Sunday, December 21, 2014

ಪಿಕೆ

ಚಿತ್ರ ಪ್ರಾರಂಭವಾಗುತ್ತದೆ. ಒಂದು ಹಾರುವ ತಟ್ಟೆ ಬಂದು ನಿಲ್ಲುತ್ತದೆ. ಅದರಿಂದ ಆಮೀರ್ ಖಾನ್ ನಗ್ನವಾಗಿ ಕೆಳಗಿಳಿಯುತ್ತಾರೆ. ಅನ್ಯಗ್ರಹವಾಸಿಯಾದ ಆಮೀರ್ ಯಾನೆ ಪಿಕೆಗೆ ಏನು ಮಾಡುವುದು ಎಂಬುದು ತಿಳಿಯುವದಿಲ್ಲ. ಅಷ್ಟರಲ್ಲಿ ವ್ಯಕ್ತಿಯೊಬ್ಬ ಆಮೀರ್ ಖಾನ್ ತನ್ನ ಗ್ರಹಕ್ಕೆ ವಾಪಸ್ಸಾಗಳು ಅಗತ್ಯವಿದ್ದ ಕೊರಳಿನ ಸರ ಕಿತ್ತು ಓಡಿಬಿಡುತ್ತಾನೆ. ಭೂಮಿಯ ಮೇಲಿನ ವಿಷಯಗಳ ಬಗ್ಗೆ ಕಿಂಚಿತ್ತೂ ಅರಿವಿರದ ಪಿಕೆ ಒಂದೊಂದಾಗಿ ತಿಳಿದುಕೊಳ್ಳುತ್ತಾ ಸಾಗುತ್ತಾನೆ. ಮನುಷ್ಯರೇ ಮಾಡಿದ ವಿಷಯಗಳಿಗೆ ಪ್ರಶ್ನೆ ಹಾಕುತ್ತಾ ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯತ್ನಿಸುತ್ತಾನೆ.
ಹಿರಾನಿ ಅವರ ಕತೆಯ ಚಿತ್ರಕತೆಯ ಬಗೆಗೆ ಏನನ್ನೂ ಹೊಸದು ಹೇಳುವ ಹಾಗಿಲ್ಲ. ಯಾಕೆಂದರೆ ಒಂದು ವಿಷಯವನ್ನು ಹಾಸ್ಯ ಮಿಶ್ರಿತವಾಗಿ ಹೇಳುವಲ್ಲಿ ಹಿರಾನಿ ಅವರನ್ನು ಸರಗಟ್ಟುವವವರು ಚಿತ್ರರಂಗದಲ್ಲಿ ಕಡಿಮೆಯೇ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಯಾವುದನ್ನೇ ಆಗಲಿ ಕನ್ವಿನ್ಸ್ ಮಾಡುವ ಅವರ ನಿರೂಪಣೆಗೆ ಮಾರುಹೋಗದೆ ಇರಲಾರದು.
ಪಿಕೆ ಪ್ರಸ್ತುತ ಜಗತ್ತಿಗೆ ಬೇಕಾದ ಚಿತ್ರ. ಪ್ರೇಕ್ಷಕರಿಗೆ ಮಾತ್ರವಲ್ಲ. ಚಿತ್ರಕರ್ಮಿಗಳಿಗೂ. ಮೊದಲಿಗೆ ಪ್ರೇಕ್ಷಕರ ವಿಷಯಕ್ಕೆ ಬಂದರೆ ಪಿಕೆ ಈವತ್ತಿನ ದೇವರು ಅಸ್ತಿತ್ವದ ಬಗೆಗಿನ ಚಿತ್ರ. ಸೂಕ್ಷ್ಮವಾಗಿ ನೋಡಿದರೆ ದೇವರ ಅಸ್ತಿತ್ವಕ್ಕಿಂತ ಆತನ ಅಸ್ತಿತ್ವದ ಬಗೆಗೆ ಮಾನವನಿಗಿರುವ ನಂಬಿಕೆ ಅಪನಂಬಿಕೆ ಮೂಢ ನಂಬಿಕೆ ಮುಂತಾದವುಗಳನ್ನು ಪ್ರಶ್ನಿಸುವ ಚಿತ್ರ. ದೇವರಿದ್ದಾನೆ ಇಲ್ಲ, ಎನ್ನುವುದು ಇಲ್ಲಿನ ವಿಷಯವಲ್ಲ. ದೇವರು ಮಾನವರ ಅಂದರೆ ನಮ್ಮಗಳ ಜೊತೆ ಹೇಗಿದ್ದಾನೆ ಎಂಬುದು ಪ್ರಶ್ನೆ. ಅಥವಾ ನಾವುಗಳು ದೇವರನ್ನು ಹೇಗೆ ಇಟ್ಟುಕೊಂಡಿದ್ದೇವೆ ಎಂಬುದನ್ನು ಹಾಸ್ಯ ಮಿಶ್ರಿತವಾಗಿ ಹಾಗೆಯೇ ಚಿಂತಾನಾತ್ಮಕವಾಗಿ ತೆರೆಯ ಮೇಲೆ ತರುವ ಮತ್ತು ಅದನ್ನು ಒಪ್ಪಿಸುವ ಕೆಲಸ ಸುಲಭವಲ್ಲ. ಹಿರಾನಿ ಆ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕ ಚಿಕ್ಕ ಪ್ರಸಂಗಗಳು, ಅದರಲ್ಲಿ ನಗೆಯುಕ್ಕಿಸುವ ಪರಿ, ವಿಡಂಬನೆ, ಅಲ್ಲಲ್ಲಿ ಬರುವ ಭಾವನಾತ್ಮಕ ಸನ್ನಿವೇಶ ಹೀಗೆ ಚಿತ್ರ ಸಾಗುತ್ತಾ ಸಾಗುತ್ತಾ ಪ್ರೇಕ್ಷಕ ಅತ್ತಿತ್ತ  ಆತನ ಗಮನ ಬೇರೆಡೆಗೆ ಹರಿಯದಂತೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಹಾಗಾಗಿ ಚಿತ್ರಕತೆ ಬರೆದ ಹಿರಾನಿ ತಂಡಕ್ಕೆ ನಮನ ಹೇಳಲೇಬೇಕಾಗುತ್ತದೆ.
ಇನ್ನು ಚಿತ್ರಕರ್ಮಿಗಳು ಅಥವಾ ಯುವ ಪೀಳಿಗೆಯ ನಿರ್ದೇಶಕರು ಹಿರಾನಿ ಅವರಿಗೆ ಸಲಾಮು ಹೊಡೆಯುವುದರ ಜೊತೆಗೆ ಅವರನ್ನು ಅನುಕರಿಸಬಹುದು. ಯಾಕೆಂದರೆ ಯಶಸ್ಸು ಗುಣಮಟ್ಟ ಎರಡನ್ನೂ ತಮ್ಮ ಸಿನಿಮಾದಲ್ಲಿ ಸಾಧ್ಯ ಎಂಬುದನ್ನು ಸಾಧಿಸಿತೋರಿಸಿರುವ ಹಿರಾನಿ ಅವರ ಚಿತ್ರ ಇತಿಹಾಸವನ್ನು ಗಮನಿಸಿದರೆ ಅವರು ತೆಗಯುಕೊಳ್ಳುವ ವಸ್ತು ಗಿಂತ ಅವರ ಚಿತ್ರಕತೆಯ ತಾಕತ್ತು ಮತ್ತು ದೃಶ್ಯ ರಚನೆ ತಾಕತ್ತು ದೊಡ್ಡದು ಎನಿಸುತ್ತದೆ. ಹಾಗಾಗಿ ಸಮಯ ತೆಗೆದುಕೊಂಡು ಸಿನಿಮಾ ಮಾಡುವ ಹಿರಾನಿ ಆ ಸಮಯವನ್ನು ಒಂದು ಕ್ಷಣವೂ ವ್ಯರ್ಥ ಮಾಡಿಲ್ಲ ಎನಿಸುವುದು ಅವರ ಚಿತ್ರಗಳನ್ನು ನೋಡಿದ ಮೇಲೆಯೇ. ಸುಮ್ಮನೆ ಸಿನಿಮಾ ಮಾಡುವ, ಯಶಸ್ಸು ನೀಡುವ ಅಥವಾ ಗಂಭೀರ ಸಮಸ್ಯೆ ಚಿತ್ರ ತೆಗೆದು ಪ್ರಶಸ್ತಿ ತನ್ನದಾಗಿಸಿಕೊಳ್ಳುವುದಕ್ಕಿಂತ ಒಟ್ಟಾರೆಯಾಗಿ ಎಲ್ಲವನ್ನು ಒಂದೇ ಚಿತ್ರದಲ್ಲಿ ಮಾಡಬಹುದು ಎಂಬುದನ್ನು ಅವರಿಂದ ಕಲಿಯಬೇಕಾಗುತ್ತದೆ.
ಅಮೀರ್ ಖಾನ್ ಸ್ಟಾರ್ ನಟ ಎಂಬುದನ್ನು ಮರೆತು ಚಿತ್ರ ಮಾಡಿದ್ದಾರೆ ಅಥವಾ ಅವರು ಸ್ಟಾರ್ ಆಗಿರುವುದರಿಂದಲೇ ಈ ಪಾತ್ರ ನಿರ್ವಹಿಸಿದ್ದಾರೆ. ಅವರ ಹಾವ ಭಾವ ಪಾತ್ರ ಪೋಷಣೆ ಸೂಪರ್. ಉಳಿದ ತಾರಾಗಣ, ಛಾಯಾಗ್ರಹಣ, ತಂತ್ರಜ್ಞರ ಬಗ್ಗೆ ಬಿಡಿಬಿಡಿಯಾಗಿ ಹೇಳುವುದಕ್ಕಿಂತ ಯಥಾ ರಾಜ ತಥಾ ಪ್ರಜಾ ಎಂಬೊಂದು ವಾಕ್ಯವನ್ನು ಹೇಳಿ ಅರ್ಥೈಸಿಬಿಡಬಹುದು.
ಇದೆಲ್ಲದರ ಜೊತೆಗೆ ಕೆಲವು ಅಂಶಗಳನ್ನು ವಾದಿಸಬಹುದು. ಚಿತ್ರದಲ್ಲಿ ಓ ಮೈ ಗಾಡ್ ನೆರಳಿದೆ. ಪಾತ್ರ ಪೋಷಣೆ, ಕಥಾ ಹಂದರದಲ್ಲಿ ಅಮೆರಿಕಾದ ಟಿವಿ ಸರಣಿಯ  ಸರಕು ಕಾಣಿಸುತ್ತದೆ, ಹಿರಾನಿ ಹಿಂದಿನ ಚಿತ್ರ ನೋಡಿದವರಿಗೆ ಚಿತ್ರದಲ್ಲಿನ ಪಾತ್ರ ಪೋಷಣೆ ಹೊಸದು ಎನಿಸುವುದಿಲ್ಲ ಹೀಗೆ. ಆದರೆ ಇಂತಹ ಚಿತ್ರದ ಮಟ್ಟಿಗೆ ಈವತ್ತಿಗೆ ಇದೆಲ್ಲಾ ಅಪ್ರಸ್ತುತ ಎನಿಸುತ್ತದೆ.
ಒಮ್ಮೆ ಮನೆಮಂದಿಯಲ್ಲ ನೋಡಲೇ ಬೇಕಾದ ಚಿತ್ರವಿದು.



Monday, November 3, 2014

ದೃಶ್ಯ ಹಿಂದೆ ಬಿದ್ದು..

ಅದೇನೋ ಒಂದರ ಹಿಂದೆ ಬಿದ್ದರೆ ಸುಲಭವಾಗಿ ಅದರಿಂದ ಕಳಚಿಕೊಳ್ಳಲು ಸಾಧ್ಯವಾಗುವುದಿಲ್ಲ ನೋಡಿ. ಮೊದಲಿಗೆ ಸಸ್ಪೆಕ್ಟ್ ಎಕ್ಷ್, ಆನಂತರ ದೃಶ್ಯಂ ಆನಂತರ ದೃಶ್ಯ ಈಗ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್-ಕಾದಂಬರಿ. ಈಗಾಗಲೇ ದೃಶ್ಯಂ ನೋಡಿ, ಕೋರಿಯನ್ ಸಿನೆಮಾವನ್ನೂ ನೋಡಿ ಕಾದಂಬರಿ ಓದಿದ್ದರೆ ಮುಂದೆ ಓದಬಹುದೇನೋ? ಅಕಸ್ಮಾತ್ ಇನ್ನೂ ನೀವು ನೋಡಿಲ್ಲದಿದ್ದರೆ, ನೋಡುವ ಮನಸ್ಸಿದ್ದರೆ ನಿಮ್ಮಿಷ್ಟ.
ಒಂದು ಪುಸ್ತಕವನ್ನು ಸಿನಿಮಾಕ್ಕೆ ರೂಪಾಂತರ ಮಾಡುವಾಗ ಒಂದಷ್ಟು ಬದಲಾವಣೆ ಮಾಡುವಾಗ ಏನೇನಲ್ಲಾ ಮಾಡಬೇಕಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ.  ಸಧ್ಯಕ್ಕೆ ಈ ಕಾದಂಬರಿಯ ವಿವಾದವನ್ನೇ ತಗೆದುಕೊಳ್ಳಿ. ಮೊದಲಿಗೆ ಅದರ ಅಧಿಕೃತ ಹಕ್ಕುಗಳನ್ನು ಕೊಂಡುಕೊಂಡ ಏಕ್ತಾ ಕಪೂರ್ ಸಿನಿಮಾ ಮಾಡುವ ಮೊದಲೇ ಮಲಯಾಳಂ ನಲ್ಲಿ ಚಿತ್ರವನ್ನೇ ಬಿಡುಗಡೆ ಮಾಡಿದರು. ಆನಂತರ ಅದೆಲ್ಲಾ ಭಾಷೆಗಳಿಗೂ ರಿಮೇಕ್ ಆಗಿ ಯಶಸ್ವಿಯಾಯಿತು. ಈಗ ಹಿಂದಿಯಲ್ಲೂ ಮಾಡುತ್ತಿದ್ದಾರೆ, ಹಾಗೆಯೇ ಅಧಿಕೃತ ಪುಸ್ತಕದ ಹಕ್ಕುಗಳನ್ನು ಕೊಂಡುಕೊಂಡ ಏಕ್ತಾ ಕಪೂರ್ ಪುಸ್ತಕವನ್ನು ಚಿತ್ರವನ್ನಾಗಿಸುತ್ತಿರುವುದರಿಂದ ಸಿನಿಮಾಕ್ಕೆ ಅದರ ನಿರ್ಮಾಪಕರಿಗೆ ನೋಟೀಸ್ ಕಳುಹಿಸಿದ್ದಾರೆ.
ಹಾಗೆ ನೋಡಿದರೆ ದೃಶ್ಯಂ ಚಿತ್ರಕ್ಕೂ ಕಾದಂಬರಿಗೂ ವ್ಯತ್ಯಾಸವಿದೆ. ದೃಶ್ಯಂ ಕತೆಯೇ ಬೇರೆ, ಕಾದಂಬರಿ ಕತೆಯೇ ಬೇರೆ. ಆದರೆ ಸಾಮ್ಯತೆ ಇರುವುದು ಒಂದು ಅಂಶದಲ್ಲಿ. ಕಾದಂಬರಿಯ ನಾಯಕಿ ಒಂದು ಕೊಲೆ ಮಾಡುತ್ತಾಳೆ. ಅದು ಮಾಜಿ ಗಂಡನನ್ನು. ಕೊಲೆಯ ನಂತರ ಏನು ಮಾಡುವುದು, ಪೋಲಿಸರಿಗೆ ಶರಣಾಗುವುದಾ..? ಹಾಗಾದರೆ ಮಗಳ ಗತಿ ಏನು? ಎಂಬ ಪ್ರಶ್ನೆಗಳ ಗೊಂದಲದಲ್ಲೇ ಇದ್ದಾಗ ಪಕ್ಕದ ಮನೆಯ ಗಣಿತ ಶಿಕ್ಷಕ ಬಾಗಿಲು ತಟ್ಟುತ್ತಾನೆ. ಆನಂತರ ಅವನು ನೇರವಾಗಿ ವಿಷಯಕ್ಕೆ ಬಂದು ನನ್ನನ್ನು ನಂಬಿದರೆ ನಾನು ನಿಮ್ಮನ್ನು ಕಾಪಾಡುತ್ತೇನೆ ಎಂದಾಗ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕ ಹಾಗಾಗುತ್ತದೆ.
ಮಾರನೆಯ ದಿನ ನದಿಯ ಪಕ್ಕ ಒಂದು ಹೆಣ ಸಿಕ್ಕುತ್ತದೆ. ಅದರ ಮುಖವನ್ನು ಜಜ್ಜಿ ಹಾಕಿರುವುದರಿಂದ ಆತನ ಹಲ್ಲಿನ ದಾಖಲೆಯಿಂದ ಅವನನ್ನು ಗುರುತಿಸುವುದು ಸಾಧ್ಯವೇ ಇಲ್ಲ. ಇನ್ನು ಎರಡೂ ಹಸ್ತಗಳನ್ನು ಬೆರಳ ಸಮೇತ ಸುಟ್ಟು ಹಾಕಿರುವುದರಿಂದ ಕೈ ಬೆರಳ ಗುರುತೂ ಸಾಧ್ಯವಿಲ್ಲ.ಅವನ ಮೈ ಮೇಲಿನ ಬಟ್ಟೆ ಬಿಚ್ಚಿ ಪೂರ್ಣ ನಗ್ನಗೊಳಿಸಲಾಗಿದೆ. ಪಕ್ಕದಲ್ಲೊಂದು ಕದ್ದ ಸೈಕಲ್ ಇದೆ. ಗುರುತಿಗಾಗಿ ಪಕ್ಕದಲ್ಲೇ ಅರೆಬೆಂದ ಬಟ್ಟೆ ಇದೆ.
ಇವುಗಳನ್ನು ಹಿಡಿದುಕೊಂಡು ತನಿಖೆಗೆ ಇಳಿಯುತ್ತಾರೆ ಪೊಲೀಸರು. ಅರೆ ಬೆಂದ ಬಟ್ಟೆ, ಬಟ್ಟೆಯ ಪಕ್ಕ ಸಿಕ್ಕ ಹೋಟೆಲ್ಯ ಚಾವಿಯಿಂದ   ಆತ ನಾಯಕಿಯ ಪತಿ ಎಂಬುದನ್ನು ಕಂಡು ಹಿಡಿಯುತ್ತಾರೆ.  ಹಾಗಾದರೆ ಇಷ್ಟು ಬರ್ಬರವಾಗಿ ಕೊಲೆ ಮಾಡಿದವರ್ಯಾರು.. ಪೋಸ್ಟ್ಮೊ ಮಾರ್ಟಂ ಪ್ರಕಾರ ಕೊಲೆ ನಡೆದಿರುವುದು ಹತ್ತನೆಯ ತಾರೀಖು. ಮೊದಲಿಗೆ ಅನುಮಾನ ನಾಯಕಿಯ ಮೇಲೆ ಬರುತ್ತದೆ. ಆಕೆಯನ್ನು ಕೇಳಿದಾಗ ಆಕೆ ಹತ್ತನೆಯ ದಿನಾಂಕ ಸಿನಿಮಾ ನೋಡಿದ್ದಾಗಿ, ಅಲ್ಲಿಂದ ಹೋಟೆಲ್ಲಿಗೆ ಹೋಗಿ ಊಟ ಮಾಡಿದ್ದಾಗಿ ಹೇಳುತ್ತಾಳೆ. ಆಕೆಯ ಮಾತನ್ನು ಪರೀಕ್ಷಿಸಲು ಪೊಲೀಸರು ಎಲ್ಲಾ ತಂತ್ರ ಉಪಯೋಗಿಸುತ್ತಾರೆ. ಸಿನಿಮಾ ಮಂದಿರದ ಸಿಸಿಟಿವಿ ಫೂಟೇಜ್ ತರಿಸಿ ನೋಡುತ್ತಾರೆ, ಆಕೆಗೆ ಮಂಪರು ಪರೀಕ್ಷೆ ಮಾಡುತ್ತಾರೆ. ಎಲ್ಲವೂ ಸರಿ.
ನಾಯಕಿಗೆ ಆಶ್ಚರ್ಯವಾಗುತ್ತದೆ. ಯಾಕೆ ಎಲ್ಲರೂ ಹತ್ತನೆಯ ತಾರೀಖಿನ ಬಗ್ಗೆ ಕೇಳುತ್ತಿದ್ದಾರೆ. ಕೊಲೆ ನಡೆದಿರುವುದು ಒಂಬತ್ತು.ಎಷ್ಟೇ ಕೆದಕಿದರೂ ಪೊಲೀಸರಿಗೆ ನಾಯಕಿ ಹೇಳುತ್ತಿರುವುದು ಸುಳ್ಳು ಎನಿಸುವುದೇ ಇಲ್ಲ.
ಆದರೆ ನಿಜವಾಗಿ ನಡೆದದ್ದು ಏನು..?
ದೃಶ್ಯ ಚಿತ್ರದಲ್ಲೂ ಒಂದು ದೃಶ್ಯವನ್ನು ಸೃಷ್ಟಿ ಮಾಡುತ್ತಾನೆ ನಾಯಕ. ಕೊಲೆ ನಡೆದ ನಂತರ ಬಸ್ಸಿನಲ್ಲಿ, ಪ್ರವಚನ ಹೀಗೆ ಎಲ್ಲ ಕಡೆ ಹೋಗಿ ಕೊಲೆ ನಡೆದ ದಿನವೇ ಇಡೀ ಕುಟುಂಬ ಅಲ್ಲಿದ್ದರು ಎಂಬುದಾಗಿ ಕತೆ ಕಟ್ಟುತ್ತಾನೆ. ಅದನ್ನು ಸುಳ್ಳು ಎಂದು ಸಾಬೀತು ಮಾಡಲು ಎಷ್ಟೇ ಹೆಣಗಾಡಿದರೂ ಸಾಧ್ಯವಾಗುವುದೇ ಇಲ್ಲ.
ಇಲ್ಲೂ ಅಷ್ಟೇ. ನಾಯಕ ಒಂದು ದಿನವನ್ನು ಸೃಷ್ಟಿಸುತ್ತಾನೆ. ಒಂಬತ್ತನೆಯ ದಿನಾಂಕ ನಡೆದ ಕೊಲೆಯನ್ನು ಹತ್ತಕ್ಕೆ ವರ್ಗಾಯಿಸುತ್ತಾನೆ. ಅದಕ್ಕಾಗಿ ಆತ ಇನ್ನೊಂದು ಕೊಲೆ ಮಾಡುತ್ತಾನೆ. ನಿಜವಾದ ನಾಯಕಿಯ ಒಂಬತ್ತನೆಯ ದಿನಾಂಕ ಕೊಲೆಯಾದವನ  ಕಳೇಬರವನ್ನು ಮರೆ ಮಾಡುವ ನಾಯಕ ಆತನ ಬಟ್ಟೆ, ಹೋಟೆಲ್ ಬೀಗದ ಕೈ ತೆಗೆದುಕೊಂಡು ಇನ್ನೊಬ್ಬ ತಿರುಬೋಕಿಯನ್ನು ಹತ್ತನೆಯ ತಾರೀಖು ನದಿಯ ತೀರಕ್ಕೆ ಕರೆದೊಯ್ದು ಕೊಲೆ ಮಾಡುತ್ತಾನೆ. ಆನಂತರ ಆತನನ್ನು ನಗ್ನಗೊಳಿಸಿ ಮುಖ ಜಜ್ಜಿ ಕೈ ಬೆರಳುಗಳನ್ನು ಸುಟ್ಟು ಪಕ್ಕದಲ್ಲಿ ಬಟ್ಟೆ ಬೀಗದ ಕೈ ಅರೆಬರೆ ಸುಟ್ಟು ಪೋಲಿಸರಿಗೆ ಸಿಕ್ಕುವಂತೆ ಮಾಡುತ್ತಾನೆ. ಹಾಗಾಗಿಯೇ ಹೆಣ ನಾಯಕಿಯ ಪತಿಯದು ಮತ್ತು ಅವನ ಕೊಲೆಯಾದದ್ದು ಹತ್ತಕ್ಕೆ ಎಂಬ ಕತೆ ಸೃಷ್ಟಿಸುತ್ತಾನೆ. ಹತ್ತನೆಯ ತಾರೀಖು ಏನಾಯಿತು ಎಂದು ಎಲ್ಲರೂ ಪ್ರಶ್ನೆ ಕೇಳುತ್ತಾರೆ. ಆವತ್ತು ನಾಯಕಿಯ ಪಾಲಿಗೆ ಏನೂ ಆಗಿರುವುದಿಲ್ಲ. 
ಇಲ್ಲಿ ಎರಡೂ ಕತೆಗಳಲ್ಲಿ ಸಾಮ್ಯತೆ ಇಲ್ಲ. ಒಂದು ದಿನವನ್ನು ಸೃಷ್ಟಿಸುವ ಪರಿಯಲ್ಲಿ ಸಾಮ್ಯತೆ ಇದೆ. ಹಾಗಾಗಿ ಐಡಿಯಾ ಮಾತ್ರ ತೆಗೆದುಕೊಂಡಿರುವ ಜೀತು ಜೋಸೆಫ್ ದೃಶ್ಯಂ ಗೆ ತಮ್ಮದೇ ಕತೆ ಹೆಣೆದಿದ್ದಾರೆ.
ಇನ್ನು ಕೋರಿಯನ್ ಸಿನಿಮಾದ ವಿಷಯಕ್ಕೆ ಬಂದರೆ ಚಿತ್ರ ತುಂಬಾ ಮಂದಗತಿಯಲ್ಲಿದೆ. ಅದೇಕೆ ಅಷ್ಟೊಂದು ಮಂದಗತಿ ಎಂಬುದು ಪ್ರಶ್ನೆ. ಅದು ಬಿಟ್ಟರೆ ಕಾದಂಬರಿಗೆ ನಿಷ್ಠೆಯಿಂದಿದೆ ಸಿನಿಮಾ.ಆದರೆ ದೃಶ್ಯ ಚಿತ್ರಕ್ಕೆ ಬೇರೆಯದೇ ಕತೆ ಹೆಣೆಯಲಾಗಿದೆ. ಈಗ ಹಿಂದಿಯಲ್ಲಿ ಎರಡೂ ಚಿತ್ರಗಳು ಒಮ್ಮೆಲೇ ಬಿಡುಗಡೆಯಾದರೆ ಹೇಗೆ..?
ಈ ಹಿಂದೆ ಕನ್ನಡದಲ್ಲಿ ಸಾಗರಿ ಮತ್ತು ಆಪ್ತ ಮಿತ್ರ ಚಿತ್ರಗಳ ಕತೆ ಹೀಗೆ ಆಗಿತ್ತು. ಎರಡೂ ಒಂದೇ ಚಿತ್ರದ ಕನ್ನಡ ಅವತರಣಿಕೆ. ಆಪ್ತಮಿತ್ರ ಗೆದ್ದಿತ್ತು. 

