Monday, November 25, 2013

ಜಟ್ಟ ಚಿತ್ರ ಸಂವಾದ...

ನಿನ್ನೆ ಸಂವಾದ ಡಾಟ್ ಕಾಂ ಆಯೋಜಿಸಿದ್ದ ಜಟ್ಟ ಚಿತ್ರದ ಪ್ರದರ್ಶನ ಮತ್ತು ಸಂವಾದಕ್ಕೆ ಹೋಗಿದ್ದೆ. ನಾನು ಅಷ್ಟಾಗಿ ಸಂವಾದಗಳಿಗೆ ಹೋಗುವುದಿಲ್ಲ. ಹೋಗುವುದಿಲ್ಲ ಎನ್ನುವುದಕ್ಕಿಂತ ಹೋಗುವುದಕ್ಕೆ ಅವಕಾಶಗಳು ಅಷ್ಟಾಗಿ ಕೂಡಿ ಬರುವುದಿಲ್ಲ. ಆದರೂ ಈ ಭಾನುವಾರ ಆ ತರಹ ಮಾಡುವುದಕ್ಕೆ ಕೆಲಸಗಳೇನೂ ಇಲ್ಲದ್ದರಿಂದ ಜಟ್ಟ ಸಂವಾದಕ್ಕೆ ಹೋಗಿದ್ದೆ. ಮೊದಲಿಗೆ ಜಟ್ಟ ಚಿತ್ರದ ಪ್ರದರ್ಶನವಿತ್ತು. ನಾನು ಜಟ್ಟ ಚಿತ್ರವನ್ನು ಬಿಡುಗಡೆಯ ದಿನವೇ ನೋಡಿದ್ದೆನಾದರೂ ಮತ್ತೊಮ್ಮೆ ನೋಡಲು ಕುಳಿತುಕೊಂಡೆ. ತುಂಬಾ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಇಷ್ಟವಾಯಿತು.
ಜಟ್ಟ ಒಂದು ಒಳ್ಳೆಯ ಕಥೆಯಿರುವ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೇವಲ ಮೂರೇ ಪಾತ್ರಗಳಲ್ಲಿ ಒಂದಿಡೀ ಸಮಾಜದ ಮುಖಗಳನ್ನು ತೋರಿಸಲು ಪ್ರಯತ್ನಿಸಿರುವ ಗಿರಿರಾಜ್ ನಿಜಕ್ಕೂ ಅಭಿನಂದನಾರ್ಹರು. ಹಾಗಂತ ಚಿತ್ರದಲ್ಲಿ ಋಣಾತ್ಮಕ ಅಂಶಗಳು ಇಲ್ಲವೇ ಇಲ್ಲ ಅಂತಲ್ಲ. ಋಣಾತ್ಮಕ ಅಂಶಗಳಿರದ ಸಿನೆಮಾ ಇಡೀ ಚಿತ್ರಜಗತ್ತಿನಲ್ಲಿಯೇ ಇನ್ನೂ ಬಂದಿಲ್ಲವೇನೋ...ಸಂವಾದದಲ್ಲಿ ಕೆಲವು ಪ್ರಶ್ನೆಗಳು ಉದ್ಭವವಾದವು.ಸ್ತ್ರೀವಾದ ಎಂಬುದು ಬರೀ ಪುರುಷದ್ವೇಷವಾ...ಅದನ್ಯಾಕೆ ಹಾಗೆ ಬಿಂಬಿಸಿದ್ದೀರಿ..ಚಿತ್ರವನ್ನು ಇನ್ನೂ ಪರಿಣಾಮಕಾರಿಯಾಗಿ ತೆಗೆಯಬಹುದಿತ್ತು..ಮಾತುಗಳು, ಭಾಷಣಗಳು ಜಾಸ್ತಿಯಾಯಿತು..ಸಿನಿಮಾ ಒಂದು ದೃಶ್ಯ ಮಾಧ್ಯಮ ಹಾಗಾಗಿ ವಾಚ್ಯ ಮಾಡಿದ್ದು ಸರಿ ಕಾಣಲಿಲ್ಲ...ಹೀಗೆ.
