಳುಜಾಳಾದ್ದರಿಂದ ಅವರ ಪ್ರೀತಿ ಅಷ್ಟೊಂದು ಗಾಢ ಎನಿಸುವುದಿಲ್ಲ.
ಸಿನಿಮಾ ನೋಡಿದ ಮೇಲೆ ನನಗನಿಸಿದ್ದು ಈ ಅಂಶಗಳು. ಅತೀ ಹೆಚ್ಚು ನಿರೀಕ್ಷೆಯಲ್ಲಿದ್ದುದರಿಂದ ನನಗೆ ಹೀಗನ್ನಿಸಿತಾ..? ನಾನೇ ಪೂರ್ವಗ್ರಹ ಪೀಡಿತನಾಗಿದ್ದೆನಾ ..?ಎಂದು ನನ್ನನ್ನೇ ಹಲವಾರು ಸಾರಿ ಕೇಳಿಕೊಂಡೆ. ಆಮೇಲೆ ಚಿತ್ರ ಮುಗಿಸಿ ಹೊರಬಂದ ಮೂರ್ನಾಲ್ಕು ಅಪರಿಚಿತರಲ್ಲಿ  ಸುಮ್ಮನೆ ಸಿನಿಮಾದ ಬಗ್ಗೆ ವಿಚಾರಿಸಿದೆ. ಯಾರಲ್ಲೂ ಅದೊಂದು ತೃಪ್ತಿಯ ಭಾವ ಇರಲಿಲ್ಲ. ಇನ್ನೂ ಏನೋ  ಇರಬೇಕಿತ್ತು..ಇನ್ನೇನೋ ಕಡಿಮೆಯಾಗಿದೆ ಎನ್ನುವ ಭಾವವೇ ಅವರಲ್ಲೂ ಇದ್ದದ್ದರಿಂದ ನನ್ನ ಅನಿಸಿಕೆಯೂ ಸರಿ ಎನಿಸಿತ್ತು.
ಭಟ್ರ  ಹಿಂದಿನ ಸಿನೆಮಾಗಳಲ್ಲಿ ಕಥೆ ಇರಲಿಲ್ಲವೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನನ್ನ ಮುಂದಿನ ಚಿತ್ರದಲ್ಲಿ ಕಥೆಯಿಟ್ಟುಕೊಂಡೆ ಸಿನೆಮಾ ಮಾಡುತ್ತೇನೆಂದು ಭಟ್ ಭರವಸೆ ನೀಡಿದ್ದರು. ಮತ್ತದನ್ನು ಈಗ ಉಳಿಸಿಕೊಂಡಿದ್ದಾರೆ. ಈಗಲೂ ಅಷ್ಟೇ! ಇನ್ನೂ ಏನೇನು ಕೊರತೆ ಇದೆ ಎಂಬುದನ್ನು ಪಟ್ಟಿಮಾಡಿ ಭಟ್ಟರ ಮುಂದಿಟ್ಟರೆ ಮುಂದಿನ ಚಿತ್ರದಲ್ಲಿ ಆ ಎಲ್ಲ ಕೊರತೆ ನೀಗಿಸುತ್ತಾರೆಂಬ ತುಂಬು ಭರವಸೆಯಿಟ್ಟುಕೊಂಡು ನನ್ನ ಚಿತ್ರಾವಲೋಕನಕ್ಕೆ  ಪೂರ್ಣವಿರಾಮ ಇಡುತ್ತಿದ್ದೇನೆ.
[ಈ ಎಲ್ಲಾ ಅಭಿಪ್ರಾಯಗಳೂ ನನ್ನ ವೈಯಕ್ತಿಕವಾದವುಗಳಾಗಿವೆ. ನಾನೊಬ್ಬ ಪಕ್ಕಾ ಪ್ರೇಕ್ಷಕನಾಗಿ ಅನಿಸಿದ್ದನ್ನು ಅನಿಸಿದ ಹಾಗೆ ಬರೆದುಕೊಂಡಿದ್ದಾಗಿದೆ..]