Sunday, October 12, 2014

ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್.

ಆಕೆಯ ಕೈ ಮೀರಿ ಹೋಗಿತ್ತು. ಮಗಳು ಪಕ್ಕದಲ್ಲಿ ನಡುಗುತ್ತಾ ಕುಳಿತಿದ್ದಳು. ಏನು ಮಾಡುವುದು ಎಂದು ಇಬ್ಬರಿಗೂ ತೋಚದಂತಾಗಿತ್ತು. ಸುಮ್ಮನೆ ಮಾತನಾಡುತ್ತೇನೆ ಎಂದು ಬಂದವನು ತನ್ನ ಮಾಜಿ ಗಂಡ. ಐದು ವರ್ಷಗಳ ಹಿಂದೆಯೇ ವಿಚ್ಛೇದನ ಪಡೆದಾಗಿದೆ. ಅವನೀಗ್ ಎಲ್ಲಿದದ, ಏನು ಮಾಡುತ್ತಿದ್ದ ಎಂಬುದು ಮರೆತೇಹೋಗಿತ್ತೇನೋ? ಆದರೆ ನಿನ್ನೆ ಇದ್ದಕ್ಕಿದ್ದ ಹಾಗೆ ಪ್ರತ್ಯಕ್ಷವಾದವನು ತನ್ನ ಹುಳುಕು ಹಲ್ಲು ತೋರಿಸುತ್ತಾ ಹಲ್ಲು ಗಿಂಜಿದ್ದ. ನಿನ್ನ ಜೊತೆ ಮಾತನಾಡಬೇಕಿತ್ತು, ಸಿಕ್ತೀಯ ಎಂದವನನ್ನು ಮರು ಮಾತಾಡದೆ ಭೇಟಿ ಮಾಡಿದ್ದಳು. ಅಲ್ಲೇ ಮಾತು ಮುಗಿದು ಹೋಗಿತ್ತು. ಆದರೆ ಮನೆಗೆ ಬಂದು ಸ್ವಲ್ಪ ವಿರಾಮ ತೆಗೆದುಕೊಳ್ಳೋಣ ಎನ್ನುವಷ್ಟರಲ್ಲಿ ಅವನು ಮನೆಗೆ ಬಂದು ಬಿಟ್ಟಿದ್ದ. ಈಕೆಯೇನು ವಿಳಾಸ ಹೇಳಿರಲಿಲ್ಲ. ಅವನೇ ಬಂದಿದ್ದ ಇವಳನ್ನು ಹಿಂಬಾಲಿಸಿಕೊಂಡು. ಸುಮ್ಮನೆ ಅಕ್ಕ ಪಕ್ಕದವರಿಗೆ ಗೊತ್ತಾದರೆ ಸಮಸ್ಯೆ ಎಂದು ಒಳಬಿಟ್ಟುಕೊಂಡು ಖಡಕ್ಕಾಗಿ ಮಾತನಾಡಿ ಹೋಗುವಂತೆ ಹೇಳಿದ್ದಳು. ಒಂದಷ್ಟು ಉಳಿಸಿದ್ದ ಹಣವನ್ನು ಕೊಟ್ಟು ಇನ್ಯಾವತ್ತೂ ನಮ್ಮನ್ನು ನೋಡುವುದಕ್ಕೆ ಬರಬೇಡ ಎಂದು ಖಡಾಖಂಡಿತವಾಗಿ ನುಡಿದಿದ್ದಳು. ಅವನು ತಲೆಯಲ್ಲಾಡಿಸಿ ನಕ್ಕಿದ್ದ. ಅದರಲ್ಲಿ ಎಳ್ಳಷ್ಟೂ ನಂಬುವ ಭರವಸೆ ಇರಲಿಲ್ಲ. ಅದೆಲ್ಲಾ ಸರಿ ಇನ್ನೇನು ಹೋಗುವಷ್ಟರಲ್ಲಿ ಎಂತಹ ಅನಾಹುತ ಆಗಿಹೋಯಿತು. ಅವನನ್ನು ಕೊಲ್ಲಲೇ ಬೇಕಾಯಿತು. ಆತನ ಕತ್ತಿಗೆ ವೈರಿನಿಂದ ಬಿಗಿದರೆ ಮಗಳು ಸಹಾಯ ಮಾಡಿದ್ದಳು. ಇದೆಲ್ಲ ಅದೆಷ್ಟು ಬೇಗ ನಡೆದುಹೋಯಿತೆಂದರೆ ನಿಮಿಷಗಳ ಅಂತರದಲ್ಲಿ ಅವನು ಹೆಣವಾಗಿದ್ದ. ಇಬ್ಬರೂ ಕೊಲೆಗಾರರಾಗಿದ್ದರು.
ಅಷ್ಟರಲ್ಲಿ ಬಾಗಿಲು ಬಡಿದ ಶಬ್ದವಾಗಿ ಬಾಗಿಲು ತೆರೆದಾಗ ಎದುರಿಗೆ ಕಂಡದ್ದು ಪಕ್ಕದಲ್ಲಿ ವಾಸವಾಗಿದ್ದ ಗಣಿತ ಶಿಕ್ಷಕ. ಒಂದೇ ಮಾತಿಗೆ ಆತ ಹೇಳಿದ್ದಿಷ್ಟೇ. ಮುಂದೇನು ಮಾಡುತ್ತೀರಿ.. ಆಕೆ ನಡುಗಿ ಹೋದಳು. ಸೀದಾ ಹೋಗಿ ಪೋಲಿಸ್ ಗೆ ಶರಣಾಗತಿ ಆಗುವುದೇ ಸರಿ ಎಂದಳು. ಆತ ಸುಮ್ಮನೆ ಸ್ವಲ್ಪ ಹೊತ್ತು ಇದ್ದವನು ನೀವೇನು ಹೆದರಬೇಡಿ, ನಾನು ಹೇಳಿದಂತೆ ಮಾಡಿ, ಮುಂದಿನದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದ.
ಮಾರನೆಯ ದಿನ ಪಕ್ಕದ ಕೆರೆಯ ಪಕ್ಕ ಅನಾಥ ಶವವೊಂದು ಸಿಕ್ಕಿತ್ತು. ಆತನ ಬಟ್ಟೆ ಕಳಚಿ ವಿವಸ್ತ್ರಗೊಳಿಸಲಾಗಿತ್ತು. ಆತನ ಮುಖದ ಗುರುತು ಸಿಗದಂತೆ ಜಜ್ಜಿ ಹಾಕಲಾಗಿತ್ತು. ಕೈ ಬೆರಳುಗಳನ್ನು ಸುಟ್ಟುಹಾಕಲಾಗಿತ್ತು. ಆತನ ದವಡೆ ಹಲ್ಲುಗಳೂ ಗೊತ್ತಾಗದಂತೆ  ಜಜ್ಜಿ ಹಾಕಲಾಗಿತ್ತು. ಅಂದರೆ ಯಾವೊಂದು ಗುರುತೂ ಸಿಗದಂತೆ ಮುನ್ಸೂಚನೆ ತೆಗೆದುಕೊಂಡಿದ್ದರೂ ಕೆಲವೊಂದು ಕುರುಹನ್ನು ಉಳಿಸಲಾಗಿತ್ತು.
ಅದು ನಿಜಕ್ಕೂ ತಂತ್ರವಾ..?
ಇದು ಕೀಗೋ ಹಿಗಾಶಿನೋ ಬರೆದ ಕಾದಂಬರಿ ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಷ್ ಕಾದಂಬರಿ ಪ್ರಾರಂಭವಾಗುವ ರೀತಿ. ಸರಿ ಸುಮಾರು ನೂರೆಪ್ಪತ್ತು ಪುಟಗಳ ಈ ಕಾದಂಬರಿ ಓದುತ್ತಾ ಓದುತ್ತ ತನ್ನ
ತೆಕ್ಕೆಗೆ ಸೆಳೆದುಕೊಂಡು ಬಿಡುತ್ತದೆ. ಮೂಲ ಜಪಾನಿ ಕಾದಂಬರಿಯನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದವರು ಅಲೆಕ್ಸಾಂಡರ್ ಓ.ಸ್ಮಿತ್ ಮತ್ತು ಎಲ್ಯೇ ಜೆ.ಅಲೆಕ್ಸಾಂಡರ್.

ಇದು ಈಗಾಗಲೇ ಈ ಕಾದಂಬರಿ 2008 ಮತ್ತು 2012 ರಲ್ಲಿ ಚಿತ್ರ ರೂಪಕ್ಕೆ ತಾಳಿ ಯಶಸ್ವಿಯಾಗಿದೆ.ಇದರ ಬಗ್ಗೆ ಹೇಳಬೇಕೆಂದರೆ ಇದೀಗ ಭಾರತದಲ್ಲಿಯೂ ಕೂಡ ಅಧಿಕೃತವಾಗಿ ಸಿನಿಮಾ ರೂಪು ತಾಳಲಿದೆ. ಆದರೆ ಈಗಾಗಲೇ ಈ ಚಿತ್ರದ ಜೀವಾಳವನ್ನು ಮಲಯಾಳಂ ಚಿತ್ರದವರೂ ಎರವಲು ಪಡೆದುಬಿಟ್ಟಿದ್ದಾರೆ. ಮೋಹನ್ ಲಾಲ್ ಅಭಿನಯದ ದೃಶ್ಯಂ ಚಿತ್ರ ಇದೆ ಕಾದಂಬರಿಯ ಎರವಲು ಎನ್ನಬಹುದು. ಅದನ್ನು ಭಾರತೀಯ ಸೊಗಡಿಗೆ ರೂಪಾನತರ ಮಾಡಿದ್ದಾರೆ ನಿರ್ದೇಶಕ ಜೀತು ಜೋಸೆಫ್. ಇದೆ ಚಿತ್ರ ಕನ್ನಡದಲ್ಲಿ ರವಿಚಂದ್ರನ್ ಅಭಿನಯದಲ್ಲೂ ತೆಲುಗಿನಲ್ಲಿ ವೆಂಕಟೇಶ್ ಅಭಿನಯದಲ್ಲೂ ತೆರೆಕಂಡು ಯಶಸ್ವಿಯಾಗಿದೆ. ಅಷ್ಟೇ ಅಲ್ಲ ಈಗ ತಮಿಳು ಭಾಷೆಯಲ್ಲಿ ಖ್ಯಾತ ನಟ ಕಮಲ್ ಹಾಸನ್ ಅಭಿನಯದಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು , ಹಿಂದಿಯಲ್ಲೂ ರಿಮೇಕ್ ಆಗುವ ಲಕ್ಷಣಗಳಿವೆ.

Monday, September 22, 2014

ದೆವ್ವದ ಹಿಂದೆ...

ಆಕೆಗೋ ಅವನ ಮೇಲೆ ಪ್ರೀತಿ, ಆದರೆ ಅವನಿಗೆ ಅವಳಷ್ಟು ಚಂದ ಇದ್ದರೂ ಹೀರೋಯಿನ್ ಅವಳೇ ಆಗಿದ್ದರೂ ಅವಳ ಮೇಲೇಕೋ ಮನಸಿಲ್ಲ. ಅವಳು ಬಿಡುವುದಿಲ್ಲ. ಕೊನೆಗೆ ಅವನಿಂದ ತಿರಸ್ಕೃತಳಾಗಿ ಆತ್ಮಹತ್ಯೆ ಮಾಡಿಕೊಂಡು ಸತ್ತು ಆನಂತರ ದೆವ್ವವಾಗಿ ಕಾಡುತ್ತಾಳೆ...
ಅಥವಾ ಅದೊಂದು ಬಂಗಲೆ ನಾಲ್ಕಾರು ಜನ ಹುಡುಗರು ರಜಾ ಕಳೆಯಲೋ, ಸಾಕ್ಷ್ಯಚಿತ್ರ ಮಾಡಲೋ ಕಾಡಿಗೆ ಹೋಗಿ ಅಲ್ಲಿರುವ ಅದೇ ಬಂಗಲೆಗೆ ನುಗ್ಗುತ್ತಾರೆ. ಅಲ್ಲೊಬ್ಬ ಭಯಾನಕ ಮುಖದ/ ಮುಖಭಾವದ ಮನೆ ಆಳು..ಆನಂತರ ಕಾಟ ಇದ್ದದ್ದೇ...
ನನಗೆ ದೆವ್ವದ ಚಿತ್ರ ಭಯ ಹುಟ್ಟಿಸಿದ್ದು ಯಾವುದು ಎಂಬುದರ ಲೆಕ್ಕಾಚಾರದಲ್ಲೇ ಇನ್ನೂ ಇದ್ದೇನೆ. ಶರಪಂಜರದ ದೃಶ್ಯ ಭಯ ತರಿಸಿತ್ತು, ಆನಂತರ ನಾ ನಿನ್ನ ಬಿಡಲಾರೆ ಕೂಡ ಭಯ ತರಿಸಿತ್ತು. ಆವಾಗ ಚಿಕ್ಕವನಾದ್ದರಿಂದಲೋ ಏನೋ? ಆಮೇಲೆ ಕಾಲೇಜು ದಿನಗಳಲ್ಲಿ ಅದ್ಯಾರೋ ಈವಿಲ್ ಡೆಡ್ ಭಯಾನಕ ಸಿನಿಮಾ ಎಂದಿದ್ದರು. ಸಿನಿಮಾದಲ್ಲಿ ಭಯಕ್ಕಿಂತ ಶಾಕ್ ಹೆಚ್ಚಾಗಿತ್ತು. ಅದರ ಹಿನ್ನೆಲೆ ಶಬ್ದ ಭಯಾನಕ ಎನಿಸಿತ್ತು. ಅದು ಬಿಟ್ಟರೆ ದೆವ್ವವನ್ನು ಎದುರಿಸಲು ಅವರು ಗನ್, ಚಾಕು ಮುಂತಾದ ಆಯುಧ ಬಳಸುವುದನ್ನು ನೋಡಿ ನಗು ಬಂದಿತ್ತು. ಆದರೆ ಭಯದ ಜೊತೆಗೆ ಉದ್ವೇಗ ತರಿಸಿತ್ತು ಕೆಲವು ಚಿತ್ರಗಳಿವೆ. ಆದರೆ ನಾನು ಹೆದರಿದ ಚಿತ್ರ ಎಂದರೆ ಜೇಮ್ಸ್ ವ್ಯಾನ್ ನಿರ್ದೇಶನದ ಸಾ. ನನಗೆ ಭಯದ ಪ್ರಶ್ನೆಯಲ್ಲ. ತೆರೆಯ ಮೇಲಿನ ಪಾತ್ರಗಳ ಚಿಂತಾಜನಕ ಸ್ಥಿತಿ ಅದ್ಯಾವ ಸಮಯದಲ್ಲಿ ಅದ್ಯಾರನ್ನು ಹೊತ್ತುಕೊಂಡು ಹೋಗುತ್ತಾನೋ ಅನ್ನುವ ಭಯ. ಒಂದೇ ಏಟಿಗೆ ಕೊಂದರೆ ok. ಅದು ಬಿಟ್ಟು ಡಿಸೈನ್ ಡಿಸೈನ್ ಆಗಿ ನರಕ ಯಂತ್ರಗಳನ್ನು ಮಾಡಿ ಸಾಯಿಸುವ ಅವನ ಪರಿಗೆ ನಮ್ಮ ಜೀವ ಹೋಗದೆ ಇರುತ್ತಿತ್ತೆ..?
ಆಕೆ ನಟಿ. ನಿಮಗೆಲ್ಲಾ ಗೊತ್ತಿರುತ್ತಾರೆ. ಚಲನಚಿತ್ರ, ಧಾರಾವಾಹಿಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸುತ್ತಾರೆ. ಅವರ ಮಗಳೂ ಕೂಡ ಈವತ್ತು ನಾಯಕಿಯಾಗಿದ್ದಾರೆ. ಆಕೆ ಹೇಳಿದ ಕತೆ ಇದು.
ಅವರು ಅವರ ತಂದೆ ಜೊತೆ ಇದ್ದರಂತೆ. ಬೆಳಿಗ್ಗೆಯಿಂದ ಯಾವುದೇ ಕೆಟ್ಟ ಅನುಭವವಾಗುತ್ತಿರಲಿಲ್ಲವಂತೆ. ಆದರೆ ರಾತ್ರಿ ಮಲಗಿದ ಮೇಲೆ ಮೈ ತುಂಬಾ ರಗ್ಗು ಹೊದ್ದುಕೊಂಡರೆ ಯಾರೋ ನಿಧಾನಕ್ಕೆ ಮೈ ಮೇಲೆ ಸವರಿದ ಅನುಭವವಾಗುತ್ತಿತ್ತಂತೆ.  ಅದು ಪ್ರಾರಂಭವಾದದ್ದು ಹೀಗೆ. ಅದೊಂದು ದಿನ ಊಟ ಮಾಡಿ ಹಾಸಿಗೆಯ ಮೇಲೆ ಅಡ್ದಾದರಂತೆ. ಸ್ವಲ್ಪ ಸುಸ್ತಾಗಿದ್ದರಿಂದ ಹಠಾತ್ತನೆ ನಿದ್ರೆ ಬಂದಿದೆ. ಮಧ್ಯರಾತ್ರಿಯಲ್ಲಿ ಯಾಕೋ ಎಚ್ಚರವಾಗಿದೆ. ಸುಮ್ಮನೆ ಮಗ್ಗುಲು ಬದಲಿಸಿದವರಿಗೆ ಯಾರೋ ಪಕ್ಕದಲ್ಲಿ ಮಲಗಿದಂತೆ ಭಾಸವಾಗಿದೆ. ಸುಮ್ಮನೆ ಕೈ ಯಾಡಿಸಿದರೆ ಯಾರೂ ಇಲ್ಲ. ಆದರೆ ಉಸಿರಾಟ ನಿಧಾನಕ್ಕೆ ಕ್ಷೀಣವಾಗಿ ಕೇಳಿಸುತ್ತಲೇ ಇದೆ. ಒಂದು ಕ್ಷಣ ಇದು ಕನಸೋ ಭ್ರಮೆಯೋ ಎಂಬುದು ಆಕೆಗೆ ಗೊತ್ತಾಗದ ಸ್ಥಿತಿ. ಜೊತೆಗೆ ಪಕ್ಕದಲ್ಯಾರೋ ಮಲಗಿದ ರೀತಿಯಲ್ಲಿ ಬೆಚ್ಚನೆಯ ಅನುಭವ ಬೇರೆ. ಆಕೆ ಎದ್ದು ಕುಳಿತವರು ಸುಮಾರು ಹೊತ್ತು ನಿದ್ರೆ ಮಾಡದೆ ಭಯದಲ್ಲೇ ಕುಳಿತಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಅದು ಹಾಗೆ ಸರಿದು ಹೋಗಿದೆ.
ಇದಾದ ಮಾರನೆಯ ದಿನದಿಂದ ಅದು ಪುನರಾವರ್ತನೆಯಾಗುತ್ತಾ ಹೋಗಿದೆ. ಆಕೆ ಏನು ಮಾಡಿದರೂ ಯಾವುದೇ ಯಂತ್ರ, ತಾಯತ ಹಾಕಿಸಿದರೂ ಅದು ಹೋಗೆ ಇಲ್ಲ. ಆನಂತರ ಮೈಮೇಲೆ ಆವರಿಸಿಕೊಳ್ಳುವ ತರದಲ್ಲಿ ಫೀಲ್ ಆಗತೊಡಗಿದೆ.
ಸುಮಾರು ಇದೆ ಅನುಭವ ಆದ ನಂತರ ಅದೊಂದು ದಿನ ಎಚ್ಚರವಾದ ಆಕೆಗೆ  ಮಂಚದ  ಪಕ್ಕದಲ್ಲಿ ಯಾರೋ ನಿಂತ ಅನುಭವವಾಗಿದೆ. ಕಣ್ಣು ಬಿಟ್ಟು ನೋಡಿದರೆ ಒಬ್ಬ ಎತ್ತರಕ್ಕಿರುವ ಕಪ್ಪನೆಯ ಮನುಷ್ಯ ನಿಂತಿದ್ದಾನೆ. ಸ್ವಲ್ಪ ಹೊತ್ತು ಇವರನ್ನೇ ನೋಡಿದ ಆತ ನಿಧಾನಕ್ಕೆ ಹಾಗೆ ಸರಿದು ಬಾಗಿಲ ಹತ್ತಿರ ಹೋಗಿದ್ದಾನೆ.
ಆವತ್ತೇ ಕೊನೆ. ಆಮೇಲಿಂದ ಆತ ಕಾಣಿಸಿಕೊಂಡೆ ಇಲ್ಲ.
"ಆತನ ಮುಖ ನನಗೆ ಚೆನ್ನಾಗಿ ನೆನಪಿದೆ. ಕಪ್ಪಗಿದ್ದ. ಮೀಸೆ ಬಿಟ್ಟಿದ್ದ. ದಪ್ಪ ದಪ್ಪ ಕಣ್ಣುಗಳಿದ್ದವು. ಅದಾದ ಸುಮಾರು ವರ್ಷದವರೆಗೆ ಯಾರಾದ್ರೂ ನಿಂತ ಕಡೆ ಅವನನ್ನೇ ಹುಡುಕುತ್ತಿದ್ದೆ. ಅದೇ ಮುಖ ಚಹರೆ ಹೋಲುವ ಯಾವನಾದರೂ ಇರಬಹುದಾ.. ಅಥವಾ ಬದುಕಿದ್ದನಾ? ನನಗ್ಯಾಕೆ ಕಾಣಿಸಿಕೊಂಡ ಎನ್ನುವುದು ಇನ್ನೂ ನಿಗೂಡವಾಗಿದೆ ..ಈಗಲೂ ಆತನ ಮುಖ ಚಹರೆ ಹೋಲುವ ವ್ಯಕ್ತಿ ಯನ್ನು ಹುಡುಕುತ್ತಿದ್ದೇನೆ.." ಎಂದರವರು.
ಒಟ್ಟಿನಲ್ಲಿ ಕೆಲವು ಘಟನೆಗಳು ನಮ್ಮ ನಿಲುಕಿಗೆ ಸಿಕ್ಕುವುದಿಲ್ಲ ಎಂಬುದಷ್ಟೇ ಸತ್ಯ ಎನಿಸಿತು. ಹೀಗೆ ಆಯಿತು ಎಂದಷ್ಟೇ ಹೇಳಬಹುದು.. ಅದೇನು..? ಅದ್ಯಾಕೆ ಎಂಬ ಪ್ರಶ್ನೆಗೆ ಹೇಗೆ ಉತ್ತರ ಹುಡುಕಲು ಸಾಧ್ಯ?
ಚಿತ್ರದ ಕತೆ ಸಿದ್ಧ ಮಾಡಲು ಘಟನೆ ಹುಡುಕುತ್ತಾ ಹೋದವನಿಗೆ ಸಿಕ್ಕ ಅನುಭವಗಳಲ್ಲಿ ಇದೂ ಒಂದು. ಒಂದೊಂದು ಭಯಾನಕವಾಗಿದ್ದರೆ, ಕೆಲವು ತಮಾಷೆಯಾಗಿರುವವು ಇವೆ. ಅಂದರೆ ಈ ವ್ಯಕ್ತಿಗಳು ಸುಮ್ಮನೆ ಸುಳ್ಳು ಹೇಳುತ್ತಿರುವರಾ? ಎನ್ನುವ ಅನುಮಾನವನ್ನು ಮೂಡಿಸುತ್ತವೆ ಕೆಲವು.
ಆದರೆ ಅದೊಂದು ವೀಡಿಯೊ ನೋಡಿದ ಮೇಲೆ ನನಗೆ ಯಾವುದೇ ನಿರ್ಧಾರ ತಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಇರಲಿ. ಈಗ ಕತೆ ಒಂದು ಹಂತಕ್ಕೆ ಮುಗಿದಿದೆ, ಇನೇನಿದ್ದರೂ ಸಂಭಾಷಣೆ, ಚಿತ್ರಕತೆ ಇತ್ಯಾದಿ. ಮುಖ್ಯ ತಂತ್ರಜ್ಞರ ಆಯ್ಕೆಯಾಗಿದೆಯಾದರೂ ಕಲಾವಿದರ ಶೋಧ ನಡೆಯುತ್ತಿದೆ.ಇನ್ನೂ ಫೋಟೋಶೂಟ್ ಆಗಿಲ್ಲದ ಕಾರಣ ಗೆಳೆಯ ಒಂದಷ್ಟು ಇಂಟರ್ನೆಟ್ ಆಧರಿಸಿ ಅಲ್ಲಿನ ಫೋಟೋಗಳಿಂದ ಒಂದಷ್ಟು ಪೋಸ್ಟರ್ ಸಿದ್ಧ ಮಾಡಿದ್ದಾರೆ.