ಪುರುಷ ದ್ವೇಷ, ಸ್ತ್ರೀ ವಾದ , ರಾಜಕೀಯ ..ಹೀಗೆ ಮುಂತಾದವುಗಳನ್ನು ಅಷ್ಟು ಸುಲಭವಾಗಿ ಒಂದು ಸಿನೆಮಾದಲ್ಲಿ ಸಂಪೂರ್ಣವಾಗಿ ಅಳವಡಿಸಿ ಅದನ್ನು ತೋರಿಸಿ ಎಲ್ಲರಿಂದಲೂ ಸೈ ಎನಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಥವಾ ತುಂಬಾ ಆಳವಾಗಿ ಇಂತಹ ವಿಷಯಗಳನ್ನು ಅದ್ಯಯನ ಮಾಡಿ ಅದನ್ನು ಕಥಾ ಚಿತ್ರವನ್ನಾಗಿ ಮಾಡಲು ಸಾಧ್ಯವಿಲ್ಲ ಅಥವಾ ಕಷ್ಟ ಸಾಧ್ಯ.ಹಾಗೂ ಹೀಗೂ ಮಾಡಿದರೆ ಅದೊಂದು ಸಾಕ್ಷ್ಯ ಚಿತ್ರವಾಗಬಹುದೇನೋ?ಅಥವಾ ಬೋರಿಂಗ್ ಅನಿಸಬಹುದಾ..? ಮತ್ತು ಅದೆಲ್ಲವನ್ನೂ ಒಂದು ಪಾತ್ರದ ಮೂಲಕ ವ್ಯಕ್ತ ಪಡಿಸುವುದು ಕಷ್ಟ ಸಾಧ್ಯ. ಹಾಗಾಗಿ ಒಂದಂಶವನ್ನು ರೂಪಿಸಬಹುದೇನೋ? ಹಾಗೆಯೇ ಸಿನೆಮಾ ದೃಶ್ಯ ಮಾಧ್ಯಮವೇ. ನಾವೆಲ್ಲಾ ಮುಂಗಾರು ಮಳೆ ಬಂದಾಗ ವಾಚ್ಯ ಎಂದುಕೊಳ್ಳಲಿಲ್ಲ. ಅಲ್ಲಿನ ಪ್ರತಿ ಮಾತುಗಳನ್ನೂ ಕೇಳಿ ಮಜಾ ಮಾಡಿದೆವು. ಅನುಕರಿಸಿದೆವು. ಹಾಗೆಯೇ ಕೆಲವು ಸಿನಿಮಾಗಳನ್ನು ನೋಡುವಾಗ ಮಾತಾಡದೆ ತಡಕಾಡುತ್ತಿದ್ದಾಗ[ಭಾವ ವ್ಯಕ್ತ ಪಡಿಸುತ್ತಿದ್ದಾಗ] ಗುರು ಅದೇನು ಹೇಳಬೇಕೆಂದುಕೊಂಡಿದ್ದೀಯೋ ಹೇಳಪ್ಪಾ ಮಾರಾಯ ಅಂತ ಕೂಗಿದ್ದೂ ಇದೆ. ಹಾಗಾಗಿ ಕೇಳುವಷ್ಟು ಚೆನ್ನಾಗಿದ್ದಾಗ ಹೇಳುವ ಮಾತುಗಳು ನಮ್ಮದೂ ಮಾತುಗಳಾದಾಗ ಬಹುಶಃ ವಾಚ್ಯ ಎನಿಸುವುದಿಲ್ಲವೇನೋ..ಎದ್ದೇಳು ಮಂಜುನಾಥನನ್ನು ಇಷ್ಟಪಟ್ಟರೂ ಡೈರೆಕ್ಟರ್'ಸ್ ಸ್ಪೆಷಲ್ ಬೋರಾದದ್ದು, ಮಾತೆ ಆಡದ ಬರ್ಫೀ ಕಥೆ ಇಷ್ಟವಾದದ್ದು ಆರ್ಟಿಸ್ಟ್ ಸಿನೆಮಾ ಖುಷಿ ಕೊಟ್ಟದ್ದು .. ರಾಜಕುಮಾರ್ ಅವರ ಸುಲಲಿತ ಕನ್ನಡ ಮಾತುಗಳು, ಉಪೇಂದ್ರರ ಒರಟು ಮಾತುಗಳು, ರವಿಚಂದ್ರನ್ ಉಡಾಫೆ ಮಾತುಗಳು, ಗಣೇಶ್ ರ ಉದ್ದುದ್ದನೆಯ ಮಾತುಗಳು, ಸಾಯಿಕುಮಾರ್ ಅವರ ಬೈಗುಳದಂತಹ ಭಾಷಣಗಳು..