Tuesday, September 9, 2014

ಭೂತದ ಬೆನ್ನು ಬಿದ್ದು.

ಅವರು ಕನ್ನಡದಲ್ಲಿ ಹೆಸರು ಮಾಡಿದ ಖ್ಯಾತ ಪೋಷಕ ನಟರು. ತಮಿಳು ಚಿತ್ರರಂಗದಲ್ಲೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ದೇವರು ದೆವ್ವ ಮುಂತಾದವುಗಳ ಬಗ್ಗೆ ನಂಬಿಕೆ ಇಲ್ಲದ ಹಾಗೆಯೇ ಮೂರ್ತಿ ಪೂಜೆ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದವರು. ತಾವಾಯಿತು ತಮ್ಮ ಕೆಲಸವಾಯಿತು ಎಂದು ತಮ್ಮ ಪಾಡಿಗೆ ಇರುವವರು.
ಒಮ್ಮೆ ಯಾವುದೂ ಚಿತ್ರದ ಶೂಟಿಂಗ್ ಗಾಗಿ ಬೆಂಗಳೂರಿನಿಂದ ಮುನ್ನೂರು ಕಿಲೋಮೀಟರುಗಳ ದೂರಕ್ಕೆ ಹೋಗಿದ್ದರು. ಚಿತ್ರೀಕರಣ ಮುಗಿದಾಗ ಸಂಜೆ ಎಂಟು ಘಂಟೆ. ಇಡೀ ಚಿತ್ರತಂಡ ನಾಳೆ ಬೆಳಿಗ್ಗೆಯೇ ಹೋದರಾಯಿತು ಉಳಿದುಕೊಳ್ಳಿ ಎಂದಿದೆ. ಆದರೆ ಸುಖಾ ಸುಮ್ಮನೆ ಯಾಕೆ ಉಳಿಯುವುದು ನೀಟಾಗಿ ಊಟ ಮಾಡಿಕೊಂಡು ಹೊರತುಬಿಡೋಣ ಎಂದು ಆ ತಕ್ಷಣ ತಮ್ಮದೇ ಕಾರಿನಲ್ಲಿ ಹೊರಟಿದ್ದಾರೆ.ಆದರೆ ಮಾರ್ಗ ಮದ್ಯದಲ್ಲಿ ಯಾಕೋ ಸುಸ್ತಾದಂತೆನಿಸಿ ಇಲ್ಲಿ ಎಲ್ಲಾದರೂ ಹೋಟೆಲ್ ರೂಂ ಮಾಡಿ ಮಲಗಿಬಿಡೋಣ ಎನಿಸಿ ಸುತ್ತ ಮುತ್ತಲ ಊರನ್ನು ಹುಡುಕಾಡಿದ್ದಾರೆ. ಅದೊಂದು ಚಿಕ್ಕ ನಗರ. ಇರುವುದೊಂದೇ ಲಾಜ್.ಅದರಲ್ಲಿ ಹೋಗಿ ಕೇಳಿದಾಗ ಸಾರ್ ಇರುವೆಲ್ಲಾ ಕೋಣೆಗಳು ಈಗಾಗಲೇ ಬುಕ್ ಆಗಿಹೋಗಿವೆ. ಒಂದೇ ಒಂದು ಕೋಣೆ ಇದೆ. ನೀವು ಬೇಕೇ ಬೇಕು ಎಂದರೆ ನಾನು ಅದನ್ನೇ ಕೊಡುತ್ತೇನೆ. ಎಂದಿದ್ದಾನೆ. ಇವರು ಬೇಕಪ್ಪಾ.. ಅದಕ್ಕಲ್ಲವೇ ಕೇಳುತ್ತಿರುವುದು ಎಂದಿದ್ದಾರೆ.ಆತ ಸ್ವಲ್ಪ ಹಿಂದೆ ಮುಂದೆ ನೋಡಿದವನು ಕೀ ಕೊಟ್ಟು ಹುಷಾರು ಸಾರ್, ಏನಾದರೂ ಬೇಕಾದರೆ ಒಂಬತ್ತಕ್ಕೆ ಕರೆ ಮಾಡಿ ಎಂದಿದ್ದಾನೆ. ಆತನ ಮಾತಿನಲ್ಲಿದ್ದ ಬಿಗುವನ್ನು ಇವರು ಗಮನಿಸದೆ ಆಯಿತು ಎಂಬಂತೆ ತಲೆಯಲ್ಲಾಡಿಸಿ ಅಲ್ಲಿಂದ ಹೊರಟು ಬಂದಿದ್ದಾರೆ.
ದಣಿವಾದ್ದರಿಂದ ಕೋಣೆಗೆ ಬಂದವರೇ ಹಾಸಿಗೆ ಮೇಲೆ ಅಡ್ದಾಗಿದ್ದಾರೆ. ತಟ್ಟನೆ ನಿದ್ರೆಯೂ ಆವರಿಸಿಬಿಟ್ಟಿದೆ. ಸ್ವಲ್ಪ ಸಮಯವಾಗಿರಬಹುದು. ತಟ್ಟನೆ ಯಾರೋ ಬಡಿದು ಎಬಿಸಿದಂತೆ ಎಚ್ಚರವಾಗಿದೆ. ಕಣ್ಣು ಬಿಟ್ಟು ಸುಮ್ಮನೇ  ಅತ್ತಿತ್ತ ತಲೆಯಲ್ಲಾಡಿಸಿ ಮಂಚದ ಪಕ್ಕ ಇದ್ದ ಕುರ್ಚಿಯ ಮೇಲೆ ಮನುಷ್ಯ ಆಕೃತಿಯೊಂದು ಇವರತ್ತಲೇ ನೋಡುತ್ತಾ ಕುಳಿತಿದೆ. ಮೊದಲಿಗೆ ಎದೆ ಝಾಲ್ ಎಂದಿದೆ. ಇವನ್ಯಾರು.. ಕಳ್ಳನಾ..? ದರೋಡೆ ಕೋರನಾ... ಈ ಕ್ಷಣ ಏನು ಮಾಡುವುದು ಇದೆಲ್ಲಾ ನನ್ನ ಭ್ರಮೆಯ ಎಂಬಿತ್ಯಾದಿ ಗೊಂದಲಗಳು ಆ ಕ್ಷಣದಲ್ಲಿ ಹಾಗೆಯೇ ಬಂದು ಹೋಗಿವೆ. ಆದರೆ ಆತ ನಿಚ್ಚಳವಾಗಿ ಕುಳಿತಿದ್ದಾನೆ. ಕಣ್ಣ ಬಾಲಿ ಪ್ರಕಾಶಮಾನವಾದ ಎರಡು ಹರಳುಗಳಿವೆ. ಅದು ಬಿಟ್ಟರೆ ಇಡೀ ಆಕೃತಿ ಬರಿಯ ಛಾಯೆಯಂತಿದೆ. ಮಂದ ಬೆಳಕಿನಲ್ಲಿ ಇವರತ್ತಲೇ ಮುಖ ಮಾಡಿ ಕುಳಿತಿರುವ ಆತನ ಮುಖ ಮಂದ ಬೆಳಕಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಮೊದಲಿಗೆ ಗಾಬರಿಯಾದರೂ ಸ್ವಲ್ಪ ಧೈರ್ಯ ತಂದು ಕೊಂಡವರು ಏಯ್ ಯಾರಪ್ಪಾ ನೀನು... ಎಂದಿದ್ದಾರೆ. ಉತ್ತರ ಬಂದಿಲ್ಲ. ಯಾರೋ ನೀನು ಸ್ವಲ್ಪ ದನಿ ಏರಿಸಿದ್ದಾರೆ. ಸ್ವಲ್ಪ ತಡಬಡಾಯಿಸಿದ್ದಾರೆ.
ಆಗ ನಿಧಾನಕ್ಕೆ ಮೇಲೆ ಎದ್ದು ನಿಂತಿದೆ ಆ ಆಕೃತಿ. ಒಂದು ತಾರಾ ಹೊಗೆಯ ಆಕೃತಿಯಂತೆ ಭಾಸವಾಗಿದೆ ಇವರಿಗೆ. ನಿಧಾನಕ್ಕೆ ಎದ್ದ ಅದು ಹಾಗೆಯೇ ಬಾಗಿಲು ಹತ್ತಿರ ಸರಿದು ಹೋಗಿದೆ. ಅಷ್ಟೇ. ಅದಾದ ನಂತರ ಎದ್ದು ಲೈಟ್ ಆನ್ ಮಾಡಿದವರಿಗೆ ಹಾಕಿದ ಬಾಗಿಲು ಚಿಲಕ ಅಣಕಿಸಿದಂತಾಗಿದೆ. ಆದರೆ ಅದು ಯಾರು? ದೆವ್ವ ಭೂತ ಯಾವುದನ್ನೂ ನಂಬದ ಅವರಿಗೆ ಏನು ಮಾಡಬೇಕೋ ತೋಚಿಲ್ಲ. ಇದೆನ್ನ ಭ್ರಮೆಯಾ ಅಥವಾ ನಿಜಕ್ಕೂ ಅದ್ಯಾರೋ ಕುಳಿತಿದ್ದರಾ? ಹಾಗಾದರೆ ಅದು ದೆವ್ವ ಇರಬಹುದಾ?
ಸುಮಾರು ಹೊತ್ತು ನಿದ್ರೆ ಮಾಡದೆ ಹಾಗೆಯೇ ಒಂದರ ಮೇಲೊಂದು ಸಿಗರೇಟು ಸುಡುತ್ತಾ ಅದೇ ಶಾಕ್ ನಲ್ಲಿ ಕುಳಿತುಬಿ್ಟ್ಟಿದಾರೆ. ಬೆಳಿಗ್ಗೆಯಾದ ತಕ್ಷಣ ರಿಸೆಪ್ಶನ್ ಕೌಂಟರ್ ಗೆ ಓಡಿ ಹೋದರೆ ಆತ ಅಲ್ಲೇ ಕವುಚಿ ಮಲಗಿದ್ದಾನೆ. ಇವರೇ ಎಬ್ಬಿಸಿದ್ದಾರೆ. ನಡೆದ ವಿಷಯ ಹೇಳಿದ್ದಾರೆ. ಸಾರ್.. ನಾವು ಆ ರೂಂ ಯಾರಿಗೂ ಕೊಡೋದಿಲ್ಲ ಸಾರ್. ಅಲ್ಲೊಬ್ಬ ವ್ಯಕ್ತಿ ಸುಮಾರು ದಿನದ ಹಿಂದೆ ಬಂದವನು ವಾರಗಟ್ಟಲೆ ಆ ರೂಮಲ್ಲೇ ಇದ್ದ. ಬೆಳಿಗ್ಗೆಯಿಂದ ಸಂಜೆಯವರೆಗೂ ಅಲ್ಲೇ ಇರೋನು. ಸಂಜೆ ಒಂದು ಸುತ್ತು ಬಂದು ಸುತ್ತಾಡಿ ಮತ್ತೆ ಎಣ್ಣೆ ಬಾಟಲು ತಗೊಂಡು ಒಳಗೆ ಹೋಗೋವ್ನು..ಯಾರ್ನೂ ಮಾತಾಡಿಸ್ತಾನೆ ಇರ್ಲಿಲ್ಲ...ನೋಡಿದ್ರೆ ಸ್ಮೈಲ್ ಮಾಡೋನು ಅಷ್ಟೇ.. ಸ್ವಲ್ಪ ದಿನ ಆದ್ಮೇಲೆ ಅವನು ಹೊರಗೆ ಬರ್ಲಿಲ್ಲ. ಹೋಗಿ ನೋಡಿದ್ರೆ ಅಲ್ಲೇ ನೇಣು ಹಾಕ್ಕೊಂಡು ಸತ್ತು ಹೋಗಿದ್ದ ಸಾರ್.. ಆಮೇಲಿಂದ ಆ ರೂಮಲ್ಲಿ ಕಾಟ ಶುರುವಾಯಿತು ನೋಡಿ. ಯಾರಾದ್ರೂ ರೂಮಿಗೆ ಬಂದ್ರೆ ಹಾಸಿಗೆ ಪಕ್ಕದಲ್ಲಿ ಮಲಗಿದಂತೆ...ಪಕ್ಕದಲ್ಲಿ ಕೂತಂಗೆ...ನೇತಾಡೋ ಹಂಗೆ.. ಆಮೇಲೆ ನಮ್ಮ ಸಾವುಕಾರ್ರು ಮಾಡೋ ಪೂಜೆ ಎಲ್ಲಾ ಮಾಡಿಸಿದರು.. ಆದರೂ ಕಂಪ್ಲೇಂಟ್ ಇದ್ದೇ ಇತ್ತು. ಅದಕ್ಕೆ ಅದನ್ನು ಯಾರಿಗೂ ಕೊಡ್ತಿರಲಿಲ್ಲ.. ರಾತ್ರಿ ನೀವು ರೂಮು ಬೇಕೇ ಬೇಕು ಅಂದ್ರಲ್ಲಾ..ಅದಕ್ಕೆ ಕೊಟ್ಟಿದ್ದು ಎಂದ.
ಅದಾದ ನಂತರ ಊರು ಸೇರಿಕೊಂಡ ಅವರಿಗೆ ಮೂರು ದಿನ ಜ್ವರ ಬಂದು ನರಳುವ ಹಾಗೆ ಆಯಿತಂತೆ. ಆನಂತರ ದೇವರ ಪೂಜೆ ಮಾಡಿಸಿ, ಈಗ ದೇವರನ್ನು ನಂಬುತ್ತಾರೆ.
ಸುಮ್ಮನೆ ದೆವ್ವ ಭೂತದ ಕತೆಯಿಟ್ಟುಕೊಂಡು ಸಿನಿಮಾ ಮಾಡಿಕೊಡಿ ಎಂದಾಗ ನನಗೆ ಏನು ಕತೆ ಮಾಡುವುದು ಎನಿಸದೇ ಇರಲಿಲ್ಲ. ಯಾಕೆಂದರೆ ಸತ್ತ ಆತ್ಮ/ಪ್ರೇಮಿ .. ಒಂದು ಹಾಂಟೆಡ್ ಹೌಸ್ ಇದನ್ನು ಬಿಟ್ಟು ತಾರ್ಕಿಕವಾಗಿ ಏನಾದರೂ ಮಾಡಿದರೆ ಜನರು ಒಪ್ಪಬಹುದೇನೋ? ಆದರೆ ನಿರ್ಮಾಪಕರು ಒಪ್ಪಬೇಕಲ್ಲ. ಪ್ರಯೋಗ ಎಲ್ಲಾ ಬೇಡಿ ಸಾರ್.. ಸುಮ್ನೆ ಒಂದು ದೆವ್ವದ ಫಿಲಂ ಮಾಡಿ.. ಎಂದು ಅಂದುಬಿಟ್ಟರೆ ಏನು ಮಾಡುವುದು. ಇಷ್ಟಕ್ಕೂ ಹಾರರ್ ಸಿನಿಮಾ ಮಾಡುವುದು ಒಂದು ಸವಾಲೇ. ಆದರೆ ಇತ್ತೀಚಿಗೆ ಅದರಲ್ಲೂ 6-5 ಬಂದ ಮೇಲೆ ಅದರ ಪರಿಕಲ್ಪನೆಯೇ ಬದಲಾಗಿದೆ. ಎಲ್ಲರೂ ನಿಜ ದೆವ್ವ ತೋರಿಸುವ ಎಂದೆ ಹೊರಟಿದ್ದಾರೆ. ಅಲುಗಾಡುತ್ತಾ ಸಾಗುವ ಕ್ಯಾಮೆರಾ, ಕತ್ತಲಲ್ಲಿ ಒಬ್ಬೊಬ್ಬರೇ ಹೋಗುವ ಬುದ್ದಿಗೇಡಿಗಳು, ಮುಖದ ತುಂಬಾ ಪೌಡರ್ ಹಚ್ಚಿಕೊಂಡ ದೆವ್ವ, ಪಿಕ್ನಿಕ್ ಗೆ ಹೋಗಿ ಸಿಕ್ಕಿ ಕೊಳ್ಳುವ ಹುಡುಗ ಹುಡಿಗಿಯರು... ಹೀಗೆ. ಆಡದೆ ಕ್ಲೀಷೆ ಎನಿಸುತ್ತಾದರೂ ಬೇರೆ ಏನು ಸಾದ್ಯತೆಗಳಿವೆ ಎಂಬ ಪ್ರಶ್ನೆ ನನ್ನಲ್ಲೇ ಹಾಕಿಕೊಂಡೆ.
ಇದೆಲ್ಲದಕ್ಕೂ ಮೊದಲು ದೆವ್ವ ಭೂತ ಎಂಬುದರ ಸ್ಪಷ್ಟ ಅರ್ಥ ಬೇಕು. ನಿಜವಾ ಸುಳ್ಳಾ ..ಇದನ್ನೆಲ್ಲಾ ಸುಮ್ಮೆನೆ ಒಂದಷ್ಟು ಅದ್ಯಯನ ಮಾಡೋಣ ಎನ್ನುವ ನಿಟ್ಟಿನಲ್ಲಿ ಆರು ತಿಂಗಳು ಕಳೆದೆ ನೋಡಿ. ಒಂದಷ್ಟು ಜನರನ್ನು ಭೇಟಿ ಮಾಡಿದೆ, ಅವರ ಅನುಭವ ಕೇಳಿದೆ. ಅದೆಲ್ಲಾ ರೋಚಕ ನಿಗೂಡ ಎನಿಸದೇ ಇರಲಿಲ್ಲ.
ಮನುಷ್ಯನಿಗೆ ನಿಲುಕದ ಯಾವುದೋ ಅಗೋಚರವಾದದ್ದು ಇರಬೇಕು ಎನಿಸಿತು. ಹಾಗೆಯೇ ಜನರ ಒಂದಷ್ಟು ಅನುಭವ ಕೂಡ ತರ್ಕಕ್ಕೆ ನಿಲುಕಲಿಲ್ಲ. ಅಂತಹ ಅನುಭವದಲ್ಲಿ ಮೇಲಿನ ಅನುಭವ ಕಥನ ಕೂಡ ಒಂದು.

Sunday, August 10, 2014

ಹೀಗೆ ಸುಮ್ಮನೆ...