ಹೀಗೆ. ಮಾತುಗಳು ಸಿನಿಮಾದ ಒಂದು ಪ್ರಮುಖ ಭಾಗವೇ..ಹೀಗೆ. ಸಿನಿಮಾದಲ್ಲಿ ಎಲ್ಲವೂ ಬೇಕು. ಹಾಡೇ ಇಲ್ಲದೆ ನೋಡಿಸಿಕೊಳ್ಳುವ ನಿಷ್ಕರ್ಷ, ಪೋಲಿಸ್ ಸ್ಟೋರಿ, ನಾಯಿನೆರಳು, ಹಾಡುಗಳಿಲ್ಲದ ಹಾಗೆ ಕಲ್ಪಿಸಿಕೊಳ್ಳಲಾಗದ ಮೈನೆ ಪ್ಯಾರ್ ಕಿಯಾ, ಹಂ ಆಪ್ಕೆ ಹಾಯ್ ಕೌನ್, ಡಿಡಿಎಲ್ ಜೆ, ಮುಂಗಾರುಮಳೆ,...ಹೀಗೆ. ಇಷ್ಟೆಲ್ಲಾ ಮಾತಾಡಿದ ಮೇಲೂ ನಮಗನಿಸುವುದು ಸಿನೆಮಾದ ಅಂಶಗಳಲ್ಲಿ ಎಲ್ಲವೂ ಬೇಕು. ಅದೆಲ್ಲವೂ ಕಥೆಗೆ ಕಥೆಯಲ್ಲಿನ ಪಾತ್ರಕ್ಕೆ ಪೂರಕವಾಗಿರಬೇಕು ಎನ್ನುವುದು.
ಜಟ್ಟ ಚಿತ್ರದಲ್ಲಿನ ಪಾತ್ರಗಳು ಅವುಗಳ ಹಿನ್ನೆಲೆಗೆ ತಕ್ಕಂತೆ ವರ್ತಿಸುತ್ತವೆ. ಮತ್ತದು ಸರಿಯಾಗಿದೆಯಾ..? ಪರಿಪೂರ್ಣವಾ..ಅಂತಹ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ಒಟ್ಟಾರೆ ಸಿನಿಮಾದ ಆಶಯ ಪೂರ್ಣವಾಗಿದೆಯಾ..? ಕಥೆಗೆ ತಕ್ಕಂತಹ ಗತಿ ಇದೆಯಾ...ಎನ್ನುವ ಅಂಶಗಳನ್ನು ಗಮನಿಸಬೇಕೆನೋ? ಆ ನಿಟ್ಟಿನಲ್ಲಿ ಗಿರಿರಾಜ್ ಅಭಿನಂದನಾರ್ಹರು.
ನಾನು ಎಲ್ಲಾ ಸಿನಿಮಾಕ್ಕೂ ಖಾಲಿ ತಲೆಯಲ್ಲಿಯೇ ಹೋಗುತ್ತೇನೆ. ನಿರ್ದೇಶಕ ಯಾರಾದರೆ ನನಗೇನು..ನನಗೇನು ದುಡ್ಡು ಕೊಟ್ಟಿದ್ದಾನಾ ಸಿನೆಮಾ ನೋಡಲಿಕ್ಕೆ ನನ್ನ ಸಮಯ ನನ್ನ ದುಡ್ಡು..ಅವನ ಬಗ್ಗೆ ನಾನ್ಯಾಕೆ ಯೋಚನೆ ಮಾಡಲಿ.. ಎನ್ನುವ ಜಾಯಮಾನದಿಂದ ಪೂರ್ವಗ್ರಹಪೀಡಿತನಾಗದೆ ಸಿನಿಮಾ ನೋಡುತ್ತೇನೆ. ಚೆನ್ನಾಗಿದ್ದರೆ ಖುಷಿ.