ಸಿನಿಮಾದ ಚಿತ್ರಕತೆಯೇ ಸಿನಿಮಾದ ಕತೆಯ ಆಧಾರ ಸ್ಥಂಭ. ಹಾಗಾಗಿ ಚಿತ್ರಕತೆಯ ಮೇಲೆ ಒಂದಿಡೀ ಸಿನಿಮಾ ಆಧಾರವಾಗಿರುತ್ತದೆ. ಹಾಗೆಯೇ ಒಂದು ಕತೆಯನ್ನು ಭಿನ್ನವಾಗಿ ನಿರೂಪಿಸಬೇಕೆಂದರೆ ಅದಕ್ಕೆ ಚಿತ್ರಕತೆಯೇ ಮುಖ್ಯವಾದದ್ದು. ಮೊದಲಿಗೆ ಏನನ್ನೋ ತೋರಿಸಿ ಆಮೇಲೆ ಏನನ್ನೋ ತೋರಿಸಿ ತಳಕುಹಾಕಿ ಹೀಗೆ. ಒಂದು ಕತೆಯನ್ನು ಆಸಕ್ತಿಕರ ಮಾಡಿಬಿಡಬಹುದು. ಸುಮ್ಮನೆ ಕುತೂಹಲ ಕೆರಳಿಸುತ್ತಾ ಸಾಗಿ ಕೊನೆಯಲ್ಲಿ ಆ ರಹಸ್ಯವನ್ನು ಬಿಚ್ಚಿಟ್ಟರೆ ನೋಡುಗ ಫುಲ್ ಖುಷಿ.
ನೋಡುತ್ತಾ ನೋಡುತ್ತಾ ಊಹೆ ಮಾಡುತ್ತಾ ಸಾಗುವ ವೀಕ್ಷಕನಿಗೆ ಕೊನೆಯಲ್ಲಿ ಅವನಿಗೆ ನಿಲುಕದ್ದು ಇದ್ದು ಬಿಟ್ಟರೆ ಅವನ ಸಂತಸಕ್ಕೆ ಪಾರವಿಲ್ಲ. ಏಕೆಂದರೆ ಅದು ಬುದ್ದಿವಂತಿಕೆಯ ಪ್ರಶ್ನೆ. ಯಾವಾಗಲೂ ಗೆಲ್ಲುವುದು ಆ ಬುದ್ದಿವಂತಿಕೆಯೇ. ಹಾಗಾಗಿಯೇ ಮೊದಲಿಗೆ ಉಪೇಂದ್ರ ತಮ್ಮ ಎ ಚಿತ್ರದ ಅಡಿಬರಹದಲ್ಲಿ ಬುದ್ದಿವಂತರಿಗೆ ಮಾತ್ರ ಎಂದಿದ್ದರು.
ಆದರೆ ಎ ಚಿತ್ರದ ಚಿತ್ರಕತೆ ಏನೇ ತಿರುವು ಮುರುಗಾಗಿದ್ದರೂ ಕತೆಗಿಂತ ಚಿತ್ರಕತೆಯಲ್ಲಿ ಸತ್ವವಿತ್ತು. ಬರೀ ದೃಶ್ಯದಲ್ಲೇ ಮಜಾ ಇತ್ತು. ಹಾಗಾಗಿಯೇ ಸಿನಿಮಾ ಅರ್ಥವಾಗದಿದ್ದರೆ ಇನ್ನೊಮ್ಮೆ ನೋಡಲೂ ಸಿನಿಮಾ ಬೇಸರ ಆಗುತ್ತಿರಲಿಲ್ಲ. ಮೊದಲ ಸಿನಿಮಾದೊಳಗಿನ ಸಿನಿಮಾದಲ್ಲಿನ ದೃಶ್ಯಗಳು ವಿಡಂಬನೆ ಜೊತೆಗೆ ಮಾಸ್ ಆಗಿತ್ತು. ಅದರಲ್ಲಿ ಅಬ್ಬರ ಆರ್ಭಟ ಇತ್ತು. ಇನ್ನೊಮ್ಮೆ ಮಗದೊಮ್ಮೆ ನೋಡುವ ಪ್ರೇಕ್ಷಕ ಅರ್ಥ ಮಾಡಿಕೊಳ್ಳುವ ಜೊತೆಗೆ ದೃಶ್ಯದ ದ್ರವ್ಯಕ್ಕೆ ಮಾರುಹೋಗುತ್ತಿದ್ದ. ಅದನ್ನು ನೋಡಿ ಮಜಾ ಮಾಡುತ್ತಿದ್ದ. ಎಲ್ಲಾ ತಿರುವು ಮುರುಗು ಚಿತ್ರಕತೆಯ ಸಿನಿಮಾಗಳಿಗೆ ಗೊಂದಲಮಯ ನಿರೂಪಣೆಗೆ ಮುಖ್ಯವಾದದ್ದು ಅಂತಹುದ್ದೆ ಮಜಾ ಕೊಡುವ ಚಿತ್ರಕತೆ ಎನ್ನಬಹುದು. ಅದು ಪದೇ ಪದೇ ನೋಡಿಸಿಕೊಳ್ಳುವಂತಿದ್ದರೆ ಸೂಪರ್. ಇಲ್ಲವಾದಲ್ಲಿ ಸಿನಿಮಾ ಮೊದಲ ವೀಕ್ಷಣೆಗೆ ಗೊಂದಲ ಮೂಡಿಸಿದರೂ ಎರಡನೆಯ ಸಾರಿ ನೋಡಿ ತಿಳಿಯೋಣ ಅಂದುಕೊಂಡರೂ ಚಿತ್ರಮಂದಿರದೊಳಗೆ ಹೋಗಲು ಮನಸ್ಸು ಹಿಂಜರಿದೆ ಹಿಂಜರಿಯುತ್ತದೆ.
ನೋಲನ್ ನಿರ್ದೇಶನದ ಫಾಲೋಯಿಂಗ್, ಮೆಮೆಂಟೊ ಗಿಂತ ಮಜಾ ಕೊಡುವುದು ಇನ್ಸೆಪ್ಶನ್ . ಅದಕ್ಕೆ ಕಾರಣ ಮೊದಲೆರೆಡು ಚಿತ್ರಗಳಲ್ಲಿ ನೋಡಿಸಿಕೊಳ್ಳುವ ದೃಶ್ಯ ವೈಭವ ಇಲ್ಲ. ಆದರೆ ವಸ್ತುವಿದೆ. ಆದರೆ ಇನ್ಸೆಪ್ಶನ್ ನಲ್ಲಿ ವಸ್ತು, ದೃಶ್ಯ ವೈಭವ ಎರಡೂ ಇದೆ.
ಮೊನ್ನೆ ನೋಡಿದ ಬಹುಪರಾಕ್, ಅದಕ್ಕೂ ಮುನ್ನ ಬಂದ ಉಳಿದವರು ಕಂಡಂತೆ , ಲೂಸಿಯ ಚಿತ್ರಗಳನ್ನು ನೋಡಿದಾಗ ನನಗನ್ನಿಸಿದ್ದು. ಬಹುಪರಾಕ್ ಒಬ್ಬನ ಜೀವನ ಕಥನ. ಅದನ್ನು ನಿರ್ದೇಶಕ ಸುನಿ ಮೂರು ಭಾಗಗಳಾಗಿ ಮಾಡಿದ್ದಾರೆ. ಮೂರರ ಘಟ್ಟಗಳನ್ನು ಒಂದರಪಕ್ಕ ಒಂದರಂತೆ ಜೋಡಿಸುತ್ತಾ ಸಾಗಿದ್ದಾರೆ. ಹಾಗಂತ ಮೂರೂ ಕತೆಗಳೂ ಒಬ್ಬನದು ಎಂದು ನಿಖರವಾಗಿ ಹೇಳುವ ಹಾಗಿಲ್ಲ. ಹೇಳುವುದಾದರೂ ಕಾಲಘಟ್ಟವನ್ನು ಹೆಸರಿಸುವ ಹಾಗಿಲ್ಲ. ಉದಾಹರಣೆಗೆ ಅವಳಿ ನಾಯಕಿಯರನ್ನು ಪ್ರೀತಿಸುವ ನಾಯಕನದೆ ಇಡೀ ಸಿನೆಮಾದ ಕತೆ ಅವನದೇ ಎನ್ನುವುದಾದರೆ ಆತ ಮುದುಕನಾಗುವವರೆಗೆ ಕತೆ ಅವಲೋಕಿಸಿದರೆ, ಅದ್ಯಾವ ಕಾಲಘಟ್ಟದಲ್ಲಿ ನಡೆಯುತ್ತದೆ ಎಂಬುದು ಗೊಂದಲಕ್ಕೀಡು ಮಾಡುತ್ತದೆ. ಈವತ್ತಿನ ಮೊಬೈಲ್, ಪರಿಸ್ಥಿತಿ ಅಲ್ಲೂ ಇದೆ. ಮುದುಕನ ಕತೆಯಲ್ಲೂ ಇದೆ. ಭೂಗತದೊರೆ ಕತೆಯಲ್ಲೂ ಇದೆ. ಅಂದರೆ ಕತೆ ಈವತ್ತಿಗೆ ಪ್ರಾರಂಭವಾಗಿದ್ದರೆ ಮುಂದಿನ ನಲವತ್ತು ವರ್ಷದ ಚಿತ್ರಣ ಅಲ್ಲಿರಬೇಕಿತ್ತು. ಅಥವಾ ಕತೆ ಈವತ್ತಿಗೆ ಮುಗಿದಿದ್ದರೆ ಹಿಂದಿನ ನಲವತ್ತು ವರ್ಷದ ಚಿತ್ರಣ ಇರಬೇಕಿತ್ತು. ಆದರೆ ಮೂರು ಕತೆಗಳು ಸಮಾನ ಕಾಲಘಟ್ಟದಲ್ಲಿ ನಡೆಯುತ್ತವೆ. ಸರಿ ಇದಕ್ಕೊಂದು ಉದಾತ ಅರ್ಥವನ್ನು ಕೊಟ್ಟು ಅದು ಎಲ್ಲರ ಕತೆಯೂ ಇರಬಹುದು, ಯಾವಾಗ ಬೇಕಾದರೂ ನಡೆಯಬಹುದು ಎಂದು ಬರೆದುಬಿಡಬಹುದು. ಓದಿದವರು ಅದನ್ನು ಮೆಚ್ಚಲೂ ಬಹುದು. ಆದರೆ ನೋಡುಗ?
ಬಹಳ ಜಾಗರೂಕತೆಯಿಂದ ಚಿತ್ರಕತೆ ಹೆಣೆದು ಕೊನೆಯವರೆಗೂ ಸಾಗಿಸಿ ಕೊನೆಯಲ್ಲಿ ಒಂದೇ ಕಥನ ಎನ್ನುವುದನ್ನು ಒಂದೇ ದೃಶ್ಯದಲ್ಲಿ ಸಾದರ ಪಡಿಸುತ್ತಾರೆ ಸುನಿ. ಆದರೆ ಅಲ್ಲಿಯವರೆಗೆ ನೋಡಿ ಅಕಸ್ಮಾತ್ ಅರ್ಥವಾಗದೆ ಇದ್ದರೇ ಮತ್ತೊಮ್ಮೆ ನೋಡಿ ಅರ್ಥ ಮಾಡಿಕೊಳ್ಳೋಣ ಎನ್ನಲು ದೃಶ್ಯ ಕಥನದಲ್ಲಿ ಮಜಾ ಸಿಗುವುದಿಲ್ಲ. ಮತ್ತು ಮೊದಲ ನೋಟಕ್ಕೆ ಪ್ರೇಕ್ಷಕ ಹೈರಾಣ ಆಗಿರುತ್ತಾನಾದ್ದರಿಂದ ಆತನ ಆಸಕ್ತಿ ಕರಗಿಹೋಗಿರುತ್ತದೆ. ಬಹುಶ ಉಳಿದವರು ಕಂಡಂತೆ ಚಿತ್ರದ ಸೋಲಿಗೂ ಇದೇ ಕಾರಣವಿರಬಹುದು. ಉಳಿದವರು ಕಂಡಂತೆ ಚಿತ್ರದ ಕತೆಯ ಭಾಗ ಭಾಗ ನಿರೂಪಣೆಯಲ್ಲಿ ಮಜಾ ಇರಲಿಲ್ಲವಾದರೂ ಚಿತ್ರಣದಲ್ಲಿ ಅಚ್ಚುಕಟ್ಟಿತ್ತು. ಆದರೆ ಮತ್ತೊಮ್ಮೆ ನೋಡೋಣ ಎಂದುಕೊಳ್ಳದ ಪ್ರೇಕ್ಷಕ ತಲೆಬಿಸಿ ಎಂದುಕೊಂಡ...ಬಹುಪರಾಕ್ ಕೂಡ ಅದೇ ನಿಟ್ಟಿನಲ್ಲಿದೆಯಾ?
ಪ್ರಯೋಗಾತ್ಮಕ ಚಿತ್ರವನ್ನು ಮಾಡುವಾಗ ಯಾವ ಪ್ರೇಕ್ಷಕನಿಗೆ ನಾವದನ್ನು ನೀಡುತ್ತಿದ್ದೇವೆ ಎಂದುಕೊಂಡರೆ ಒಳ್ಳೆಯದು ಎನ್ನಬಹುದು. ಯಾಕೆಂದರೆ ಅದನ್ನು ಸರ್ವ ರೀತಿಯ ಎಲ್ಲಾ ವರ್ಗದ ವೀಕ್ಷಕರು ನೋಡಲಿ ಎನ್ನಬಹುದಾದರೆ ದೃಶ್ಯಾವಳಿಗಳಲ್ಲಿ ಆ ತನವನ್ನು ಸೇರಿಸಲೇಬೇಕಾಗುತ್ತದೆ. ಇಲ್ಲವಾದಲ್ಲಿ ಒಟ್ಟಾರೆ ಮಜಾ ಕೊಡಬಹುದು ಎಂದುಕೊಳ್ಳುವ ಅಂಶ ಬಿಡಿಯಾಗಿ ನೀರಸ ಎನಿಸುತ್ತದೆ ಅಥವಾ ಬಿಡಿಯಾಗಿ ಸೂಪರ್ ಎನಿಸುವ ಅಂಶ ಒಟ್ಟಾರೆಯಾಗಿ ಪೇಲವ ಎನಿಸುತ್ತದೆ.
ಹಾಗೆಯೇ ಕೆಲವು ಕತೆಗಳಿಗೆ ಅದರದೇ ಆದ ಮಿತಿಗಳಿರುವುದು ಸತ್ಯ. ನನ್ನದೇ ಚಿತ್ರದ ಉದಾಹರಣೆ ತೆಗೆದುಕೊಂಡರೆ ನನ್ನ ಕತೆ ಹೇಳಿ ನಿರ್ಮಾಪಕರಿಗೆ ಹೇಳಿದ್ದೆ. ನಮ್ಮದು ಒಮ್ಮೆ ಮಾತ್ರ ನೋಡುವ ಸಿನಿಮಾ ಯಾಕೆಂದರೆ ಒಂದು ಸಸ್ಪೆನ್ಸ್ ಚಿತ್ರದ ಅಂತ್ಯ ಒಮ್ಮೆ ಗೊತ್ತಾದರೆ ಮತ್ತೊಮ್ಮೆ ಯಾಕೆ ನೋಡುತ್ತಾನೆ ಪ್ರೇಕ್ಷಕ ಎಂದು. ಅದು ಸತ್ಯವೇ ಆಗಿದ್ದರೂ ನಿರ್ಮಾಪಕರು ನನ್ನ ಮುಖ ನೋಡಿದ್ದರು.
ಒಟ್ಟಿನಲ್ಲಿ ಒಬ್ಬ ಚಿತ್ರಕರ್ಮಿ ಒಂದು ಕತೆ ಮಾಡಿದ ನಂತರ ಕತೆಯ ಹೊರಗೆ ನಿಂತು ಒಮ್ಮೆ ವಿಮರ್ಶೆ ಮಾಡಿದರೆ ಒಳ್ಳೆಯದೇನೋ? ಇಲ್ಲವಾದಲ್ಲಿ ಭ್ರಮಾನಿರಸನ ಕಟ್ಟಿಟ್ಟ ಬುತ್ತಿ.

  

Wednesday, July 30, 2014

ಹೀಗೊಂದು ತಲೆ ಹರಟೆ.

ಮೊನ್ನೆ ಒಗ್ಗರಣೆ ಚಿತ್ರ ನೋಡುತ್ತಿದ್ದೆ. ಅನಿವಾರ್ಯವಾಗಿಯಾದರೂ ಮೂರು ಮೂರು ಸಾರಿ ಇಷ್ಟಪಟ್ಟು ನೋಡಿದ ಸಿನಿಮಾ ಒಗ್ಗರಣೆ. ಅಲ್ಲೊಂದು ದೃಶ್ಯವಿದೆ. ನಾಯಕ ಕಾಳಿದಾಸ ಕಾಡಿನಜೀವಿ ಜಗ್ಗಯ್ಯನನ್ನು ಕರೆತಂದು ಮನೆಯಲ್ಲಿರಿಸಿಕೊಂಡಾಗ ಅದು ರಾಜಕಾರಣಿಗೆ ಗೊತ್ತಾಗುತ್ತದೆ. ಆ ಸನ್ನಿವೇಶದಲ್ಲಿ ಇಬ್ಬರಿಗೂ ಮಾತಿಗೆ ಮಾತು ಬೆಳೆಯುತ್ತದೆ. ಆಗ ರಾಜಕಾರಣಿ ಇನ್ಮೇಲೆ ನಾನೇ ನಿನಗೆ ವಿಲನ್ ತಿಳ್ಕೋ ಎನ್ನುತ್ತಾನೆ. ಆಗ ಪ್ರತಿಕ್ರಿಯಿಸುವ ಪ್ರಕಾಶ್ ರಾಜ್ ನನಗೆ ವಿಲ್ಲನ್ನಾ? ಎನ್ನುತ್ತಾರೆ. ಆ ಒಂದು ಸಂಭಾಷಣೆಗೆ ಇಡೀ ಚಿತ್ರಮಂದಿರ ಶಿಳ್ಳೆ ಹಾಕಿತ್ತು.
ಆ ಕ್ಷಣದಲ್ಲಿ ಅಲ್ಲಿನ ಅಸಹಾಯಕ ಕಾಳಿದಾಸನನ್ನು ಮರೆತ ಪ್ರೇಕ್ಷಕ ಮಾಮೂಲಿ ಖಳ ಪ್ರಕಾಶ ರಾಜನನ್ನು ತಟ್ಟನೆ ಮನಸ್ಸಿಗೆ ತಂದುಕೊಂಡಿದ್ದ. ಅಂದರೆ ಪ್ರಕಾಶ ತಮ್ಮ ಖಳನಾಯಕನ ಪಾತ್ರದಲ್ಲಿ ಅದೆಷ್ಟರ ಮಟ್ಟಿಗೆ ಬೇರೂರಿದ್ದಾರೆ ಜನಮಾನಸದಲ್ಲಿ ಎನಿಸದಿರಲಿಲ್ಲ. 
ಒಬ್ಬ ಕಲಾವಿದ ಕೆಲವು ಪಾತ್ರಗಳಿಂದ ಜನರಲ್ಲಿ ಬೇರೂರಿ ಬಿಡುತ್ತಾನೆ. ಅದು ಒಳ್ಳೆಯದಾ ಕೆಟ್ಟದಾ? ಅದು ಗೊತ್ತಾಗದ ಉತ್ತರವಿಲ್ಲದ ಪ್ರಶ್ನೆ. ಕೆಲವೊಮ್ಮೆ ಅದೇ ವರವಾದರೆ ಮತ್ತೆ ಕೆಲವೊಮ್ಮೆ ಅದೇ ಶಾಪವಾಗುತ್ತದೆ. ಉದಾಹರಣೆಗೆ ಕನ್ನಡೇತರ ಭಾಷೆಗಳಲ್ಲಿ ದೊಡ್ಡ ನಾಯಕರುಗಳಿಗೆ ಕೇರ್ ಮಾಡದ ಅಬ್ಬರಿಸುವ ಪ್ರಕಾಶ್ ರಾಜ್ ಕನ್ನಡಕ್ಕೆ ಬಂದಾಗ ಅಸಹಾಯಕರಂತೆ ಆಗಿಬಿಡುತ್ತಾರೆ. ಅವರ ನಾನು ನನ್ನ ಕನಸು ಚಿತ್ರದಲ್ಲೂ ಒದ್ದಾಡುತ್ತಾರೆ. ಎಲ್ಲಿ ಹೋದ ಆ ಖದರ್ ಖಳನಾಯಕ ಎನಿಸದೇ ಇರದು ಪ್ರೇಕ್ಷಕನಿಗೆ. ನನಗೆ ಎಷ್ಟೋ ಸಲ ಹಾಗೆ ಅನಿಸಿದ್ದಿದ್ದೆ.
ಇನ್ನೊಂದು ಚಿತ್ರ ರೋಜ್ ನಲ್ಲಿ ಸಾಯಿಕುಮಾರ್ ಅಭಿನಯಿಸಿದ್ದಾರೆ. ಅದೂ ಖಾಕಿಧಾರಿಯಾಗಿ. ಇನ್ನು ಕೇಳಬೇಕೆ. ? ನಾಯಕನಾಗಿ, ಪೋಲಿಸ್ ಆಗಿ  ಖಳರನ್ನು ದುಷ್ಟರನ್ನು  ಬರೀ ಹೊಡೆಯುವುದರಲ್ಲಷ್ಟೇ ನಿಷ್ಣಾತರಲ್ಲ ಸಾಯಿ. ಮುಲಾಜಿಲ್ಲದೆ ಅವಾಚ್ಯ ಶಬ್ಧಗಳಿಂದ ಅಕ್ಕನ, ಅಮ್ಮನ್, ಗಾಂಡು ಚೂತ್ಯ ಬೈಯುವುದರಲ್ಲಿ ಎತ್ತಿದ ಕೈ. ಎದುರಿನವನು ಯಾರೇ ಆಗಿರಲಿ ಬೈದೆ ಮಾತನಾಡುವುದು ಅವರ ಗುಣ. ರೋಜ್ ಚಿತ್ರದಲ್ಲಿ ಅವರು ಬಂದ ತಕ್ಷಣ ಜನರಿಗೆಲ್ಲಾ ರೋಮಾಂಚನ. ಅದರಲ್ಲೂ ಮುಂದಿನ ಬೆಂಚಿನ ಅಭಿಮಾನಿಗಳಂತೂ ಅವರ ಬಾಯಿಯಿಂದ ಉದುರುವ ಶಬ್ಧಗಳನ್ನು ಕೇಳಲು ಕಾತುರರಾಗತೊಡಗಿದರು. ಅಲ್ಲಿಯವರೆಗೆ ಆಕಳಿಸುತ್ತಾ ಏನೇನೋ ಕೌಂಟರ್ ಕೊಡುತ್ತಿದ್ದ ಪ್ರೇಕ್ಷಕನಿಗೆ ಸಾಯಿ ಕುಮಾರ್ ಬಾಯಿ ಮುಚ್ಚಿಸಿದ್ದರು. ಆದರೆ ಚಿತ್ರದಲ್ಲಿ ಸಾಯಿಕುಮಾರ್ ಗೆ ನಿರ್ದೇಶಕರು ಕಡಿವಾಣ ಹಾಕಿದ್ದರಿಂದ ಅವರು ಯಾರನ್ನೂ ಬೈಯಲಿಲ್ಲ. ಪ್ರೇಕ್ಷಕನಿಗೆ ಬೇಸರವಾದದ್ದಂತೂ ಸತ್ಯ.
ಹೌದು. ಕೆಲವು ಕಲಾವಿದರು ಹಾಗಿದ್ದರೆನೆ ಚೆನ್ನ ಎನಿಸಿಬಿಡುತ್ತದೆ. ಅವರೂ ನಮಗೆ ಇದೆ ತಕ್ಕದ್ದು ಎನ್ನುವಂತೆ ಮಾಡುತ್ತಾರೆ. ಅದರಿಂದ ಹೊರಬರುತ್ತಾರೋ ಇಲ್ಲವೋ? ಪ್ರೇಕ್ಷಕ ಮಾತ್ರ ಅದರಿಂದ ಹೊರಬರುವುದಿಲ್ಲ. ನನಗೆ ಹಾಲಿವುಡ್ ಚಿತ್ರದಲ್ಲಿ ಟಾಮ್ ಲಿ ಜೋನ್ಸ್ ಇದ್ದರೆ ಆತ ಯಾರನ್ನೋ ಹುಡುಕೆ ಹುಡುಕುತ್ತಾನೆ ಎನಿಸುತ್ತದೆ.  ಆತನ ಸಿನಿಮಾಗಳನ್ನು ನೋಡಿ ಬಹುತೇಕ ಚಿತ್ರದಲ್ಲಿ ಆತನ ಕೆಲಸ ಹುಡುಕುವುದು. ಯಾವುದೋ ಕೊಲೆಯನ್ನೂ ಕೊಲೆಗಾರರನ್ನು ಬೆನ್ನಟ್ಟುವುದು ತಾಮಿಲಿ ಜೋನ್ಸ್ ಗೆ ಖುಷಿ ಎನಿಸುತ್ತದೆ. ಒಂದು ಚಿತ್ರದಲ್ಲಂತೂ ಅತಿರೇಕ ಎನ್ನುವಂತೆ ತನ್ನನ್ನೇ ಹುಡುಕುತ್ತಿರುತ್ತಾನೆ.
ಹಾಗೆಯೇ ಇಮ್ರಾನ್ ಹಶ್ಮಿ ಯ ಬಗ್ಗೆ ನನ್ನ ಗೆಳೆಯನೊಬ್ಬ ಹೇಳುತ್ತಿದ್ದ. ಇವನೇನು ಗುರು ಕಂಡವರ ಹೆಂಡ್ರು ಅಂದ್ರೆ ಬಾಯಿ ಬಿಡ್ತಾನೆ ಎಂದು. ಕೇಳಲಿಕ್ಕೆ ನಗು ತರಿಸುತ್ತಾದರೂ ಇಮ್ರಾನ್ ಪರಪತ್ನಿ ಪ್ರೇಮಿ ಎನಿಸುತ್ತದೆ. ಹಾಗೆ ಇಮ್ರಾನ್ ಬೇರೆ ನಾಯಕರ ರೀತಿ ಪ್ರೀತಿಸುವುದಿಲ್ಲ. ಪ್ರೀತಿಯೋ ಮದುವೆಯೋ ಮೊದಲಿಗೆ ಮಂಚಕ್ಕೆ ಎಳೆದುಕೊಳ್ಳಲೆ ಬೇಕು, ಮುತ್ತಿಡಬೇಕು...ಜನರಿಗೂ ಇಮ್ರಾನ್ ಹೀಗೆ ಮಾಡಿದರೆ ಖುಷಿ. ಅದು ಬಿಟ್ಟು ಆತ ಯಾರೇ ನೀನು ಚಲುವೆ ನಾಯಕನಂತೆ, ಬೆಳದಿಂಗಳ ಬಾಲೆಯ ರೇವಂತ್ ನಂತೆ ಮುಖ ನೋಡದೆ, ಮುಟ್ಟದೆ ಮುತ್ತಿಡದೆ, ಬೆತ್ತಲೆ ಬೆನ್ನ ಮೇಲೆ ಕೈಯಾಡಿಸದೆ ಪ್ರೀತಿಸಲಾರನೇನೋ ಎನಿಸುತ್ತದೆ. ಹಾಗೆ ಆತ ಪ್ರೀತಿಸಿದರೂ ನಾಯಕಿಯನ್ನು ಆತ ಮುಟ್ಟದಿದ್ದರೆ ಜನರಿಂದ ಬೈಸಿಕೊಳ್ಳಲಿಕ್ಕೂ ಸಾಕು..
ಹಾಗೆಯೇ ಕೆಲವು ದಿವಸಗಳ ಹಿಂದೆ ದೇವರಾಜ್ ಪೋಲಿಸ್ ಡಿಪಾರ್ಟ್ಮೆಂಟ್ ಅನ್ನು ಗುತ್ತಿಗೆ ತೆಗೆದುಕೊಂಡ ಹಾಗೆ ಆದೆ ಪಾತ್ರಗಳನ್ನೂ ನಿರ್ವಹಿಸಿದ್ದರು. ಆಗೆಲ್ಲಾ ಏನು ದೇವರಾಜ್ ಅವರು ಶೂಟಿಂಗ್ ಎಂದಾಕ್ಷಣ ಮನೆಯಿಂದಲೇ ಪೋಲಿಸ್ ಯುನಿಫಾರ್ಮ್ ಹಾಕಿಕೊಂಡು ಹೋಗಿಬಿಡುತ್ತಾರಾ? ಎನಿಸುತ್ತಿತ್ತು.
ಹಾಗೆಯೇ ಅಲ್ಲಿಂದಿಲ್ಲಿಗೆ ಚಾಡಿ ಹೇಳಲು,  ಹಾಗೆಯೇ ಮನೆ ಮುರಿಯಲು ಸುಂದರರಾಜ್, ಹೆಣ್ಣು ಮಗಳನ್ನು ಮದುವೆ ಮಾಡಿಕೊಡುತ್ತೇನೆ ಎಂದರೂ ಬಿಡದೆ ಅತ್ಯಾಚಾರ ಮಾಡಲು ಮುಂದಾಗುವ ಕೀರ್ತಿ ರಾಜ್, ಕಂಡ ತಕ್ಷಣ ಮಾಸ್ತರ್ ಎನಿಸುವ ಸದಾಶಿವ ಬ್ರಹ್ಮಾವರ್, ಬಜಾರಿ ಅತ್ತೆಯಾಗಿ ಸತ್ಯಭಾಮ ಮುಂತಾದವರು ನಮ್ಮ ಮನಸ್ಸಿನಲ್ಲಿ ಆಯಾ ಪಾತ್ರಗಳ ಮೂಲಕ ಬೇರೂರಿಬಿಟ್ಟಿದ್ದಾರೆ. ಕೀರ್ತಿರಾಜ್ ಹುಡುಗಿಯೊಂದಿಗೆ ಸಭ್ಯವಾಗಿ ಮಾತನಾಡುತ್ತಾ ನಿಂತಿದ್ದರೂ ಅದೆಲ್ಲಿ ಪಕ್ಕಕ್ಕೆಳೆದೊಯ್ಯುತ್ತಾರೋ, ರೇಪ್ ಮಾಡುತ್ತಾರೋ ಎನಿಸುತ್ತದೆ. ಮಂಗಳಾರತಿ ತಟ್ಟೆ ಹಿಡಿದು ಸೊಸೆಯನ್ನು ಸತ್ಯಭಾಮ ಸಂತೋಷದಿಂದ ಮನೆಗೆ ಬರಮಾಡಿಕೊಂಡರೂ ಅದರಲ್ಲಿ ಏನೋ ಹುನ್ನಾರವಿರಬೇಕು ಎನಿಸದೇ ಇರದು. ಹಾಗೆಯೇ ಕಾಶಿನಾತ್ ಸುಮ್ಮನೆ ಮಾತನಾಡಿದರೂ ಅದರಲ್ಲಿ ಪೋಲಿತನವನ್ನೂ ಕಲ್ಪ್ಸಿಕೊಳ್ಳುವ ಪ್ರೇಕ್ಷಕರಿಗೆ ಕೊರತೆಯಿಲ್ಲ.ಎಷ್ಟೇ ಅಶಕ್ತ ಕೇಡಿಯಿದ್ದರೂ ಅನಂತನಾಗ್, ರಿಷಿ ಕಪೂರ್ ಹೊಡೆದಾಡಲು ಹಿಂದೆ ಮುಂದೆ ನೋಡುತ್ತಾರೆ ಎನಿಸುತ್ತದೆ. ಹಾಗೆಯೇ ಒಂದಷ್ಟು ದಿನದ ಹಿಂದೆ ರಮೇಶ್ ಪ್ರೀತಿಸಿ ಮನಸ್ಸಿನಲ್ಲಿಯೇ ಆ ಪ್ರೀತಿಯನ್ನು ಇಟ್ಟುಕೊಳ್ಳುತ್ತಿದ್ದರು. ಪ್ರೇಯಸಿಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಅವರ ಮದುವೆಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಕಣ್ಣೀರಿಡುತ್ತಾ ನಿಂತುಕೊಳ್ಳುತ್ತಿದ್ದರು.ನಮ್ಮೂರಲ್ಲಿ ದೂರದರ್ಶನವಿದ್ದ ಸಮಯದಲ್ಲಿ ಮುನ್ನೋಟ ಎನ್ನುವ ಕಾರ್ಯಕ್ರಮ ಪ್ರತಿ ಭಾನುವಾರ ಬರುತ್ತಿತ್ತು. ಅದರಲ್ಲಿ ವಾರದ ಪ್ರಮುಖ ಕಾರ್ಯಕ್ರಮಗಳನ್ನು ಹೇಳುತ್ತಿದ್ದಾಗ ಮುಂದಿನ ಭಾನುವಾರದ ಸಿನಿಮಾ ಯಾವುದಿರಬಹುದು ಎಂಬ ಕುತೂಹಲ ನಮ್ಮನ್ನು ಕಾಡುತ್ತಿತ್ತು. ಅದೇನಾದರೂ ರಾಜ್, ಅನಂತನಾಗ್ ಅವರದ್ದಾದರೆ ನಮ್ಮೂರ ಹೆಂಗೆಳೆಯರು ಖುಷಿ. ಯಾಕೆಂದರೆ ಸಂಸಾರಿಕ ಕತೆ ಅಲ್ಲಿರುತ್ತಿತ್ತು. ಆದರೆ ನಾವು ಹುಡುಗರು ಬೇಸರ ಪಟ್ಟುಕೊಳ್ಳುತ್ತಿದ್ದೆವು. ಯಾಕೆಂದರೆ ಕೊಲೆ ಸುಲಿಗೆ ಹೊಡೆದಾಟ ಯಾವುದೂ ಇಲ್ಲದ ಸಿನಿಮಾ ನೋಡುವುದು ನಮಗೆ ಚಿತ್ರಹಿಂಸೆ. ಆದರೆ ವಿಷ್ಣು ಅಂಬಿ ಶಂಕರ್ ನಾಗ್ ಎಂದರೆ ನಾವು ಕುಣಿದಾಡುತ್ತಿದ್ದೆವು.
ಈಗಲೂ ಕೆಲ ಕಲಾವಿದರು ಹೀಗೆಯೇ ಇದ್ದರೇ ಚೆನ್ನ ಎನಿಸುತ್ತದೆ. ಅಂತವರ ಪಟ್ಟಿಯಲ್ಲಿ ನಿಮ್ಮ ಮೆಚ್ಚಿನ ಕಲಾವಿದರು ಯಾರಿರಬಹುದು..?