ಮೊನ್ನೆ ಕಲರ್ಸ್ ಇನ್ ಬ್ಯಾಂಗಲೋರ್ ಎನ್ನುವ ಸಿನಿಮಾಕೆ ಸಪ್ನಾ ಚಿತ್ರ ಮಂದಿರಕ್ಕೆ ಹೋಗಿದ್ದೆ. ನಿಜಕ್ಕೂ ಆ ನಿರ್ದೇಶಕನನ್ನು ಕಂಡು ಒಮ್ಮೆ ಮಾತಾಡಿಸಬೇಕು ಎನಿಸಿತು. ಅಥವಾ ಈ ತರಹದ ಒಂದು ಸಂವಾದ ಇಟ್ಟುಕೊಂಡು ಆ ಸಿನಿಮಾ ಹಾಕಿ ಅವರ ಜೊತೆ ಚರ್ಚಿಸಬೇಕು ಎನಿಸಿತು. ಅದೇಗೆ ಈ ರೀತಿ ಸಿನಿಮಾ ಮಾಡಲು ಸಾಧ್ಯ ಎಂದು ಕೇಳಬೇಕು. ಅದೇಗೆ ಕಥೆ ಬರೆದಿರಿ, ಅದ್ಯಾಕೆ ಹಾಗೆ ನಟಿಸಲು ಬಿಟ್ಟಿರಿ, ಅದ್ಯಾರು ನಿಮ್ಮನ್ನು ಸಿನಿಮಾ ಮಾಡಲು ಪ್ರೇರೇಪಿಸಿದವರು ಮತ್ತು ಆ ಕಥೆ[?]ಯನ್ನು ಯಾಕೆ ನಮ್ಮೆಲ್ಲರ ಮುಂದಿಡಬೇಕು ಎಂದು ಕೇಳಬೇಕು ಎನಿಸಿಬಿಟ್ಟಿದೆ.
ಚಿತ್ರದಲ್ಲಿ ಒಂದು ಪಾತ್ರವನ್ನು ಪರಿಚಯಿಸುತ್ತಾ ನಿರೂಪಕ ಇವನನ್ನು ಸಾಮಾನ್ಯ ಅಂದುಕೊಳ್ಳಬೇಡಿ ..ನಮ್ಮ ಕಥೆಗೆ ತಿರುವು ಕೊಡುವವನು ಇವನೇ ಅನ್ನುತ್ತಾನೆ..ಆನಂತರ ಆ ಚಿತ್ರದಲ್ಲಿ ತಿರುವೂ ಬರುವುದಿಲ್ಲ, ಆ ಪಾತ್ರವೂ ಬರುವುದಿಲ್ಲ.. ಈ ತರಹದ್ದೇ ದೃಶ್ಯಗಳು ಇಡೀ ಸಿನೆಮಾದ ತುಂಬ ತು೦ಬಿವೆ. ಒಂದು ಒಳ್ಳೆಯ ಸಿನಿಮಾ ಅಲ್ಲ..ಎಂದು ಬಿಟ್ಟುಬಿಡಬಹುದೇನೋ..ಒಳ್ಳೆಯದೋ ಕೆಟ್ಟದ್ದೋ ಸಿನಿಮಾ ಮಾಡಲು ಲಕ್ಷಾಂತರ ಹಣವಂತೂ ಖರ್ಚಾಗಿರುತ್ತದೆ. ಸ್ವಲ್ಪ ತಲೆ ಓಡಿಸಿದರೆ ಕೊನೆಗೆ ಒಂದುವಿಭಾಗದ ಜನರಾದರೂ ನೋಡುವಂತೆ ಮಾಡಬಹುದಲ್ಲಾ ಎನಿಸಿತು.ಅದನ್ನು ಸುಮ್ಮನೆ ಕುಳಿತು ಹೀಗೆಯೇ ಮಾಡೋಣ..ಹುಚ್ಚುಚ್ಚಾಗಿ ಮಾಡೋಣ ಎಂದರೂ ಮಾಡಲು ಸಾಧ್ಯವೇ ಇಲ್ಲ..ಅದೇಗೆ ಸಾಧ್ಯವಾಯಿತು ಎನ್ನುವ ಮಾತನ್ನು ಒಮ್ಮೆ ನಿರ್ದೇಶಕರಿಗೆ ಕೇಳಬೇಕು..ಅಲ್ಲವೇ?