Saturday, June 21, 2014

ಚಿತ್ರಕತೆ ಬರವಣಿಗೆ:

ಚಿತ್ರಕತೆ ಬರೆಯುವುದು ಹೇಗೆ ಎನ್ನುವ ಪ್ರಶ್ನೆ ನನ್ನನ್ನು ತುಂಬಾ ದಿನಗಳವರೆಗೆ ಕಾಡಿದ ಪ್ರಶ್ನೆ ಎನ್ನಬಹುದು. ಅಂದರೆ ಶೈಲಿ ಹೇಗೆ, ಹೇಗೆ ಪ್ರಾರಂಭಿಸಬೇಕು ಮತ್ತು ಯಾವ ರೀತಿ ಬರೆಯುವುದು ಸರಿಯಾದದ್ದು ಮತ್ತು ಅನುಕೂಲಕರವಾದದ್ದು ಎಂಬುದು ಪ್ರಶ್ನೆ.
ಆದರೆ ಚಿತ್ರರಂಗಕ್ಕೆ ಬಂದ ಮೇಲೆ ನನಗೆ ಅದರ ಸ್ಪಷ್ಟ ರೂಪ ಗೊತ್ತಾಯಿತು ಎನ್ನಬಹುದು.
ಆದರೆ ಮೈಸೂರಿನಲ್ಲಿ ಇದ್ದಾಗಲೇ ಅದರ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದೆ. ಆಗ ಗಾಂಧೀ ಸಿನಿಮಾದ ಚಿತ್ರಕತೆ ಪುಸ್ತಕದ ರೂಪದಲ್ಲಿ ಸಿಕ್ಕಿತ್ತು. ಅದನ್ನು ನನ್ನ ಟೆಕ್ಸ್ಟ್ ಪುಸ್ತಕಕ್ಕಿಂತ ಹೆಚ್ಚಾಗಿ ಹಗಲು ರಾತ್ರಿ ಓದಿದ್ದೆ ಅನ್ನುವುದಕ್ಕಿಂತ ಅದನ್ನು ಗಮನಿಸಿದ್ದೆ. ಅದೇನು ಇಂಟೀರಿಯರ್, ಎಕ್ಷ್ತೇರಿಯರ್, ಕಟ್ ಟು, ಫೇಡ್ ಔಟ್, ಫೇಡ್ ಇನ್ ...ಅದರ ಬಗ್ಗೆ ವಿಸ್ತೃತವಾಗಿ ಅದ್ಯಯನ ಮಾಡಿದ ನಂತರ ಅದರ ರೀತಿಯಲ್ಲೇ ಬರೆಯಲು ಪ್ರಾರಂಭಿಸಿ ನಾನಂದುಕೊಂಡ ಒಂದಿಡೀ ಕತೆ ಚಿತ್ರಕತೆಯನ್ನು ಬರೆದುಬಿಟ್ಟಿದ್ದೆ.
ಆದರೆ ಇಲ್ಲಿ ಬಂದಾಗ ಅದು ಚಿತ್ರೀಕರಣಕ್ಕೆ ಅಷ್ಟು ಉಪಯೋಗವಾಗುವುದಿಲ್ಲ ಎನಿಸಿತು. ಈಗೀಗಂತೂ ಅದರ ಉಪಯೋಗವಿಲ್ಲ ಎನಿಸಿತು. 
ಹಾಳೆಯ ಒಂದು ಮಗ್ಗಲಲ್ಲಿ ಅಂದರೆ ಎಡಭಾಗದಲ್ಲಿ ದೃಶ್ಯದ ಸಂಖ್ಯೆ, ಸ್ಥಳ, ಪಾತ್ರಧಾರಿಗಳು ಮುಂತಾದವುಗಳನ್ನು ಬರೆದು a ಪುಟದ ಅರ್ಧ ಭಾಗದಲ್ಲಿ ಎಡಭಾಗಕ್ಕೆ ಚಿತ್ರಕತೆ ಸಂಭಾಷಣೆ ಬರೆಯುವುದು ಒಳ್ಳೆಯದು. ಯಾಕೆಂದರೆ ಚಿತ್ರೀಕರಣದ ಸಮಯದಲ್ಲಿ ಮುಂದೆ ಸಂಕಲನಕ್ಕೆ ಉಪಯೋಗವಾಗಲೆಂದು ಎಡಿಟಿಂಗ್ ರಿಪೋರ್ಟ್ ಬರೆಯುತ್ತಾರೆ. ಅದರಿಂದ ಅದರ ರೀಡಿಂಗ್ ನಿಂದ ok ಯಾದ, ok ಆಗದ ದೃಶಿಕೆಗಳನ್ನ ವಿಂಗಡಿಸುವುದು ಸುಲಭ ಸಾಧ್ಯ. ಹಾಗೆಯೇ ಚಿತ್ರೀಕರಣದ ಸಮಯದಲ್ಲಿ ಶಾಟ್ ವಿಭಜನೆ, ಸಂಯೋಜನೆ ದಾಖಲೆಗಳನ್ನು ಬರೆದುಕೊಳ್ಳಲು ಸುಲಭ. ಹಾಗಾಗಿ ಒಂದು ಅರ್ಧ ಭಾಗ ಖಾಲಿಯಿದ್ದಾಗ ok ಶಾಟ್, ಅಥವಾ ಏನಾದರೂ ತಿದ್ದುಪಡಿ ಇದ್ದರೇ, ಅಥವಾ ಆಯಾ ಶಾಟ್ ನ ಕ್ಯಾಮೆರಾ ಕ್ಲಿಪ್ ನಂಬರ್ ಮುಂತಾದವುಗಳನ್ನು ನಮೂದಿಸಲು ಉಪಯೋಗವಾಗುತ್ತದೆ ಎನ್ನಬಹುದು.
ಆದರೆ ಹಾಲಿವುಡ್ ಶೈಲಿಯಲ್ಲಿ ಅದಕ್ಕೆ ಆಸ್ಪದವಿಲ್ಲ. ನೋಡಲು ಓದಲು ಅದು ಚೆನ್ನಾಗಿರುತ್ತದೆ. ಪ್ರಾಯೋಗಿಕವಾಗಿ ಇಷ್ಟು ಅನುಕೂಲಕಾರಿಯಲ್ಲ .
ಅಂದ ಹಾಗೆ ರಕ್ಷಿತ್ ಶೆಟ್ಟಿ ತಮ್ಮ ಉಳಿದವರು ಕಂಡಂತೆ ಚಿತ್ರದ ಸ್ಕ್ರಿಪ್ಟ್ ಪ್ರತಿಯನ್ನು ಅಂತರ್ಜಾಲದಲ್ಲಿ ಹಾಕಿದ್ದಾರೆ. ಮತ್ತದು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ್ದಾರೆ. ಒಂದು ಚಿತ್ರ ಭರ್ಜರಿ ಯಶಸ್ಸು ಕಂಡರೆ ಅದರ ಪುಸ್ತಕಗಳು ಬರುವುದು ಸಾಮಾನ್ಯ. ಕನ್ನಡದಲ್ಲಿ ಮಠ, ಎದ್ದೇಳು ಮಂಜುನಾಥ ಚಿತ್ರಗಳು ಬರಹರೂಪದಲ್ಲಿ ಬಂದಿವೆ. ಹಾಗೆ ನೋಡಿದರೆ ಉಕ ಅದ್ಭುತ ಯಶಸ್ವೀ ಚಿತ್ರವಲ್ಲ. ಹಾಗಂತ ತೆಗೆದು ಹಾಕುವ ಚಿತ್ರವೂ ಅಲ್ಲ. ಅದೊಂತರ ಚಿತ್ರ. ನಾನು ಸಿನಿಮಾ ನೋಡುತ್ತಾ ನೋಡುತ್ತಾ ಬೋರ್ ಆಯಿತು ಎನಿಸಿದೆ. ನೋಡಿದ ಮೇಲೆ ಇದೇನು ಕುತೂಹಲವೇ ಇಲ್ಲವಲ್ಲ ಎನಿಸಿದೆ. ಆದರೆ ಅಷ್ಟರ ನಡುವೆಯೂ ನೋಡಿಸಿಕೊಂಡಿದೆ. 
ಒಂದು ಚಿತ್ರದಲ್ಲಿ ಭರವಸೆ, ಅತಿ ಭರವಸೆ ನಿರೀಕ್ಷೆ ಗಳು ಸಿನಿಮಾವನ್ನು ಸಾಮಾನ್ಯವಾಗಿ ನೋಡಲು ಬಿಡುವುದಿಲ್ಲ ಎನ್ನುವುದಕ್ಕೆ ಉಕ ಉತ್ತಮ ಉದಾಹರಣೆ ಎನ್ನಬಹುದು, ಅದರ ಪ್ರಚಾರ, ಪ್ರೊಮೊ, ರಕ್ಷಿತ್ ಶೆಟ್ಟಿ ಇವುಗಳನ್ನು ಸಿನಿಮಾದ ಮೇಲೆ ಅದೆಂತಹ ಪರಿಣಾಮ ಬೀರಿದ್ದವು ಎಂದರೆ ಚಿತ್ರ ನೋಡಿದವರು ಇಲ್ಲಾ ಹೊಗಳಬೇಕು, ಇಲ್ಲಾ ತೆಗಳಬೇಕು ಎನ್ನುವ ನಿರ್ಧಾರಕ್ಕೆ ಬಂದು ಬಿಟ್ಟರು. ಹಾಗಾಗಿ ಮುಖಪುಸ್ತಕದಲ್ಲಿ ಅಲ್ಲಲ್ಲಿ ಅದರ ಚರ್ಚೆಗಳು ಬೈಗುಳ ಹೊಗಳಿಕೆಗಳು ಎಗ್ಗಿಲ್ಲದೆ ನಡೆದವು ಎನ್ನಬಹುದು. ಹೇಗೆ ವಸ್ತು ಮಾನ್ಯಕ್ಕಿಂತ ಹೆಚ್ಚು ಹೊಗಳಿದರೆ ತಡೆದುಕೊಳ್ಳಲಾಗುವುದಿಲ್ಲವೋ ಹಾಗೆಯೇ ವಿನಾಕಾರಣ ತೆಗಳಿದರೆ ತಡೆದುಕೊಳ್ಳಲಾಗುವುದಿಲ್ಲ. ಸಿನಿಮಾ ಅಂದ್ರೆ. ಸಿನಿಮಾ ಅಷ್ಟೇ.ಏನೇ ಪ್ಯಾಶನ್, ಅದೂ ಇದೂ ಎಂದರೂ ಕತ್ತಲೆಯಲ್ಲಿ ಎರಡೂವರೆ ಗಂಟೆಯ ಜಗತ್ತಿನ ಅನುಭವವೇ ಅಂತಿಮ. ಹಾಗಾಗಿ ಒಂದು ಚಿತ್ರವನ್ನು ಹೊಗಳುವುದಕ್ಕಿಂತ ಅಥವಾ ಪೋಸ್ಟ್ ಮಾರ್ಟಂ ಮಾಡುವುದಕ್ಕಿಂತ ಸುಮ್ಮನೆ ನೋಡಬೇಕು ಅಲ್ಲವೇ?
ಉಕ ಚಿತ್ರಕತೆಯ ಬರಹದ ಪ್ರತಿಯನ್ನು ರಕ್ಷಿತ್ ಅಂತರ್ಜಾಲದಲ್ಲಿ ಬಿಟ್ಟಿದ್ದಾರೆ. ನಿಜಕ್ಕೂ ಅದು ಸಂತೋಷದ ವಿಷಯ. ಸಿನಿಮಾ ನೋಡಿ ಅರ್ಥವಾಗಲಿಲ್ಲ ಎಂದು ಕೊಳ್ಳುವವರು ಅದನ್ನೊಮ್ಮೆ ಓದಿ ಅರ್ಥ ಮಾಡಿಕೊಳ್ಳಬಹುದು ಎಂಬುದಕ್ಕಿಂತ ಸಿನಿಮಾಕ್ಕೆ ಬರಲು ಅಪೇಕ್ಷೆ ಇರುವವರಿಗೆ ಚಿತ್ರಕತೆ ಬರೆಯುವ ಶೈಲಿಯ ಬಗ್ಗೆ ತಿಳಿದುಕೊಳ್ಳಬಯಸುವವರಿಗೆ ಅದು ಅತ್ಯವಶ್ಯ. ಆದರೆ ಅದರ ಶೈಲಿ ಹಾಲಿವುಡ್ ಚಿತ್ರಗಳ ಬರಹದ ಪ್ರತಿಯ ಹಾಗಿರುವುದು ಮತ್ತು ಪ್ರಾಯೋಗಿಕವಾಗಿ ಅದರ ಉಪಯೋಗ ನಾನು ಕಂಡ ಮಟ್ಟಿಗೆ ಇಲ್ಲದಿರುವುದು ಬೇಸರದ ಸಂಗತಿ. ಜಗತ್ತಿನ ಚಿತ್ರಕರ್ಮಿಗಳ ಕಾರ್ಯರೂಪವನ್ನು ಅನುಸರಿಸುವುದು ಅವಶ್ಯ. ಅದು ನಮ್ಮಲ್ಲಿನ ಕೆಲಸಕ್ಕೆ ಎಷ್ಟು ಅನುಕೂಲ ಎನ್ನುವುದನ್ನು ಮನಗಂಡಾಗ ಆ ಕೆಲಸಕ್ಕೂ ಒಂದು ಸಾರ್ಥಕತೆ ಬರುತ್ತದೆ.ಹಾಗಾಗಿ ರಕ್ಷಿತ್ ಕೆಲಸವನ್ನು ಮೆಚ್ಚಿಕೊಳ್ಳುತ್ತಲೇ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸಬೇಕಾಗುತ್ತದೆ.
ಅದರ ಜೊತೆಗೆ ಚಿತ್ರದಲ್ಲಿ ಬಳಸಿರುವ ಹೊಸ ತಂತ್ರಜ್ಞಾನಗಳ ಬಗ್ಗೆ ಸ್ವಾನುಭವವನ್ನು ಅದರ ಪ್ರಾಯೋಗಿಕವಾಗಿ ಆದ ಲಾಭ ನಷ್ಟಗಳನ್ನು ಹಂಚಿಕೊಂಡರೆ ಚಿತ್ರಕರ್ಮಿಗಳಿಗೆ ಇನ್ನೂ ಲಾಭದಾಯಕವಾಗುತ್ತದೆ ಎನಿಸುತ್ತದೆ.
ಅವರು ಬಿಡುವಿದ್ದಾಗ ಅದನ್ನು ಮಾಡಲಿ ಎಂಬುದು ನನ್ನ ಆಶಯ..

Monday, June 16, 2014

ಕೌಂಟರ್ ವೀರರು:


ಇಲ್ಲಿ ಕೌಂಟರ್ ವೀರರು ಎಂದರೆ ನಾನಾ ಅರ್ಥ ಬರಬಹುದು. ಬಾರ್ ನಲ್ಲಿ ಒಳ ಹೋಗಿ ಮಟ್ಟಸವಾದ ಟೇಬಲ್ ಹಿಡಿದು ಕುಳಿತುಕೊಂಡು ನಿಧಾನಕ್ಕೆ ಗುಟುಕರಿಸುವ ಮದ್ಯಪಾನಿಯ ಹೊರತಾಗಿ ಆತುರಾತುರವಾಗಿ ಬಾರ್ ಕೌಂಟರ್ ನಲ್ಲಿಯೇ ಒಂದೆರೆಡು ಕಾಳು ಉಪ್ಪಿನಕಾಯಿ ಕೊಯ್ಲಿ ಹಿಡಿದು ಲಬಕ್ಕನೆ ಇಡೀ ಲೋಟದ ಪಾನೀಯವನ್ನು ಗಂಟಲಿಗೆ ಸುರಿದುಕೊಂಡು  ಆ ಕ್ಷಣದಲ್ಲೇ ಉಪ್ಪಿನಕಾಯಿ ನೆಕ್ಕಿ ಏನೋ ಕೆಲಸವಾಯಿತಪ್ಪ ಎನ್ನುವಂತೆ ಮುಖಭಾವ ವ್ಯಕ್ತ ಪಡಿಸುವವರನ್ನೂ ಕೂಡ ಕೌಂಟರ್ ವೀರರು ಎನ್ನಬಹುದು. ಆದರೆ ನಾವಿಲ್ಲಿ ಮಾತನಾಡುತ್ತಿರುವುದು ಆ ಕೌಂಟರ್ ವೀರರ ಬಗ್ಗೆಯಲ್ಲ.
ನಮ್ಮ  ಸಿನಿಮಾದಲ್ಲಿ ಡೈಲಾಗ್ ಕೌಂಟರ್ ಡೈಲಾಗ್ ಎಂಬ ಪದಗಳನ್ನು ಬಳಸುತ್ತೇವೆ. ಡೈಲಾಗ್ ಗೆ ಪ್ರತಿಯಾಗಿ ಎದುರುತ್ತರ ಎನ್ನಬಹುದು. ಈ ಎದುರುಮಾತುಗಳು ಅಲ್ಲಲ್ಲಿ ಬಂದಾಗ ಜನರಲ್ಲಿ ನಗೆ ಉಕ್ಕಿಸಬಹುದು, ಅಥವಾ ರೋಮಾಂಚನ ಉಂಟು ಮಾಡಬಹುದು. ಹಾಗಾಗಿ ಪಂಚಿಂಗ್ ಡೈಲಾಗ್ ಎಂದೆ ಕರೆಯಲ್ಪಡುವ ಈ ಮಾತುಗಳೇ ಕೆಲಚಿತ್ರಗಳ ಬಂಡವಾಳ ಎನ್ನಬಹುದು. ಅದರಲ್ಲೂ ಹಾಸ್ಯ ಚಿತ್ರಗಳಿಗೆ ಈ ಪಂಚಿಂಗ್ ಡೈಲಾಗ್ ಗಳು ಬೇಕೇ ಬೇಕು.
ಆದರೆ ಇವೆಲ್ಲಾ ಸಿನಿಮ ಒಳಗಿನ ಕತೆಯಾಯಿತು. ನೀವು ಚಿತ್ರಮಂದಿರದೊಳಗೆ ಹೋದಾಗ ಅಲ್ಲೂ ಪಂಚಿಂಗ್ ಡೈಲಾಗ್ ಹೇಳುವವರನ್ನು ಕಾಣಬಹುದು. ಅವರೇ ಪ್ರೇಕ್ಷಕರು. ಸುಖಾ ಸುಮ್ಮನೆ ಎಲ್ಲಾ ಸಿನಿಮಾಗಳಿಗೂ ಇವರೇನು ಪಂಚಿಂಗ್ ಡೈಲಾಗ್ ಹರಿ ಬಿಡುವುದಿಲ್ಲ. ಚಿತ್ರ ಬೋರಾದಾಗ, ಆಕಳಿಕೆ ಹೆಚ್ಚಾದಾಗ ತೆರೆಯ ಮೇಲಿನ ಪಾತ್ರಧಾರಿಗಳ ಮಾತಿಗೆ ಸರಿಯಾದ ಎದುರುತ್ತರವನ್ನು ಹೊರಗೆ ಕುಳಿತೆ ನೀಡುವವರು. ಅವರ ಮಾತುಗಳು ಕೆಲವೊಮ್ಮೆ ಸಿನಿಮಾದ ಬೋರ್ ಕಳೆಯುತ್ತದೆ ಎಂದರೆ ಅದನ್ನು ಅತಿಶಯೋಕ್ತಿ ಎನ್ನುವ ಹಾಗಿಲ್ಲ. ಮಲ್ಟಿಫ್ಲೆಕ್ಸ್ ನಲ್ಲಿ ಇವರು ಕಡಿಮೆ ಎನ್ನಬಹುದು. ಯಾಕೆಂದರೆ ಅಲ್ಲಿ ಬರುವವರೆಲ್ಲಾ ಡೀಸೆಂಟ್ ಆಗಿರಬೇಕು ಎಂದುಕೊಂಡು ಮೊದಲೇ ನಿರ್ಧಾರ ಮಾಡಿಬಿಟ್ಟಿರುತ್ತಾರೆ. ಆದರೆ ನಮ್ಮವರು ಆಗಲ್ಲ. ಯಾವ ಹಿಂಜರಿಕೆಯೂ ಇಲ್ಲದೆ ತಮ್ಮ ಅನಿಸಿಕೆ ಅಭಿಪ್ರಾಯ ಕೆಲವೊಮ್ಮೆ ಸಿನಿಮಾದ ಒಂದು ಸಾಲಿನ ವಿಮರ್ಶೆಯನ್ನು ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ವ್ಯಕ್ತಪಡಿಸುತ್ತಿರುತ್ತಾರೆ.
ಮೊನ್ನೆ ಗಜಕೇಸರಿ ಚಿತ್ರಕ್ಕೆ ಹೋಗಿದ್ದೆ. ನಾನು ಸಾಮಾನ್ಯವಾಗಿ ದ್ವಿತೀಯ ತರಗತಿಗೆ ಹೋಗುತ್ತೇನೆ. ಅಲ್ಲಾದರೆ ಪ್ರೇಕ್ಷಕರು ಜಾಸ್ತಿಯೂ ಇರುತ್ತಾರೆ. ಸ್ವಲ್ಪ ಹಣ ಉಳಿದು ಮಧ್ಯಂತರದ ಖರ್ಚಿಗೂ ಆಗುತ್ತದೆ ಎನ್ನುವುದು ನನ್ನ ಹುನ್ನಾರ. ನನ್ನ ಪಕ್ಕದಲ್ಲಿ ಅಭಿಮಾನಿಯೊಬ್ಬ ಕುಳಿತುಬಿಟ್ಟಿದ್ದ. ಅವನಾಗಲೇ ಭಜರಂಗಿ ಚಿತ್ರವನ್ನು ನೋಡಿ ಬಿಟ್ಟಿದ್ದ ಅಲ್ಲದೆ ಗಜಕೇಸರಿ ಚಿತ್ರದ ಕತೆ ಸ್ವಲ್ಪ ಭಜರಂಗಿ ಚಿತ್ರದ್ದನ್ನೇ ಹೋಲುತ್ತದಲ್ಲಾ ಅವನಿಗೆ ಸ್ವಲ್ಪ ಬೋರಾಗಲು ತೊಡಗಿತು. ಶುರುವಾಯಿತು ನೋಡಿ ಅವನ ಆರ್ಭಟ.
ಹಿಂದುಗಡೆ ಸಾಲಿನಲ್ಲಿ ಕುಳಿತ ಯಾರಿಗೂ ಫೋನ್ ಬಂದು ಆತ ರಿಸೀವ್ ಮಾಡಿ ಗುರು ನಾನು ಸಿನಿಮಾ ನೋಡ್ತಿದ್ದೀನಿ.. ಎಂದ. ಆ ಕಡೆಯವನು ಯಾವ ಸಿನಿಮಾ ಎಂದು ಕೇಳೆ ಕೇಳುತ್ತಾನೆ ಎಂಬುದನ್ನು  ಊಹಿಸಿದ ನಮ್ಮ ಕೌಂಟರ್ ವೀರ ಗುರು ಭಜರಂಗಿ-2 ನೋಡ್ತಿದ್ದೀನಿ ಅಂತ ಹೇಳು ಎಂದು ಜೋರಾಗಿ ಕಿರುಚಿದ. ಚಿತ್ರಮಂದಿರ ಒಮ್ಮೆ ಗೊಳ್ ಎಂದು ನಕ್ಕಿತ್ತು.
ಯಶ್ ನ ಬಾಹುಬಲಿ ಪಾತ್ರಕ್ಕೆ ಖಳನಾಯಕ ವಿಷ ಕುಡಿಸಿದಾಗ ಸಾಯಲು ಹತ್ತೇ ನಿಮಿಷ ಇದೆ ಎಂದಾಗ ಹೊಡೆದಾಡುವ ಮುನ್ನ ಬಾಹುಬಲಿ ವೀರಾವೇಶದ ಒಂದಷ್ಟು ಮಾತುಗಳನ್ನು ಆಡುತ್ತಾನೆ. ಅದರಲ್ಲಿ ಕನ್ನಡದ ವೀರರ ಘನತೆ, ಇತಿಹಾಸ ಮುಂತಾದವೆಲ್ಲಾ ತುಂಬಿರುತ್ತದೆ. ಆದರೆ ನಮ್ಮ ಕೌಂಟರ್ ವೀರ ಅದಾವುದನ್ನೂ ಗಮನಿಸಲಿಲ್ಲ.
ಗುರು.. ಇರದೇ ಹತ್ತು ನಿಮಿಷ ...ಟೈಮ್ ವೇಸ್ಟ್ ಮಾಡಬೇಡ...ಹೊಡೆದಾಕು.. ಆಮೇಲೆ ಟೈಮ್ ಇದ್ರೆ ಮಾತಾಡೋವಂತೆ...
ಎಂಬ ಕೌಂಟರ್ ಕೊಟ್ಟ. ಯಶ್ ಬಿಟ್ಟು ಎಲ್ಲರೂ ನಕ್ಕರು.
ಫ್ಲಾಶ್ ಬ್ಯಾಕ್ ಮುಗಿದು ಆನೆ ಮುಂದೆ ನಿಂತ ನಾಯಕ ಹೇಳುತ್ತಾನೆ ಈ ಕತೆಯಲ್ಲಾ ನಾನು ನಂಬಬೇಕಾ...ಎಂದೆಲ್ಲಾ ಮಾತಾಡುವಾಗ ನಾಯಕಿ ಅಮೂಲ್ಯ ಬಂದು ಒಂದಷ್ಟು ಮಾತಾಡಿ ಕನ್ವಿನ್ಸ್ ಮಾಡುತ್ತಾಳೆ. ಆದರೆ ನಮ್ಮ ಕೌಂಟರ್ ವೀರ ಅಷ್ಟು ಕಾಯದೆ.
ನೀನು ನಂಬಬೇಕು ಗುರು.. ಇದಕ್ಕೂ ಮುನ್ನ ಭಜರಂಗಿ ನೋಡ್ ಬಂದಿದ್ರೆ ನಿಂಗೆ ಎಲ್ಲಾ ಗೊತ್ತಾಗಿರೋದು ಎಂದ.
ಆಮೇಲೆ ಅದೆಷ್ಟೋ ಕೌಂಟರ್ ಗಳು ಬಂದವೆಂದರೆ ಸಿನಿಮಾ ಮುಗಿಯೋವರೆಗೂ ನಗುವುದೇ ಆಗಿತ್ತು.
ಇಂತಹ ಕೌಂಟರ್ ವೀರರನ್ನು ನಾನು ಪ್ರತಿ ಚಿತ್ರಮಂದಿರದಲ್ಲೂ ಗಮನಿಸುತ್ತೇನೆ. ಅದರಲ್ಲೂ ಸಿನಿಮಾ ಚೆನ್ನಾಗಿಲ್ಲದಿದ್ದರಂತೂ ಅದರ ಮಜಾವೇ ಬೇರೆ. ಕೆಲವು ಅಂತಹ ಕೌಂಟರ್ ಗಳಿವೆ.
ಚಪ್ಪಾಳೆ ಚಿತ್ರದ ಕೊನೆಯ ದೃಶ್ಯದಲ್ಲಿ ಖಳರು ನಾಯಕನನ್ನು ಹೊಡೆದು ಬೀಳಿಸುತ್ತಾರೆ. ಆಗ ಆತನ ಸ್ನೇಹಿತರು ಎಲ್ಲಾ ಬಂದು ಅಲ್ಲೇ ಒಂದು ಬ್ಯಾಂಡ್ ಸೆಟ್, ಡ್ರಮ್ ಸೆಟ್ ರೆಡಿ ಮಾಡಿ ಭಾರಿಸುತ್ತಾರೆ. ಆಗ ನಾಯಕ ಎಚ್ಚರಗೊಳ್ಳುತ್ತಾನೆ.
ಗುರು..ಬರೀ ಆ ಡ್ರಮ್ ಭಾರಿಸೋವಷ್ಟೇ ಏಟು ಕೇಡಿಗಳಿಗೆ ಭಾರಿಸಿದ್ರೆ ಅವನು ಆರಾಮವಾಗಿ ಮಲಗಿರ್ತಿದ್ದ.. ಏಳೋದೇ  ಬೇಕಿರಲಿಲ್ಲವಲ್ಲಪ್ಪ..
***