ಸುಮ್ಮನೆ ಆ ಚಿತ್ರದ ವಿಮರ್ಶೆ ಓದಬೇಕೆನಿಸಿದರೆ ಇಲ್ಲಿದೆ ನೋಡಿ: ಕಲರ್ಸ್ ಇನ್ ಬೆಂಗಳೂರು ಚಿತ್ರ ವಿಮರ್ಶೆ
 

Sunday, November 24, 2013

ಬನ್ಸಾಲಿಯ ಲೋಕಕ್ಕೆ ಮಾರುಹೋಗುತ್ತಾ...?

ಸಂಜಯ ಲೀಲಾ ಬನ್ಸಾಲಿಯವರ ರೋಮಿಯೋ ಜೂಲಿಯೆಟ್ ನಾಟಕ ಆಧಾರಿತ ರಾಮ್ ಲೀಲಾ ಕಥೆಯ ವಿಷಯದಲ್ಲಿ ಬರಹದ ವಿಷಯದಲ್ಲಿ ಅದ್ಭುತ ಚಿತ್ರವಲ್ಲ. ಆದರೆ ದೃಶ್ಯ ರಚನೆಯ ವಿಷಯದಲ್ಲಿ ಒಂದೇ ಮಾತು 'ಅದ್ಭುತ.
ರಾಮ್ ಲೀಲಾ ಚಿತ್ರವನ್ನು ವಿಮರ್ಶೆ ಮಾಡುವುದಾಗುವುದಿಲ್ಲ.ಅಥವಾ ಆ ಪದ ಸರಿಯಾದ ಬಳಕೆ ಎನಿಸುವುದಿಲ್ಲ. ಬದಲಿಕೆ ವರ್ಣನೆ ಮಾಡಬಹುದು.ಅಂತಹ ಊರು, ಅಂತಹ ಜನರು ಅಂತಹ ಸಂಸ್ಕೃತಿ ..ನಮ್ಮದೇ ಸ್ಲಮ್ ಅಥವಾ ಚಿಕ್ಕದಾದ ಊರು ಅಂದುಕೊಳ್ಳಿ.ಬಂದೂಕುಗಳನ್ನು ಮಾರುವ ಊರದು.ಬಂದೂಕುಗಳನ್ನು ಮಾರಲು ಅಲ್ಲಿನ ಜನರಿಗೆ ಮುಕ್ತ ಅವಕಾಶವಿದೆ. ಅಲ್ಲಿಯ ಜನರಿಗೆ ಬಂದೂಕು ಎಂದರೆ ಆಟದ ಸಾಮಾನು. ಗುಂಡುಗಳು ಎಂದರೇ ಹುಣಸೇ ಬೀಜಕ್ಕಿಂತ ಕಡೆ.ಮಾತೆತ್ತಿದರೆ ಆಕಾಶಕ್ಕೆ ಗುಂಡು ಹಾರಿಸಿ ಮಜಾ ತೆಗೆದುಕೊಳ್ಳುವ ಜನರವರು.ಅವನು ರಾಮ್. ಸರಸಿ, ಶೋಕಿಲಾಲ..ರಸಿಕ ಸಾಹಸಿ. ನೋಡಲು ಸ್ಫುರದ್ರೂಪಿ. ಅವಳು ಲೀಲಾ. ತ್ರಿಪುರ ಸುಂದರಿ. ಅವರಿಬ್ಬರ ಪ್ರೀತಿಗೆ ತಡೆಗೋಡೆ ಎಂದರೆ ಜಾತಿ. ಆ ಜಾತಿಯವರದೊಂದು ಕೋಮು..ಇವರದೊಂದು ಕೋಮು.. ಮುಂದೆ ಗೋಲಿಯೋಂಕ ರಾಸಲೀಲೆ..