ನಾಯಕ: ನೀನು ಹೀಗೆ ಮಾಡ್ತೀಯ ಅಂತ ನನಗೆ ಗೊತ್ತಿರಲಿಲ್ಲ...ಎಂತ ಕೆಲಸ ಮಾಡ್ಬಿಟ್ಟೆ..
ಕೌಂಟರ್ ವೀರ: ನಮಗೂ ನೀನು ಇಷ್ಟು ಬೋರ್ ಮಾಡ್ತೀಯ ಅಂತ ಗೊತ್ತಿರಲಿಲ್ಲ. ಎಂತ ಕೆಲಸ ಮಾಡ್ಬಿಟ್ಟೆ..
***
ನಾಯಕಿ: ನೀನು ನನ್ನ ಸರ್ವಸ್ವ ಕಣೋ...ನಿನಗೆ ಏನು ಬೇಕೋ ಕೇಳು ..
ಕೌಂಟರ್ ವೀರ: ಆಮೇಲೆ ಅವನಿಗೆ ಏನು ಬೇಕೋ ಕೊಡುವಿಯಂತೆ ತಾಯಿ..ನಮಗೆ ನಮ್ಮ ಟಿಕೆಟ್ ದುಡ್ಡು ಕೊಟ್ಬಿಡವ್ವಾ..
****
ನಾಯಕ: ನನಗೆ ಎಷ್ಟು ಕೋಪ ಬರ್ತಿದೆ ಅಂದ್ರೆ... ಆದ್ರೆ ಏನ್ಮಾಡ್ಲಿ..
ಕೌಂಟರ್ ವೀರ: ಏನ್ ಮಾಡ್ತೀಯ ಗುರು ..ನಮಗೂ ಬರ್ತಿದೆ... ಪರದೆ ಹರಿದು ಹಾಕಬೇಕಷ್ಟೇ..


ಹೀಗೆ ಎಷ್ಟೋ ಕೌಂಟರ್ ವೀರರ ಕೌಂಟರ್ ಗಳು ಸಿನಿಮಾದ ಹೊರಗೆ ಮಜಾ ಕೊಡುತ್ತವೆ. ನಿಮಗೂ ಇಂತಹ ಕೌಂಟರ್ ವೀರರ ಭೇಟಿಯಾಗಿದ್ದರೆ, ಅವರ ಮಾತುಗಳನ್ನು ಹರಿಬಿಟ್ಟರೆ ನಾವು ಖುಷಿ ಪಡಬಹುದು.

Thursday, May 22, 2014

ಹೊಸ ಅನುಭವ:

ಮೊನ್ನೆ ಮೊನ್ನೆ ಕನ್ನಡಚಿತ್ರರಂಗದ ಎಂಬತ್ತು ವರ್ಷದ ಸಮಾರಂಭಕ್ಕೆ ನಾನು ಹೋಗಿದ್ದೆ. ಸುಮ್ಮೆನೆ ಅಲ್ಲಿನ ಕಾರ್ಯಾಗಾರ ಭಾಷಣ ಕೇಳುವುದರ ಜೊತೆಗೆ ನನ್ನದೇ ಪುಸ್ತಕವನ್ನು ಅಲ್ಲೊಂದಷ್ಟು ಇಟ್ಟುಕೊಂಡರೆ ಹೇಗೆ ಎಂಬ ಐಡಿಯಾ ಬಂದಿತ್ತು. ಪುಸ್ತಕದ ಪ್ರಚಾರ ಹಾಗೆಯೇ ಮಾರಾಟವಾದರೆ ಸ್ವಲ್ಪ ಹಣ ಜೇಬು ಸೇರುತ್ತದೆ ಎಂಬ ಆಸೆಯಿಂದ ಪುಸ್ತಕ ಇಟ್ಟುಕೊಳ್ಳುವ ಎಂದು ನಿರ್ಧರಿಸಿದೆ.
ನಾನು ಎಲ್ಲಾದರೂ ಹೋದಾಗ ನನ್ನನ್ನು ಸೆಳೆಯುವುದು ಪುಸ್ತಕದ ಅಂಗಡಿ ಮತ್ತು ಸಿನಿಮಾ ಡಿವಿಡಿ ಅಂಗಡಿಗಳು ಮಾತ್ರ. ಉಳಿದವೆಲ್ಲಾ ನನ್ನ ಪಾಲಿಗೆ ನಗಣ್ಯ ಅನಿಸುತ್ತವೆ. ಆದರೆ ಡಿವಿಡಿ ಅಂಗಡಿಗೆ ಹೋಗಿ ಸುಮ್ಮನೆ ಡಿವಿಡಿಗಳನ್ನೂ ನೋಡುವಂತೆ ನೋಡಿ, ಅದರ ಹಿಂಭಾಗದ ಸಾರಾಂಶವನ್ನು ಗಮನಿಸಿ, ಆಸಕ್ತಿಕರ ಎನಿಸಿದರೆ ಬೆಲೆ ನೋಡಿ, ಕೊಳ್ಳುವುದೋ ಬೇಡವೋ ಎಂಬುದನ್ನು ನಿರ್ಧರಿಸುತ್ತೇನೆ. ಡಿವಿಡಿ ಗಳನ್ನ ಮೊದಲು ನೂರರ ಸಂಖ್ಯೆಯಲ್ಲಿ ಒಮ್ಮೆಲೇ ಕೊಳ್ಳುತ್ತಿದ್ದೆ. ಈಗ ಅಂತರ್ಜಾಲದಿಂದಾಗಿ ಹಣ ಉಳಿಸುವ ದುರಾಸೆಯಲ್ಲಿದ್ದೇನೆ. ಆದರೆ ಪುಸ್ತಕದ ವಿಷಯದಲ್ಲಿ ಹಾಗಿಲ್ಲ. ಪ್ರತಿವಾರ ಒಂದಲ್ಲಾ ಒಂದು ಪುಸ್ತಕ ಕೊಂಡುಕೊಳ್ಳುತ್ತೇನೆ.
ಆದರೆ ಕೆಲವನ್ನು ಅಲ್ಲೇ ಮುನ್ನುಡಿ ಓದುವ ಪ್ರಯತ್ನ ಮಾಡಿ ಆಮೇಲೆ ಕೊಳ್ಳುವ ನಿರ್ಣಯಕ್ಕೆ ಬರುತ್ತೇನೆ. ಆದರೆ ಒಂದಷ್ಟು ಪುಸ್ತಕಗಳನ್ನು ಗುಡ್ಡೆ ಹಾಕಿಕೊಂಡು ಹೋಗಿ ಬರುವವರು, ನೋಡುವವರು ಕೊಂಡು ಕೊಳ್ಳಬಹುದಾ ಇಲ್ಲವಾ ಎಂಬುದನ್ನು ಊಹೆ ಮಾಡುತ್ತಾ  ಅವರು ಪುಸ್ತಕವನ್ನು, ಅದರ ಪುಟಗಳನ್ನೂ ತಿರುವಿ ಹಾಕುವಾಗ, ಅವರ ಮುಖಭಾವವನ್ನು ಓದಲು ಪ್ರಯತ್ನಿಸುವುದು ಒಂದು ಅದ್ಭುತ ಅನುಭವ ಎನ್ನಬಹುದು.
ನಾನು ಪುಸ್ತಕವನ್ನು ನನ್ನ ಮುಂದೆ ಮೇಜಿನ ಮೇಲೆ ಆಲಂಕಾರಿಕವಾಗಿ ಜೋಡಿಸಿ, ಅದರ ಹಿಂದುಗಡೆ ಒಂದು ಖುರ್ಚಿಯಲ್ಲಿ ಕುಳಿತು ಪುಸ್ತಕವನ್ನು ಓದುತ್ತಿದ್ದೆ. ಕೆಲವೊಮ್ಮೆ ಓದುತ್ತಿರುವವನಂತೆ ನಟಿಸುತ್ತಿದ್ದೆ.
ಸುಮಾರು ಜನ ಬರುತ್ತಿದ್ದರು. ನೋಡುತ್ತಿದ್ದರು. ಒಬ್ಬರು ವಯಸ್ಸಾದ ವ್ಯಕ್ತಿ ಬಂದವರು ಇದರಲ್ಲಿ ವಿಷ್ಣುವರ್ಧನ್ ಅಭಿನಯದ ಚಿತ್ರವಿದೆಯೇ ಎಂದು ಕೇಳಿ ಇದೆ ಎಂಬುದನ್ನು ಖಾತರಿ ಮಾಡಿಕೊಂಡು ತೆಗೆದುಕೊಂಡರು.
ಇನ್ನೊಬ್ಬರು ನೀವು 1934 ರಿಂದ 2009 ರವರೆಗಿನ ಕನ್ನಡ ಚಿತ್ರಗಳನ್ನಷ್ಟೇ ಆಯ್ಕೆ ಮಾಡಿದ್ದೀರಿ. ಯಾಕೆ ಇಡೀ ಭಾರತದ ಚಿತ್ರರಂಗದಲ್ಲಿ ಎಲ್ಲಾ ಭಾಷೆಯನ್ನೂ ಒಗ್ಗೂಡಿಸಿ ನೋಡಲೇ ಬೇಕಾದ ನೂರೊಂದು ಭಾರತೀಯ ಚಿತ್ರಗಳು ಎಂಬ ಪುಸ್ತಕ ಬರೆಯಬಾರದು ಎಂಬ ಸಲಹೆ ಪ್ರಶ್ನೆ ಕೇಳಿದ್ದರು. ಅಯ್ಯೋ ಸಾರ್, ಇಡೀ ಭಾರತದ ಚಿತ್ರಗಳನ್ನು ಬರೀ ನೂರು ನೂರು ನೋಡಲೂ ನನಗೆ ಶತಮಾನವೇ ಬೇಕಲ್ಲ ಎಂದಿದ್ದೆ ನಗುತ್ತಾ.
ಒಬ್ಬ ವ್ಯಕ್ತಿ ನೀಟಾಗಿ ಇನ್ಶರ್ಟ್ ಮಾಡಿದ್ದು ಬಂದವನೇ ಪುಸ್ತಕವನ್ನು ನೋಡಿ ಅದನ್ನು ಬಿಡಿಸಿ ನೋಡಲಾರಂಭಿಸಿದ್ದ. ನೋಡಿದವನೇ ನನ್ನ ಮುಖ ನೋಡಿ, ಏನ್ ಪುಸ್ತಕ ಬರೀತಾರೋ ದರಿದ್ರ ಎಂದ. ನಾನು ಯಾಕೆ ಸಾರ್..ಚೆನ್ನಾಗಿಲ್ಲವಾ? ಎಂದು ಕೇಳಿದ್ದಕ್ಕೆ, ನಿಮಗೆ ಈ ಲೇಖಕ ಗೊತ್ತಾ ಎಂದ. ಆತ ಪುಸ್ತಕದ ಒಳಪುಟವನ್ನು ನೋಡಿದ್ದರೂ ಅದರಲ್ಲಿನ ನನ್ನ ಫೋಟೋ ಮತ್ತು ಸಾಕ್ಷಾತ್ ನನಗೂnanagoo ಅಜಗಜಾಂತರ ವ್ಯತ್ಯಾಸವಿತ್ತು. ಹಾಗಾಗಿ ಆತ ನಾನು ಪುಸ್ತಕ ಮಾರುವ ವ್ಯಕ್ತಿ ಎಂದಷ್ಟೇ ತಿಳಿದಿದ್ದ ಎನಿಸುತ್ತದೆ. ನಾನು ಉದ್ದುದ್ದ ಅಡ್ಡಡ್ಡ ತಲೆಯಲ್ಲಾಡಿಸಿದೆ. ಅಲ್ರೀ ಒಂದು ಪುಸ್ತಕ andreಅಂದ್ರೆ ಅದರಲ್ಲೊಂದು ಡಿಸಿಪ್ಲಿನ್ ಇರ್ತದೆ. ಈಗ ಪುಬ್ಲಿಶ್ ಅಂದ್ರೂ ಅದರಲ್ಲಿ ಒಂದಷ್ಟು ಸ್ವರೂಪಗಳಿರ್ತವೆ. ಇವನ್ನು ನೋಡಿ. ಇಡೀ ಪುಸ್ತಕದಲ್ಲಿ ಪರಿವಿಡಿ ಹಾಕಿಲ್ಲ ಎಂದ ಮುಖವನ್ನು ಗಿಂಜುತ್ತಾ. ಅದು ಹಾಗಲ್ಲ ಸಾರ್. ಮೊದಲಿಗೆ ಪರಿವಿಡಿ ಹಾಕಿ, ಚಿತ್ರಗಳ ಪಟ್ಟಿ ಕೊಟ್ಟು ಬಿಟ್ಟರೆ ಆತ ಮುಂದಕ್ಕೆ ಓದುವುದೇ ಇಲ್ಲ.ಪುಸ್ತಕವನ್ನು ಕೊಂಡು ಕೊಳ್ಳುವುದೂ ಇಲ್ಲ. ಸಿನಿಮಾಗಳು ಆತನಿಗೆ ಪರಿಚಿತವಾದ್ದರಿಂದ ಒಮ್ಮೆ ಕಣ್ಣಾಡಿಸಿ ನೋಡಿರದ ಚಿತ್ರವನ್ನು ಸ್ಮೃತಿಯಲ್ಲಿರಿಸಿಕೊಂಡು ಹೋಗಿಬಿಟ್ಟರೆ ಲೇಖಕನ ಪ್ರಕಾಶಕನ ಗೋಳು ಯಾರು ಕೇಳುತ್ತಾರೆ ಎಂದೆ. ಅದಕ್ಕೆ ಅವನಿಷ್ಟ ಬಂದ ಹಾಗೆ ಬರೆದರೆ ಆಗಿಬಿಡುತ್ತಾ ಎಂದವನು, ಪುಸ್ತಕವನ್ನು ಅಲ್ಲೇ ಬೀಸಾಕಿ, ಏನೇ ಮಾಡಿದರೂ ಅದರಲ್ಲಿ ಡಿಸಿಪ್ಲಿನ್ ಇರಲೇ ಬೇಕು ಎಂದು ಬೈದುಕೊಳ್ಳುತ್ತಾ ಅಲ್ಲಿಂದ ಹೋಗಿಯೇಬಿಟ್ಟ.
ಆ ಸಮಾರಂಭಕ್ಕೆ ಬಂದಿದ್ದ ಸಂಪನ್ಮೂಲ ವ್ಯಕ್ತಿಯೊಬ್ಬರು ಇಂದಿನ ಭಾರತೀಯ ಸಿನಿಮಾ, ನಿರ್ದೇಶಕರು ಬದಲಾಗುತ್ತಿರುವ ಪರಿ ಮತ್ತು ಪ್ರೇಕ್ಷಕರ ನಾಡಿಮಿಡಿತ ಮುಂತಾದವುಗಳನ್ನು ಸಾಧ್ಯಂತವಾಗಿ ವಿವರಿಸಿದ್ದರು. ಜೊತೆಗೆ ಕಿರು ಸಾಕ್ಷ್ಯಚಿತ್ರವನ್ನೂ ಸಿದ್ಧ ಪಡಿಸಿಕೊಂಡು ಬಂದಿದ್ದರು. ಅದರ ಪ್ರದರ್ಶನದ ಜೊತೆಗೆ ಮಾತನಾಡುತ್ತಾ ತುಂಬಾ ಪ್ರೌಢವಾಗಿ ಮತ್ತು ವಸ್ತುನಿಷ್ಠವಾಗಿ ಸಿನಿಮಾದ ಬಗ್ಗೆ ಮಾತನಾಡಿದ್ದರು. ಆದರೆ ಆಕೆಯ ಮಾತುಗಳಿದ್ದದ್ದು ಇಂಗ್ಲಿಷ್ ಭಾಷೆಯಲ್ಲಿ.
ಆಕೆಯ ಮಾತಿನ ನಂತರ ಕಾಫೀ ವಿರಾಮಕ್ಕೆ ಹೊರಬಂದಾಗ ತುಂಬಾ ಜನ ಆಕೆಯ ಸುತ್ತುವರೆದು ಅದೂ ಇದೂ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕನ್ನಡದ ಬೆರಳೆಣಿಕೆಯ ಚಿತ್ರಗಳನ್ನಷ್ಟೇ ನೋಡಿದ್ದ ಆಕೆ ಏನೇನೋ ಹೇಳುತ್ತಿದ್ದರು. ಒಟ್ಟಿನಲ್ಲಿ ಆಕೆಯ ಸುತ್ತ ಇಡೀ ಒಂದು ಗುಂಪೇ ಇತ್ತು. ಆಕೆಯ ಗುಂಪಿನಿಂದ ಮಾರುದೂರದಲ್ಲಿ ನನ್ನ ಕಿರುಪುಸ್ತಕ ಮಳಿಗೆಯ ಹತ್ತಿರ ಯಾರೂ ಕಣ್ಣು ಹಾಯಿಸದೇ ಇದ್ದದ್ದು ನನಗೆ ಒಂಚೂರು ಇರುಸುಮುರುಸು ಉಂಟುಮಾಡಿತ್ತು. ಹೊಸ ಹೊಸ ಸಿನಿಮಾಸಕ್ತ ಹುಡುಗರು ಕಿರುಚಿತ್ರಗಳನ್ನು ಮಾಡಿದ್ದವರು ಆಕೆಗೆ ನಾನಾತರದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆಕೆ ಉತ್ಸಾಹದಿಂದ ಉತ್ತರಿಸುತ್ತಿದ್ದರು. ನಾನು ಆ ಪ್ರಹಸನವನ್ನೇ ನೋಡುತ್ತಿದ್ದೆ.
ಆಕೆ ಒಂದಷ್ಟು ಮಾತನಾಡಿದ ನಂತರ ಸುಮ್ಮನೆ ನೋಡುವಾಗ ನನ್ನತ್ತ ನೋಡಿದವರು ಸೀದಾ ಹತ್ತಿರಕ್ಕೆ ಬಂದರು. ನಾನು ಎದ್ದುನಿಂತೆ. ಆಕೆ ಇಂಗ್ಲೀಷಿನಲ್ಲಿ ಇದೇನಿದು ಎಂದರು. ನಾನು ಉತ್ತರಿಸಲು ಬಾಯಿ ತೆರೆದೇ. ಅಷ್ಟರಲ್ಲೇ ನನಗೆ ಅಲ್ಲೇ ಪರಿಚಯವಾಗಿದ್ದವರು ತಮ್ಮ ಹರಕು ಮುರುಕು ಇಂಗ್ಲಿಷ್ನಲ್ಲಿ ಉತ್ಸಾಹದಿಂದ ಉತ್ತರಿಸತೊಡಗಿದರು. ಅವರ ಸಂಭಾಷಣೆ ಮಜಾ ಇಲ್ಲಿದೆ.
ಮೇಡಂ..ದಿಸ್ is ಇಸ್ ಬುಕ್..
ನನಗೊತ್ತು ..ಯಾವ ಪುಸ್ತಕ..?[ಇಂಗ್ಲಿಷ್ ನಲ್ಲಿ]
ಬುಕ್..ಸಿನಿಮಾಸ್ ಯುವರ್ ಡೆತ್ ವಾಚ್..
ವಾಟ್..?
ಯು ವಾಚ್ ಡೆಡ್ ಸಿನಿಮಾ ಹಂಡ್ರೆಡ್ ಒನ್ ಫಿಲಂಸ್ ಕನ್ನಡ ..
ಆಕೆಗೆ ಇನ್ನಷ್ಟು ಗೊಂದಲ ಏರ್ಪಟ್ಟಿದ್ದರಿಂದ ನಾನು ಉತ್ತರಿಸಬೇಕಾಯಿತು. ಆಕೆಗೆ ಆ ಪುಸ್ತಕ ಕೇಳಿ ಖುಷಿಯಾಗಿ ನನಗೆ ಕನ್ನಡ ಬರುವುದಿಲ್ಲ. ಆದರೂ ಇದರ ಲೇಖಕನಿಗೆ ಪ್ರಶಂಸಿಸಬೇಕು. ಎಂದವರೇ ಒಂದು ಪುಸ್ತಕ ತೆರೆದು ಅಲ್ಲಿದ್ದ ಸಿನಿಮಾ ಪಟ್ಟಿಯನ್ನು ಗಮನಿಸತೊಡಗಿದರು. ಆದರೆ ಅವರಿಗೆ ಕನ್ನಡ ಲಿಪಿ ಬರುತ್ತಿರಲಿಲ್ಲ. ಅಲ್ಲಿದ್ದ ಕುಬಿ ಮತ್ತು ಇಯಾಲ ಚಿತ್ರವನ್ನು ಗಮನಿಸಿದರು.
ಇದ್ಯಾವ ಸಿನಿಮಾ?
ಕುಬಿ ಅಂಡ್ ಇಯಾಲ.
ಒಹ್. ಕನ್ನಡ
ಯು ನೋ ಕನ್ನಡ ಪೊಯೆಟ್ ಕುಗೆಂಪು. ಹಿಸ್ ಸನ್..ಫುಲ್ ಮೂನ್ ತೇಜಸ್ವಿ. ಹೀ ರೈಟ್ಸ್ ಸ್ಟೋರಿ. ಅಂಡ್ ಫಿಲಂ ಮೇಕ್ಸ್.
ಯು ವಾಚ್ ಮೇಡಂ. ಡೆಡ್ ಫಿಲಂ ಬಿಫೋರ್...ಆಕ್ಚುವಲ್ಲಿ ರಾಜಣ್ಣ ಬಿಗ್ ಆಕ್ಟರ್. ಹೀ ಡೆಡ್ ವೀರಪ್ಪನ್..
ಏನು? ವೀರಪ್ಪನ್ ಕೊಂದದ್ದು ರಾಜಕುಮಾರಾ?
ಯಾಕೋ ಮಾತುಕತೆ ಹಳಿ ತಪ್ಪಿ ಆಕೆ ಏನನ್ನೋ ಅರ್ಥ ಮಾಡಿಕೊಂಡು ಈ ಅತ್ಯುತ್ಸಾಹಿ ಏನನ್ನೋ ಹೇಳಿ ಯಡವಟ್ಟು ಆಗುತ್ತದೆ ಎಂಬುದು ಗೊತ್ತಾದದ್ದೇ ನಾನು ಮಾತಾಡಲೇಬೇಕಾಯಿತು. ಆದರೆ ಆಕೆ ಬಂದು ಮಾತಾಡಿ ಹೋದದ್ದೇ ನನ್ನ ಪುಸ್ತಕಕ್ಕೆ ಇನ್ನಿಲ್ಲದ ಮಹತ್ವ ಬಂದದ್ದು ಸತ್ಯ. ಆಕೆ ಪುಸ್ತಕ ನೋಡಿ, ಅಲ್ಲಿದ್ದ ಕೆಲವರಿಗೆ ನನ್ನ ಪುಸ್ತಕವನ್ನು ಹೆಸರಿಸಿ, ಹೊಗಳಿ ನನ್ನ ಮೊಬೈಲ್ ನಂಬರ್ ತೆಗೆದುಕೊಂಡು ಹೋದ ಮೇಲೆ ಅಷ್ಟು ಹೊತ್ತು ನನ್ನ ಪುಸ್ತಕದ ಕಡೆ ಕಣ್ಣೆತ್ತಿಯೂ ನೋಡದವರು ಒಮ್ಮೆ ನನ್ನ ಬಳಿ ಬಂದು ನನ್ನ ಪುಸ್ತಕವನ್ನು ತಿರುಗಿಸಿ ಮುರುಗಿಸಿ ನೋಡಿ ಹಾಳೆ ಬಿಡಿಸಿ ಓದಿ ನನ್ನೆಡೆ ಮೆಚ್ಚುಗೆಯ ಮಂದಹಾಸ ಬೀರಿದ್ದರು.
ಕನ್ನಡದ ಹೊಸ ಅಲೆಯ ನಿರ್ದೇಶಕ, ನಿರ್ದೇಶಕಿ ಮತ್ತು ನಟ ನಿರ್ದೇಶಕ ಮೂವರು ಆ ಸಮಾರಂಭದಲ್ಲಿ ಭಾಗವಹಿಸಿದ್ದರು. ನನ್ನಿಂದ ಮಾರುದೂರದಲ್ಲಿ ನಿಂತು ಕನ್ನಡ ಚಿತ್ರರಂಗದ ಸ್ಥಿತಿಗತಿಯ ಬಗ್ಗೆ ಕಳಕಳಿಯಿಂದ ಚರ್ಚಿಸುತ್ತಿದ್ದರು. ಆದರೆ ಅವರು ಹೋಗುವಾಗ, ಬರುವಾಗ ನಿಂತು ಮಾತಾಡುವಾಗ ಕೇವಲ ಮಾರುದೂರದಲ್ಲಿ ಬೇಡವೆಂದರೂ ಕಣ್ಣಿಗೆ ಬೀಳುವಂತಿದ್ದ ಪುಸ್ತಕದ ಕಡೆಗೆ ಸುಮ್ಮನೆ ಕೂಡ ತಿರುಗಿಯೂ ನೋಡಲಿಲ್ಲ ಎಂಬುದು ಬೇಸರದ ಸಂಗತಿ ಎನ್ನಬಹುದು. ಒಂದಷ್ಟು ಸಿನಿಮಾದ ಒಲವಿದ್ದ ಮೇಲೆ ಯಾವುದೇ ರೀತಿಯ ಸಿನಿಮಾ ಸಂಬಂಧ ಪಟ್ಟ ಪುಸ್ತಕವೋ ಡಿವಿಡಿಯೋ ಇದ್ದರೇ ಕುತೂಹಲಕ್ಕಾದರೂ ಒಮ್ಮೆ ನೋಡುವುದು ಸಹಜ. ಅದರಲ್ಲಿ ನಾವು ನೋಡುವುದೇನಿದೆ...ನಾವು ಅದನ್ನೆಲ್ಲಾ ಮೀರಿದವರು ಎಂಬ ಮನೋಭಾವ ಅವರದ್ದಾಗಿತ್ತು.