ಚಿತ್ರದ ಪ್ರಾರಂಭದಲ್ಲೇ ಇದು ರೋಮಿಯೋ ಜೂಲಿಯೆಟ್ ಕಥೆಯಾಧಾರಿತ ಎನ್ನುವುದನ್ನು ಬನ್ಸಾಲಿ ಅನಾವರಣ ಮಾಡಿಬಿಡುವುದರಿಂದ ಚಿತ್ರದ ಅಂತ್ಯದ ಬಗ್ಗೆ ನೋಡುಗನಿಗೆ ಕುತೂಹಲವೇನೂ ಉಳಿಯದು.ಹಾಗಾಗಿಯೇ ಕಥೆಯ ವಿಷಯದಲ್ಲಿ ವಿಶೇಷ, ಅಚ್ಚರಿ ಹೊಸತನ ಯಾವುದೂ ಇಲ್ಲ. ಆದರೆ ಚಿತ್ರೀಕರಣದ ಶ್ರೀಮಂತಿಕೆಯ ವಿಷಯದಲ್ಲಿ ನಿರೂಪಣೆಯ ಸೊಗಸಿನಲ್ಲಿ ಬನ್ಸಾಲಿಯನ್ನು ಮೆಚ್ಚದೇ ಬೇರೆ ದಾರಿಯೇ ಇಲ್ಲ.ಕಲಾವಿದನ ಕಲಾಕೃತಿಯ ರೀತಿಯಲ್ಲಿ ಪ್ರತಿಯೊಂದು ದೃಶಿಕೆಯನ್ನು ಸಂಯೋಜಿಸಿರುವ ಶೈಲಿ ನೋಡಲು ಖುಷಿ ಕೊಡುತ್ತದೆ.
ನೂರಾರು ಕೋಟಿ ವೆಚ್ಚಗಳನ್ನು ವಿದೇಶದಲ್ಲಿನ ಚಿತ್ರೀಕರಣಕ್ಕೆ ಹೆಲಿಕ್ಯಾಪ್ಟರ್ , ಕಾರುಗಳನ್ನು ಉಡಾಯಿಸುವುದಕ್ಕೆ ವೆಚ್ಚ ಮಾಡಿ ಶ್ರೀಮಂತಿಕೆ ಸಿನಿಮಾ ಎನ್ನಬಹುದು. ಹಾಗೆಯೇ ವಿ ಎಫ್ ಎಕ್ಸ್ ಅಥವಾ ಕಲ್ಪಿತ ದೃಶ್ಯ ವೈಭವಕ್ಕೆ ಖರ್ಚು ಮಾಡಿಬಿಡಬಹುದು. ಆದರೆ ಅದ್ಯಾವುದಕ್ಕೂ ಅಲ್ಲದೆ ಬೇರೆಯ ಲೋಕಕ್ಕೆ ಕರೆದೊಯ್ಯುವ ರೀತಿಗೆ ಖರ್ಚು ಮಾಡುವುದನ್ನು ಬನ್ಸಾಲಿ ನೋಡಿಯೇ ಕಲಿಯಬೇಕು.
ಸಿನಿಪ್ರಿಯರು, ಚಿತ್ರಕರ್ಮಿಗಳು ಮತ್ತು ಪ್ರೇಕ್ಷಕರು ಚಿತ್ರಣದ ಸೊಗಸಿಗೆ ನೋಡಲೇ ಬೇಕಾದ ಚಿತ್ರ ರಾಮ್ ಲೀಲಾ.