Sunday, April 20, 2014

ನಾನು ಅವನಾಗ ಹೊರಟು......

ನಿಮ್ಮ ಸಿನಿಮಾ ನಾಲೆಜ್ ಸೂಪರ್ ..ಹಾಗೆಯೇ ಸಾಹಿತ್ಯ ಕೂಡ ಚೆನ್ನಾಗಿಯೇ ಗೊತ್ತಿದೆ. ಭಾಷೆಯ ಮೇಲಿನ ಹಿಡಿತ ಅದ್ಭುತ ಇಷ್ಟಿದ್ದೂ ಯಾಕೆ ನೀವು ಈ ಮಾಸ್ತರಿಕೆ ಕೆಲಸ ಮಾಡಬೇಕು..?ಅದೇ ನಿಮ್ಮ ಗೆಳೆಯ ಅಂತೀರಿ ಅವನನ್ನ..ಕ್ಲಾಸ್ ಮೇಟ್ ಬೇರೆ. ನೋಡಿ ಈವತ್ತು ಸುಮಾರು ಸಿನಿಮಾ ಡೈರೆಕ್ಟ್ ಮಾಡೇ ಬಿಟ್ಟಾ..? ಇವತ್ತು ಪತ್ರಿಕೆಗಳಲ್ಲಿ, ಟಿವಿನಲ್ಲಿ ಅವನ ಹೆಸರು, ಸಂದರ್ಶನ ಎಲ್ಲಾ ಬರ್ತಾ ಇದೆ. ನೀವು ಯಾಕೆ ಟ್ರೈ ಮಾಡಬಾರದು..?
ನಮ್ಮ ಬಾಸ್ ಹಾಗೆ ಹೇಳಿದಾಗ ನಾನು ಯೋಚಿಸುವಂತಾದದ್ದು ನಿಜ. ಈವತ್ತು ಚಿತ್ರರಂಗದಲ್ಲಿ ನಿರ್ದೇಶಕನಾಗಿ ಕತೆಗಾರನಾಗಿ ಮಿಂಚುತ್ತಿರುವ ಅವನು ನನ್ನ ಕಾಲೇಜ್ ಮೇಟ್. ಹಾಗೂ ಹಾಸ್ಟೆಲ್ ಮೇಟ್. ಜೊತೆಯಲ್ಲಿಯೇ ಮೂರು ವರ್ಷ ಕಳೆದವರು. ಅವನೂ ಬ್ರಿಲ್ಲಿಯೆಂಟ್. ಆದರೂ ಆಗಾಗ ಕತೆ ಬರೆಯುತ್ತಿದ್ದ. ಇಬ್ಬರೂ ಜೊತೆ ಜೊತೆಯಾಗಿಯೇ ಸಿನಿಮಾ ನೋಡುತ್ತಿದ್ದೆವು. ಚರ್ಚಿಸುತ್ತಿದ್ದೆವು. ಆ ನಿರ್ದೇಶಕ ಹಾಗೆ ಈ ನಿರ್ದೇಶಕ ಹೀಗೆ ಎಂದೆಲ್ಲಾ ಆಯಾ ನಿರ್ದೇಶಕರ ಮಾನ ಮರ್ಯಾದೆ ಹರಾಜಾಗುತ್ತಿದ್ದೆವು.ಆ ಚಿತ್ರದ ಕತೆ ಚಿತ್ರಕತೆ ಬಗ್ಗೆ ಸಂಭಾಷಣೆ ನಿರ್ದೇಶನ ಅಭಿನಯ ಹೀಗೆ ಎಲ್ಲಾ ವಿಷಯಗಳನ್ನೂ ಚರ್ಚಿಸುತ್ತಿದ್ದೆವು. ಆಗಾಗ ಅವನು ನಾನೇನಾದರೂ ಮುಂದೆ ಸಿನಿಮಾ ಮಾಡಿದ್ರೆ ಹೀಗೆ ಮಾಡಲ್ಲಪ್ಪ ಎನ್ನುತ್ತಿದ್ದ. ಆಗ ನಾನೂ ಅವನ ಜೊತೆ ದನಿ ಗೂಡಿಸುತ್ತಿದ್ದೆ. ಹೌದು. ಒಳ್ಳೆ ಕನ್ನಡ ಚಿತ್ರ ಮಾಡಬೇಕು. ಎಂತೆಂಥ ಕತೆಗಳಿವೆ ಕನ್ನಡದಲ್ಲಿ. ಅದನ್ನೆಲ್ಲಾ ದೃಶ್ಯ ಮಾಧ್ಯಮಕ್ಕೆ ತರಬೇಕು.. ಎಂದೆಲ್ಲಾ ಮಧ್ಯರಾತ್ರಿಯವರೆಗೆ ಮಾತನಾಡುತ್ತಿದ್ದೆವು.
ನಮ್ಮ ಸಿನಿಮಾ ಹುಚ್ಚು ಎಷ್ಟಿತ್ತು ಎಂದರೆ ಇಡೀ ಹಾಸ್ಟೆಲ್ ಗೆಳೆಯರು, ಕಾಲೇಜು ಹುಡುಗರು ಬಿಡುಗಡೆಯಾದ ಹೊಸ ಚಿತ್ರಕ್ಕೆ ಹೋಗಬೇಕೆಂದರೆ ನಮ್ಮನ್ನೊಮ್ಮೆ ಕೇಳಿ ಅದರ ಬಗ್ಗೆ ತಿಳಿದುಕೊಂಡು ಹೋಗುತ್ತಿದ್ದರು. ಬಿಡುಗಡೆಯಾದ ಎಲ್ಲಾ ಚಿತ್ರವನ್ನೂ ಆಯಾದಿನವೇ ರಾತ್ರಿಯ ಆಟ ನೋಡಿಬಿಡುತ್ತಿದ್ದೆವು.
ಆನಂತರ ನಮ್ಮ ದಿಕ್ಕು ಬೇರೆ ಬೇರೆಯಾಯಿತು. ನಾನಂತೂ ಒಳ್ಳೆಯ ಅಂಕವಿದ್ದರಿಂದ ಸುಲಭವಾಗಿ ಕೆಲಸ ತೆಗೆದುಕೊಂಡಿದ್ದೆ. ಆನಂತರ ಮನೆಯಲ್ಲಿ ಸ್ವಲ್ಪ ಮಟ್ಟಿಗಿನ ನೆಮ್ಮದಿ ಇತ್ತು. ದಿನ ಕಳೆಯುತ್ತಿದ್ದಂತೆ ನನ್ನ ಜೀವನ ತನ್ನದೇ ಆದ ರೂಪು ಪಡೆದುಕೊಳ್ಳುತ್ತಿತ್ತು. ಈ ನಡುವೆ ಅವನು ಎನಾದಾ ? ಎಂಬುದನ್ನು ನಾನು ಮರತೆ ಬಿಟ್ಟಿದ್ದೆ. ಆಗಾಗ ಗೆಳೆಯರು ಸಿಕ್ಕರೆ ಅವನ ವಿಷಯ ಬಂದಾಗ ಮಾತನಾಡುತ್ತಿದ್ದೆವು. ಅವನಾ..ಅದೆಲ್ಲೋ ಬೆಂಗಳೂರಿಗೆ ಹೋಗಿದ್ದಾನಂತೆ ಅದ್ಯಾವುದೋ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದಾನಂತೆ..ಅವನಿಗೇನು ಮಾರಾಯ..ಎಲ್ಲಾ ಚೆನ್ನಾಗಿತ್ತು..ಆರಾಮವಾಗಿ ಬದುಕಬಹುದಿತ್ತು..ಅದು ಬಿಟ್ಟು ಇದೆಲ್ಲಾ ಪಡಿ ಪಾಟಲು ಬೇಕಿತ್ತಾ ಅವನಿಗೆ...ಹೀಗೆ ಅವನ ಮಾತಿಲ್ಲದೆ ನಮ್ಮ ಮಾತುಕತೆ ಮುಗಿಯುತ್ತಿರಲಿಲ್ಲ. ಆಗಾಗ ಅಲ್ಲೊಂದು ಇಲ್ಲೊಂದು ಪತ್ರಿಕೆಯಲ್ಲಿ ಅವನು ಬರೆದ ಬರಹಗಳು ಪ್ರಕಟವಾದಾಗ ನಾವೆಲ್ಲಾ ಗೆಳೆಯರು ಓದಿ ಮಾತಾಡಿಕೊಳ್ಳುತ್ತಿದ್ದೆವು. ಇಷ್ಟೆಲ್ಲಾ ಬರೆಯುವ ತಿಳಿದುಕೊಂಡಿರುವವ ಇನ್ನೂ ಸೆಟ್ಲ್ ಆಗದೆ ಒದ್ದಾಡುತ್ತಿರುವುದು ನಮಗೆ ಸ್ವಲ್ಪ ಬೇಸರ ತರಿಸುತ್ತಿತ್ತು.
ಆದರೆ ಇದೆಲ್ಲಾ ಒಂದು ಎಂಟು ವರ್ಷದ ನಂತರ ಬದಲಾಯಿತು. ಇದ್ದಕ್ಕಿದ್ದಂತೆ ಅವನು ಚಿತ್ರರಂಗದಲ್ಲಿ ಉದಯವಾದವನು ಹೆಸರು ಮಾಡಿದ. ಹಣ ಮಾಡಿದ. ಎಲ್ಲಾ ಕಡೆ ಅವನದೇ ಮಾತು ಕತೆ.ಇಂತಹ ಸಮಯದಲ್ಲೇ ನಮ್ಮ ಬಾಸ್ ಹಾಗೆ ಹೇಳಿದ್ದು.
ಯಾಕೋ ಆ ರಾತ್ರಿ ನನಗೆ ನಿದ್ರೆಯೇ ಬರಲಿಲ್ಲ. ಅವನದೇ ಯೋಚನೆ ನಾವೆಲ್ಲಾ ಕೆಲಸ ತೆಗೆದುಕೊಂಡು ಮದುವೆಯಾಗಿ ಸೆಟ್ಲ್ ಆದೆವು ಎಂಬ ಹಮ್ಮಿನಲ್ಲಿ ಓಡಾಡುತ್ತಿದ್ದಾಗ ಆತ ಏನೇನೂ ಇಲ್ಲದೆ ಅಲೆಯುತ್ತಿದ್ದ.ಆದರೆ ಈಗ ಅವನದೇ ಮಾತು. ಮೆಚ್ಚುಗೆಯಲ್ಲಾ ಅವನದೇ. ಹಾಗೆ ನೋಡಿದರೆ ನಮಗಿಂತ ಚೆನ್ನಾಗಿಯೇ ಹಣವಂತನಾಗಿಯೇ ಇದ್ದಾನೆ ಅವನು. ನಾನು ತಪ್ಪು ಮಾಡಿದೆನಾ..? ನಾನೂ ಯಾಕೆ ಒಂದು ಕೈ ನೋಡಬಾರದು. ಅವನೇ ಮಾಡಿದ್ದಾನೆಂದರೆ ನಾನು ಮಾಡಲು ಕಷ್ಟವೇನಲ್ಲ.
ಮಾರನೆಯ ದಿನವೇ ಆತನ ಸಿನಿಮಾಗಳ ಡಿವಿಡಿಗಳನ್ನೂ ಕೊಂಡು ತಂದವನು ಒಂದರ ಹಿಂದೆ ಒಂದರಂತೆ ನೋಡಿದ್ದೆ. ಆದ್ರೆ ಯಾಕೋ ಯಾವುದೂ ಮನಸ್ಸಿಗೆ ತಾಕಿರಲಿಲ್ಲ.ನಾವು ಕಾಲೇಜು ದಿನಗಳಲ್ಲಿ ಹೇಗೆ ಸಿನಿಮಾ ಮಾಡಬಾರದು ಎಂದೆಲ್ಲಾ ಬೈದಾಡಿದ್ದೆವೋ ಆತ ಅದನ್ನೆಲ್ಲಾ ಮರೆತವನಂತೆ ಹಾಗೆಯೇ ಅಥವಾ ಸ್ವಲ್ಪ ಅದಕ್ಕಿಂತ ವ್ಯತಿರಿಕ್ತವಾಗಿ ಮಾಡಿದ್ದ. ಅಷ್ಟೇ. ಅದು ಬಿಟ್ಟರೆ ಯಾವುದೂ ಅಂತಹ ಮಾಸ್ಟರ್ ಪೀಸ್ ಎನಿಸುವ ಹಾಗಿರಲಿಲ್ಲ. ಅದರಲ್ಲೂ ಆತನ ಮೂರನೆಯ ಸಿನಿಮಾವನ್ನು ಪೂರ್ತಿ ನೋಡಲು ನನಗೆ ಅದೆಷ್ಟು ಬೋರಾಗುತ್ತಿತ್ತು ಎಂದರೆ ಯಾವಾಗ ಮುಗಿಯುತ್ತದೋ ಎನಿಸುತ್ತಿತ್ತು.ಆದರೆ ಆ ಚಿತ್ರ ಅದ್ಭುತ ಯಶಸ್ಸು ಗಳಿಸಿತ್ತಲ್ಲದೆ ಒಂದೆರೆಡು ಪ್ರಶಸ್ತಿ ಪುರಸ್ಕಾರಗಳನ್ನೂ ಪಡೆದುಕೊಂಡಿತ್ತು.
ಹೌದು. ನಾನು ಇವನಿಗಿಂತ ಚೆನ್ನಾಗಿ ಸಿನಿಮಾ ಮಾಡಬಲ್ಲೆ. ಅದ್ಭುತವಾದ ಕತೆ, ಕಲ್ಪನೆ ನನ್ನಲ್ಲಿದೆ. ಇಷ್ಟೆಲ್ಲಾ ಸಾಧಿಸಲು ಅವನು ತೆಗೆದುಕೊಂಡಷ್ಟು ಸಮಯ ನನಗೆ ಬೇಕಾಗೂ ಇಲ್ಲ. ಯಾಕೆಂದರೆ ನಾನು ಅವನಿಗಿಂತ ಅಡ್ವಾನ್ಸ್ ಇದ್ದೇನೆ ಎನಿಸಿತು.
nanu ನಾನು ನಿರ್ಧರಿಸಿದೆ. ನಾನೂ ಒಂದು ಕೈ ನೋಡಿಯೇ ಬಿಡುತ್ತೇನೆ. ರಂಗಿನಲೋಕದಲ್ಲಿ ನನ್ನದು ಒಂದು ಹೋಳಿ ಆಟ ಆಡಿಯೇ ತೀರುತ್ತೇನೆ.
ಮಾರನೆಯ ದಿನ ಬೆಳಿಗ್ಗೆ ಬಾಸ್ ಗೆ ವಿಷಯ ಹೇಳಿದಾಗ ಮೊದಲಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಅವರು ಆನಂತರ ಒಮ್ಮೆ ಸರಿಯಾಗಿ ಯೋಚಿಸಿ ನಿರ್ಧಾರ ಮಾಡು ಎಂಬ ಅಪಸ್ವರದ ಮಾತನಾಡಿದ್ದು ನನಗೆ ಇಷ್ಟವಾಗಲಿಲ್ಲ. ಆದರೆ ನನ್ನ ನಿರ್ಧಾರ ಗಟ್ಟಿಯಾಗಿತ್ತು.
ನಾನು ಅವನನ್ನು ಮೀರಿಸಬೇಕಿತ್ತು.
ಮಾರನೆಯ ದಿನವೇ ಕೆಲಸ ಬಿಟ್ಟೆನಾದರೂ ಯಾವಾಗ ಬೇಕಾದರೂ ಬಂದು ಮತ್ತೆ ಕೆಲಸಕ್ಕೆ ಜಾಯಿನ್ ಆಗಬಹುದು ಎಂದು ನನ್ನ ಬಾಸ್ ಹೇಳಿದಾಗ ಖುಷಿಯಾಯಿತು.ಆದರೆ ಹೇಗೋ ಸಾಧನೆ ಮಾಡಲು ಹೊರತು ನಿಂತಿರುವೆ. ನಿನಗದರಲ್ಲಿ ಪ್ರಾಕ್ಟಿಕಲ್ ನಾಲೆಜ್ ಕಡಿಮೆ. ಒಮ್ಮೆ ಅವನ ಅಭಿಪ್ರಾಯ ಸಲಹೆ ಯಾಕೆ ತೆಗೆದುಕೊಳ್ಳಬಾರದು ಎಂದರು.ನನಗೆ ಉರಿದು ಹೋಯಿತು. ಅದರ ಅವಶ್ಯಕತೆ ನನಗಿಲ್ಲ ಎಂದವನೇ ದುರ್ದಾನ ತೆಗೆದುಕೊಂಡವನಂತೆ ಅಲ್ಲಿಂದ ಹೊರಟುಬಂದಿದ್ದೆ.
ಈಗ ನನ್ನ ಗುರಿ ಸ್ಪಷ್ಟವಾಗಿತ್ತು..ಮನಸ್ಸಿನಲ್ಲಿ ಅವನು ಬಂದು ಹೋದ. ಅವನನ್ನು ಪ್ರತಿಸ್ಪರ್ಧಿಯಾಗಿ ತೆಗೆದುಕೊಂಡಿರುವವನು ನಾನು..ಅವನ ಹತ್ತಿರ ಸಲಹೆ ಕೇಳುವ ಸಲಾಮು ಹೊಡೆಯುವುದು ನನಗೆ ಇಷ್ಟವಾಗಲಿಲ್ಲ. ಮೊದಲಿಗೆ ಏನೇನು ಮಾಡಬೇಕು ಎಂಬುದನ್ನು ಪಟ್ಟಿ ಮಾಡಿದೆ. ಒಂದೊಳ್ಳೆ ಕತೆ ಮಾಡುವುದು..ಆನಂತರ ಮುಂದಿನದರ ಬಗ್ಗೆ ಯೋಚಿಸೋಣ. ಕತೆಯಿಲ್ಲದೆ ರೀಮೇಕ್ ರೀಮಿಕ್ಸ್ ಗಳಲ್ಲಿ ಕಳೆದುಹೋಗಿ ಒದ್ದಾಡುತ್ತಿರುವ ಚಿತ್ರರಂಗಕ್ಕೆ ನಾನು ಓಯಸಿಸ್ ಆದರೂ ಆಗಬಹುದು. ನನ್ನ ಮನೆಯ ಮುಂದಿನ ಚಿತ್ರಕರ್ಮಿಗಳು ಸಾಲು ಗಟ್ಟಿ ನಿಲ್ಲಬಹುದು ಎನಿಸಿತು.
nanu ನಾನು ನಿರ್ಧರಿಸಿದೆ.
.....
...
ಚೇತನ್ ಭಗತ್ ಜೊತೆಯಲ್ಲೇ ಓದಿದ ಎಸ್.ವಿ.ದಿವಾಕರ್ ಬರೆದ ಬೀಟನ್ ಬಿ ಭಗತ್ ಕಾದಂಬರಿಯ ಭಾವಾನುವಾದವಿದು. ಜೊತೆಯಲ್ಲೇ ಓದಿದ ಗೆಳೆಯನೊಬ್ಬ ಏನೋ ಮಾಡಿದ ಎಂದು ಹಠಕ್ಕೆ ಬೀಳುವ ದಿವಾಕರ್ ಲಕ್ಷಗಟ್ಟಲೆ ಸಂಬಳವಿದ್ದ ಕೆಲಸವನ್ನು ಲೆಕ್ಕಿಸದೆ ಅವನ ತರಹವೇ ಆಗಬೇಕೆಂದು ಪಣತೊಡುತ್ತಾರೆ. ತಾನು ಬರೆಯುತ್ತೇನೆ. ಲಕ್ಷ ಲಕ್ಷ ಸಂಪಾದಿಸುತ್ತೇನೆ..ಹೆಸರು ಗಳಿಸುತ್ತೇನೆ ಎಂದೆಲ್ಲಾ ಕನಸು ಕಟ್ಟಿಕೊಂಡು ಪೆನ್ನು ಹಿಡಿಯುತ್ತಾರೆ.
ನಾನು ನಾನು ಅಷ್ಟೇ. ನಾನು ಬೇರೆ ಯಾರ ತರಹವೂ ಆಗಬೇಕಿಲ್ಲ ಆಗುವುದು ಸಾಧ್ಯವೂ ಇಲ್ಲ. ಹಾಗೆಯೇ ಸಾಧನೆಯ ಹಾದಿ ಅಷ್ಟು ಸುಲಭದ ಸರಾಗದ ಹಾದಿಯಲ್ಲ ಎಂಬುದು ಗೊತಾಗುವವರೆಗೆ ಅವರು ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಸಮಯವಿದ್ದರೆ ಒಮ್ಮೆ ಓದಬಹುದು. ಎಲ್ಲೂ ಬೋರ್ ಹೊಡೆಸದ ಕಾದಂಬರಿ ಇದು.
[ಅಂದ ಹಾಗೆ ಅದನ್ನು ನಾನು ನನಗನಿಸಿದ ರೀತಿಯಲ್ಲಿ ನನ್ನ ಅನುಭವದ ಜೊತೆಗೆ ಪರಿಚಯಿಸಿದ್ದೇನೆ. ಅಷ್ಟೇ]

Friday, April 18, 2014

ಅವರ್ಯಾಕೆ ಓಡುತ್ತಿರುತ್ತಾರೆ ..? ಒಂದು ತಲೆ ಹರಟೆ.

ಚಿತ್ರದಲ್ಲಿ ಪ್ರೊಮೊ ಎಷ್ಟು ಮುಖ್ಯವೋ ಅದರ ಪೋಸ್ಟರ್ ಕೂಡ ಅಷ್ಟೇ ಮುಖ್ಯ ಎನ್ನಬಹುದು. ಯಾಕೆಂದರೆ ಪ್ರೊಮೊ ಹಾಡುಗಳಿಗಿಂತ ಮೊದಲಿಗೆ ಚಿತ್ರದ ಬಗ್ಗೆ ಸಣ್ಣ ಸುಳಿವು ಕೊಡುವುದು ಕುತೂಹಲ ಕೆರಳಿಸುವುದು ಈ ಪೋಸ್ಟರ್ ಗಳು ಎನ್ನಬಹುದು.ಅದರಲ್ಲೂ ಒಂದು ಚಿತ್ರದ ಪೋಸ್ಟರ್ ಆ ಚಿತ್ರದ ಬಗ್ಗೆ ಕುತೂಹಲ ಕೆರಳಿಸಬಹುದು, ಕತೆಯ ವಸ್ತುವನ್ನು ಬಿಚ್ಚಿಡಬಹುದು. ಹಾಗಾಗಿಯೇ ಒಬ್ಬ ನಿರ್ದೇಶಕ ಸಿನಿಮಾ ಮಾಡುವ ಆಷ್ಟೇ ಅಸ್ಥೆಯಿಂದ ಪೋಸ್ಟರ್ ಕೂಡ ವಿನ್ಯಾಸ ಮಾಡಿಸುತ್ತಾನೆ.
ಇದೊಂದು ಘಟನೆಯನ್ನು ನನಗೆ ಯಾರೋ ಒಬ್ಬರು ಹೇಳಿದ್ದರು. ಒಮ್ಮೆ ಪೋಸ್ಟರ್ ವಿನ್ಯಾಸಕಾರನ ಹತ್ತಿರ ಹೋದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ತಮ್ಮ ಚಿತ್ರ ರಂಗನಾಯಕಿ ಗೆ ಸೂಕ್ತವಾದ ಪೋಸ್ಟರ್ ವಿನ್ಯಾಸ ಮಾಡಿಕೊಡುವಂತೆ ಕೇಳಿಕೊಂಡರು. ತಮ್ಮ ಚಿತ್ರದ ಕತೆಯನ್ನು ಅದರ ಆಶಯವನ್ನು ಸಂಪೂರ್ಣವಾಗಿ ವಿವರಿಸಿದ ಖ್ಯಾತರು ತಮಗೆ ಒಬ್ಬ ಕಲಾವಿದೆಯ ಜೀವನದಲ್ಲಿ ಮದುವೆ ಎಂಬುವುದು ಹೇಗೆ ಆಕೆಯ ಕಲೆಯನ್ನು ಮರೆಯುವಂತೆ ಮಾಡಿ ಬಿಟ್ಟಿತು ಅಥವಾ ಮದುವೆಯೇ ಆಕೆಯ ಕಲೆಗೆ ಹೇಗೆ ಅಡ್ಡಗಾಲು ಹಾಕಿತು ಎಂಬುದನ್ನು ಸೂಚ್ಯವಾಗಿ ವಿವರಿಸುವ ಪೋಸ್ಟರ್ ರಚಿಸುವಂತೆ ಹೇಳಿದಾಗ ಕಲಾವಿದರು ಗೊಂದಲಕ್ಕೆ ಬಿದ್ದರಂತೆ. ಅಷ್ಟೂ ಕತೆಯನ್ನು ಹೇಗೆ ಒಂದೇ ಚಿತ್ರದಲ್ಲಿ ತೋರಿಸುವುದು ಎನ್ನುವುದನ್ನು ದಿನಗಟ್ಟಲೆ ಯೋಚಿಸಿದರೂ ಹೊಳೆಯದಿದ್ದಾಗ ಅವರು ಪುಟ್ಟಣ್ಣ ಅವರಲ್ಲೇ ಅದಕ್ಕೊಂದು ಐಡಿಯಾ ಕೊಡುವಂತೆ ಕೇಳಿಕೊಂಡರು.
ಸ್ವಲ್ಪ ಹೊತ್ತು ಯೋಚಿಸಿದ ಪುಟ್ಟಣ್ಣ ಹೇಳಿದರಂತೆ.
" ಒಂದು ಕೆಲಸ ಮಾಡಿ ಒಂದು ಬಾಗಿಲು ಕಟಾ೦ಜನವನ್ನು ಮಧ್ಯದಲ್ಲಿ ಬರೆಯಿರಿ. ಅದರ ಮೇಲೆ ಅಂದರೆ ಹೊಸ್ತಿಲ ಮೇಲೆ ಒಂದು ಮದುವೆಯಾಗಿ ಬಂದ ಹೆಣ್ಣು ಮಗಳು ಒದೆಯುವ ಅಕ್ಕಿ ತುಂಬಿದ ಸೇರು ಇರಲಿ. ಒಂದು ತುದಿಯಿಂದ ಪ್ರಾರಂಭವಾಗುವ ಹೆಜ್ಜೆ ಗುರುತುಗಳು ಆ ಹೊಸ್ತಿಲನ್ನು ದಾಟಿ ಇನ್ನೊಂದು ತುದಿಗೆ ಸಾಗಲಿ. ಹೊಸ್ತಿಲ ಆಚೆಯಿರುವ ಹೆಜ್ಜೆಗಳು ವರ್ಣರಂಜಿತವಾಗಿರಲಿ. ಹೊಸ್ತಿಲ ಹತ್ತಿರಕ್ಕೆ ಬರುಬರುತ್ತಾ ಅವುಗಳ ಬಣ್ಣ ಕಡಿಮೆಯಾಗಲಿ. ಹೊಸ್ತಿಲು ದಾಟಿದ ಮೇಲೆ ಅದರ ಬಣ್ಣ ಸಂಪೂರ್ಣ ಮಾಸಿಹೋಗಲಿ .."
ಅಂದರೆ ಹೊಸ್ತಿಲಾಚೆಗಿನ ಹೆಜ್ಜೆಗಳು ಆಕೆಯ ಕಲಾಜೀವನದ ಹೆಜ್ಜೆಗಳು. ಹಾಗಾಗಿಯೇ ಬಣ್ಣದ ಲೋಕದ ಹೆಜ್ಜೆಗಳು, ಬಣ್ಣದ ಹೆಜ್ಜೆಗಳು. ಹೊಸ್ತಿಲು ಒಳ ಹೋಗುವುದು ಮದುವೆಯ ಸಂಕೇತ. ಆನಂತರ ಮಾಸಿದ ಬಣ್ಣದ ಹೆಜ್ಜೆ ಗುರುತುಗಳು...
ನಿಜಕ್ಕೂ ಇದಕ್ಕಿಂತ ಅದ್ಭುತವಾದ ಆ ಸಿನಿಮಾಕ್ಕೆ ಒಪ್ಪುವ ಪೋಸ್ಟರ್ ವಿನ್ಯಾಸ ಇಲ್ಲ ಎನ್ನಬಹುದು.
ಉಪೇಂದ್ರರ ಎ ಚಿತ್ರದ ಪೋಸ್ಟರ್ ಕೂಡ ಅದ್ಭುತಗಳ ಸಾಲಿಗೆ ಸೇರುತ್ತದೆ ಎನ್ನಬಹುದು.ಚಿತ್ರದಲ್ಲಿರುವ ನಾಯಕನ ತುಮುಲ, ನಿರೂಪಣೆಯಲ್ಲಿನ ಗೊಂದಲವನ್ನು ಪೋಸ್ಟರ್ ನಲ್ಲೆ ಸೂಕ್ಷ್ಮವಾಗಿ ವಿವರಿಸಿದ್ದು ಆ ಚಿತ್ರದ ಪೋಸ್ಟರ್ ವಿನ್ಯಾಸದ ವಿಶೇಷ ಎನ್ನಬಹುದು.
ಹಾಗೆಯೇ ಹಾಲಿವುಡ್ನ ಹ್ಯಾರಿಸನ್ ಫೋರ್ಡ್ ಅಭಿನಯದ ಫ್ಯೂಜಿಟಿವ್ ಚಿತ್ರದ ಪೋಸ್ಟರ್ ಗಮನಿಸಿ. ಚಿತ್ರದ ತುಂಬಾ ತಪ್ಪಿಸಿಕೊಂಡು ಓಡುವ ನಾಯಕ ಪೋಸ್ಟರ್ ನಲ್ಲೂ ಓಡುತ್ತಿರುತ್ತಾನೆ. ಚಿತ್ರದ ಕತೆಗೆ ತಕ್ಕಂತೆ ಆ ಪೋಸ್ಟರ್ ಇದೆ ಎನ್ನಬಹುದು. ಆದರೆ ಇತ್ತೀಚಿಗೆ ಬಂದ ಒಂದಷ್ಟು ಚಿತ್ರಗಳ ಪೋಸ್ಟರ್ ಗಳನ್ನೂ ಗಮನಿಸಿ. ನಾಯಕರು ಓಡುತ್ತಲೇ ಇರುತ್ತಾರೆ. ಮಹೇಶ್ ಬಾಬು ಅಭಿನಯದ ಪೋಕಿರಿ ಚಿತ್ರದಿಂದ ಪ್ರಾರಂಭವಾದ ಪೋಸ್ಟರ್ ಓಟ ಈಗಲೂ ನಡೆಯುತ್ತಲೇ ಇದೆ. ಇತ್ತೀಚಿಗೆ ಬಂದ ಕನ್ನಡವೂ ಸೇರಿದಂತೆ ಸುಮಾರಷ್ಟು  ಚಿತ್ರಗಳ ನಾಯಕರು ಓಡುತ್ತಲೇ ಇರುವುದನ್ನು ನಾವು ಕಾಣಬಹುದು. ಅದೆಲ್ಲಿಗೆ ಓಡುತ್ತಿದ್ದಾರೆ, ಅದ್ಯಾಕೆ ಓಡುತ್ತಿದ್ದಾರೆ. ಇವರೇ ಯಾರನ್ನಾದರೂ ಅಟ್ಟಿಸಿಕೊಂಡು ಹೋಗುತ್ತಿದ್ದಾರಾ..? ಅಥವಾ ಇವರನ್ನು ಯಾರಾದರೂ ಅಟ್ಟಿಸಿಕೊಂಡು ಹೋಗುತ್ತಿದ್ದಾರಾ..? ಅಥವಾ ತಮಾಷೆಗೆ ಹೇಳುವುದಾದರೆ ಯಾವುದಾದರೂ ಸ್ಪರ್ದೆಯಲ್ಲಿ ಭಾಗವಹಿಸುತ್ತಿದ್ದಾರಾ? ಎಂಬ ಪ್ರಶ್ನೆ ಎದುರಾಗದೆ ಇರದು.
ಯಾಕೆಂದರೆ ಆ ಪೋಸ್ಟರ್ ಚಿತ್ರಗಳನ್ನೆಲ್ಲಾ ನಾನು ನೋಡಿದ್ದೇನೆ. ಅವುಗಳಲ್ಲಿ ಅಂತಹ ಓಟ ಇಲ್ಲ. ನಾಯಕ ಯಾವುದೋ ಹೊಡೆದಾಟದ ಸಂದರ್ಭದಲ್ಲಿ ಓಡಿರಬಹುದೇನೋ? ಅದು ಬಿಟ್ಟರೆ ಚಿತ್ರದ ಕತೆಗೆ ಓಟಕ್ಕೆ ಸಂಬಂಧವಿಲ್ಲ. ಪೋಸ್ಟರ್ ನಲ್ಲಿ ಅಷ್ಟು ಫೋರ್ಸ್ ನಿಂದ ಓಡುವ ನಾಯಕನ ಸಿನಿಮಾ ಎಷ್ಟೋ ಸಾರಿ ಆಮೆವೇಗದಲ್ಲಿದ್ದು ಜನರೇ ಚಿತ್ರಮಂದಿರದಿಂದ ಹೊರಕ್ಕೆ ಓಟಕಿತ್ತ ಉದಾಹರಣೆ ಇಲ್ಲದಿಲ್ಲ.
ಮೊನ್ನೆ ಬಿಡುಗಡೆಯಾದ ಚಿತ್ರಗಳ ಪೋಸ್ಟರ್ ಗಮನಿಸಿ. ನಾಯಕಿ ಕೈಹಿಡಿದು ಕೊಂಡು ಓಡುತ್ತಿರುವ, ಗುಂಪು ಕಟ್ಟಿಕೊಂಡು ಓಡುತ್ತಿರುವ, ಕೈ ಯಲ್ಲಿ ಆಯುಧ ಹಿಡಿದು ಓಡುತ್ತಿರುವ, ಖುಷಿಯಿಂದ ಓಡುತ್ತಿರುವ, ಕೋಪದಿಂದ ಮುನ್ನುಗ್ಗಿ ಓಡುತ್ತಿರುವ, ತಪ್ಪಿಸಿಕೊಂಡು ಓಡುತ್ತಿರುವ ಹೀಗೆ ತರಹೇವಾರಿ ಓಟಗಾರರನ್ನು ಕಾಣಬಹುದು.ಆದರೆ ಸಿನಿಮಾದ ಕತೆಯಲ್ಲಿ ಆತರಹದ ಪಲಾಯನ, ತಪ್ಪಿಸಿಕೊಳ್ಳುವಿಕೆ ಇಲ್ಲ. ಸಾಮಾನ್ಯ ಪ್ರೇಮಕತೆಯ ಚಿತ್ರವಾದರೂ ನಾಯಕ ಓಡಿದರೆ ಏನು ಮಾಡೋಣ.
ಅಥವಾ ಬೇಗ ಬನ್ನಿ ಇಲ್ಲವಾದರೆ ನಾನೂ ಚಿತ್ರಮಂದಿರದಿಂದಲೇ ಓಡಿಬಿಡುತ್ತೇನೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತಿರಬಹುದಾ?

Tuesday, April 15, 2014

ಟೆಂಟ್ ಸಿನಿಮಾ..-

ಏನೇ ಆಗಲಿ ಅದೇನೇ ಹೋಂ ಥಿಯೇಟರ್ , 3 ಡಿ ಇದ್ದರೂ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಹೋಗಿ ನೋಡುವ ಸೊಬಗೆ ಅನನ್ಯ ಎನ್ನಬಹುದು. ನಾನು ಮೊದಲ ಬಾರಿಗೆ ಚಿತ್ರಮಂದಿರದಲ್ಲಿ ನೋಡಿದ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ನಿಖರವಾದ ಉತ್ತರ ನನಗೆ ದೊರಕಿಲ್ಲ. ಬಹುಶ ದೊರಕುವುದೂ ಇಲ್ಲವೇನೋ. ಆದರೆ ಚಿತ್ರ ನೋಡಿದ ಚಿತ್ರಮಂದಿರ ಮಾತ್ರ ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. ನಾವೆಲ್ಲಾ  ಆ ಚಿತ್ರಮಂದಿರಕ್ಕೆ ಹೋಗಿದ್ದೆವು. ಭಯಾನಕ ಜನ ಜಾತ್ರೆ ಸೇರಿದ್ದ ಚಿತ್ರಮಂದಿರವದು. ಟಿಕೆಟ್ ತೆಗೆದುಕೊಳ್ಳಲು ನೂಕು ನುಗ್ಗಲು ..ಒಳ ನುಗ್ಗಲು ನೂಕು ನುಗ್ಗಲು..ಅಬ್ಬಬ್ಬಾ ಅದರ ನೆನಪೇ ರೋಮಾಂಚನ ಎನ್ನಬಹುದು.
ಆ ಚಿತ್ರಮಂದಿರದಲ್ಲಿ ಕುರ್ಚಿಗೆ ನಂಬರಿನ ವ್ಯವಸ್ಥೆ ಇರಲಿಲ್ಲ.ಹಾಗಾಗಿ ಇಡೀ ಕುಟುಂಬದವರು ಒಟ್ಟಿಗೆ ಸಿನಿಮಾ ನೋಡಲು ಹೋದರೆ ಒಂದೇ ಸಾಲಿನಲ್ಲಿ ಕುಳಿತುಕೊಳ್ಳಲು ಹರ ಸಾಹಸ ಪಡಬೇಕಿತ್ತು. ಯಾರಾದರೂ ಒಬ್ಬರು ಮೊದಲೇ ಸಾಲಿನಲ್ಲಿ ನಿಂತು ಟಿಕೇಟು ತೆಗೆದುಕೊಂಡು ಆ ಜನಜಾತ್ರೆಯಲ್ಲಿ ಹೋರಾಡಿ ಮುನ್ನುಗ್ಗಿ ಒಳನುಗ್ಗಿ ಸೀಟು ಕಾಯ್ದಿರಿಸಬೇಕಾಗಿತ್ತು. ಅದಕ್ಕಾಗಿ ಎಷ್ಟೋ ಸಾರಿ ಚಿಕ್ಕಪುಟ್ಟ ಜಗಳಗಳೇ ಪ್ರಾರಂಭವಾದರೂ ಬೆಳ್ಳಿ ಪರದೆಯ ಮೇಲೆ ಚಿತ್ರ ಮೂಡುತ್ತಿದ್ದಂತೆ ಆ ಜಗಳ ಅಷ್ಟಕ್ಕೇ ನಿಲ್ಲುತ್ತಿತ್ತು.
ನನಗೆ ನಮ್ಮ ಊರಿನ ಹತ್ತಿರದಲ್ಲಿದ್ದ ಟೆಂಟ್ ಇನ್ನೂ ಚೆನ್ನಾಗಿ ನೆನಪಿದೆ. ಅದೊಂತರ ವಿಚಿತ್ರ ಟೆಂಟ್. ಸುಮ್ಮನೆ ಆಳುದ್ದದ ಗೋಡೆ ಕಟ್ಟಿ ಅದರ ಮೇಲೆ ಶೀಟು ಹೊದಿಸಿ ಮುಂದೆ ಪರದೆ ಬಿಟ್ಟಿದ್ದರು.ಆ ಟೆಂಟಿನ ಸುತ್ತಲೂ ಬೇಲಿ ಹಾಕಿದ್ದರೆ ವಿನಃ ಕಂಪೌಂಡ್ ಕಟ್ಟಿರಲಿಲ್ಲ. ಹಾಗಾಗಿ ಅದೆಷ್ಟೋ ಪಿಳ್ಳೆ ಹುಡುಗರು ಸಿನಿಮಾ ಪ್ರಾರಂಭವಾದ ಅರ್ಧಗಂಟೆಯ ನಂತರ ಬೇಲಿ ಹಾರಿ ಹಾಗೆಯೇ ಒಳ ನುಸುಳುವ ಪ್ರಯತ್ನ ಪಟ್ಟು ಯಶಸ್ವಿಯಾಗುತ್ತಿದ್ದರು. ಅದರಲ್ಲೂ ನನ್ನದೇ ಗೆಳೆಯ ಉಮೇಶನ ಮನೆ ಅದರ ಪಕ್ಕದಲ್ಲೇ ಇದ್ದದ್ದರಿಂದ ಅವನು ಸಂಜೆ ನಾಲ್ಕು ಗಂಟೆಯ ಪ್ರದರ್ಶನಗಳನ್ನು ಬಿಡದೆ ನೋಡುತ್ತಿದ್ದ. ನಮಗೆಲ್ಲಾ ಹೊಟ್ಟೆಕಿಚ್ಚಾಗುತ್ತಿದ್ದದ್ದು ಅದೇ ಕಾರಣದಿಂದಾಗಿ. ನಾವೆಲ್ಲಾ ಒಂದು ಸಿನಿಮಾಕ್ಕೆ ಹೋಗಬೇಕಾದರೆ ಮನೆಯವರನ್ನು ಕಾಡಿ ಬೇಡಿ ಪೀಡಿಸಿ ಹೋಗಬೇಕಾಗಿತ್ತು. ಅದರಲ್ಲೋ ಆ ಚಿತ್ರ ಎಂತಹದ್ದು ಮಕ್ಕಳು ನೋಡುವ ಹಾಗಿದೆಯಾ ಮುಂತಾದ ವಿಚಾರಣೆಗಳನ್ನು ಮನೆಯವರು ಅಕ್ಕಪಕ್ಕದವರಿಂದ ತಿಳಿದು ಆನಂತರವೇ ಹೋಗಲು ಅನುಮತಿ ಮತ್ತು ಹಣ ಕೊಡುತ್ತಿದ್ದರು. ಆದರೆ ಉಮೇಶನಿಗೆ ಅದ್ಯಾವ ಕಟ್ಟಳೆ ಇರಲಿಲ್ಲ. ಹಾಗಾಗಿ ಆ ಟೆಂಟ್ಗೆ ಬಂದ ಎಲ್ಲಾ ಸಿನಿಮಾಗಳನ್ನ ಬೇಲಿ ಹಾರಿ ನೋಡಿ ಬಿಡುತ್ತಿದ್ದ. ಆದರೆ ಅವನ ಸಮಸ್ಯೆಯೂ ಒಂದಿತ್ತು. ಅದೆಂದರೆ ಅವನಿಗೆ ಮೊದಲಿನ ಅರ್ಧ ಗಂಟೆ ಯಾವತ್ತೂ ಸಿಗುತಿರಲಿಲ್ಲ. ನಮ್ಮ ಹತ್ತಿರ ಬಂದು ಸಿನಿಮಾ ಕತೆ ಹೇಳಲು ಪ್ರಾರಂಭಿಸುತ್ತಿದ್ದ ಉಮೇಶನಿಗೆ ಮೊದಲಿಗೆ ಏನು ಹೇಳು ಎಂದರೆ ಮುಖಾ ಮುಖಾ ನೋಡುತ್ತಿದ್ದ.
ಆ ಟೆಂಟ್ ನಲ್ಲಿ ಎರಡು ತರಗತಿಗಳಿದ್ದವು. ಒಂದು ನೆಲ ಮತ್ತು ಎರಡನೆಯದು ಕುರ್ಚಿ. ನೆಲದಲ್ಲಿ ಪುಣ್ಯಾತ್ಮರು ಸಿಮೆಂಟ್ ಕೂಡ ಹಾಕಿಸಿರಲಿಲ್ಲ. ಹಾಗಾಗಿ ಅಲ್ಲೆಲ್ಲಾ ಮರಳು ಮಣ್ಣು ಇರುತ್ತಿತ್ತು. ನಾವೆಲ್ಲಾ ಚಿತ್ರ ಮಂದಿರಕ್ಕೆ ನೆಲಕ್ಕೆ ಹೋದರೆ ಬಾಗಿಲ ಹತ್ತಿರವೇ ನಿಂತಿದ್ದು ಬಾಗಿಲು ಹಾಕಿದ ತಕ್ಷಣ ಬಾಗಿಲ ಕೆಳಗಿನ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುತ್ತಿದ್ದೆವು. ಯಾಕೆಂದರೆ ನೆಲದ ಮೇಲೆ ಕುಳಿತವರು ಅಲ್ಲೇ ಉಗಿದು ಮಣ್ಣು ಮುಚ್ಚುತ್ತಿದ್ದರು. ಚಿಕ್ಕ ಮಕ್ಕಳು ಸೂಸು ಮಾಡುತ್ತಿದ್ದವು. ಅದೆಲ್ಲಾ ಆನಂತರ ಒಣಗಿ ವಿಚಿತ್ರವಾಗಿ ಗಟ್ಟಿಯಾಗುತ್ತಿದ್ದವು. ಅದನ್ನು ಸರಿ ದೂಗಿಸಲು ಚಿತ್ರಮಂದಿರದವರು ನಾನಾ ಅವತಾರ ಮಾಡಿದ್ದರು. ನೆಲಕ್ಕೆ ಸಗಣಿಯಿಂದ ಸಾರಿಸಿದ್ದರು. ಆದರೆ ಸಗಣಿ ವಾಸನೆ ಯಾವುದೋ ಕೊಟ್ಟಿಗೆಯಲ್ಲಿ ಕುಳಿತ ಭಾವನೆ ಮೂಡಿಸಿ ಚಿತ್ರ ನೋಡುವ ಉತ್ಸಾಹವನ್ನು ಇಂಗಿಸಿಬಿಡುತ್ತಿತ್ತು. ಆದರಿಂದ ಚಿತ್ರಮಂದಿರದವರಿಗೆ ಲಾಭವೂ ಇತ್ತೆನ್ನಬಹುದು. ಈ ಅವ್ಯವಸ್ಥೆಯಿಂದಾಗಿ ಹುಡುಗರು, ಕುಡುಕರು ಮಾತ್ರ ಮುಂದೆ ನೆಲಕ್ಕೆ ಹೋಗುತ್ತಿದ್ದರು. ಉಳಿದವರು ಅದಕ್ಕಿಂತ ಸ್ವಲ್ಪ ಹೆಚ್ಚಿನ ಬೆಲೆಯ ಕುರ್ಚಿಗೆ ಹೋಗುತ್ತಿದ್ದರು.
ಟೆಂಟ್ ವಿಷಯಕ್ಕೆ ಬಂದರೆ ನನಗೆ ನೆನಪಾಗುವುದು ನಮ್ಮ ಪಕ್ಕದ ನಗರದ ನಾಗರತ್ನ ಟೆಂಟ್. ಅಲ್ಲಿ ಆಂಗ್ಲ ಬಿಟ್ಟರೆ ವಯಸ್ಕರ ಚಿತ್ರಗಳನ್ನೇ ಪ್ರದರ್ಶನ ಮಾಡಿ ಮಾಡಿ ಅದು ಅದಕ್ಕೆ ಹೆಸರುವಾಸಿಯಾಗಿಬಿಟ್ಟಿತ್ತು. ನಮ್ಮೂರಿನಲ್ಲಿ ನಗರಕ್ಕೆ ಹೋಗಿ ಬಂದವನು ಆ ನಾಗರತ್ನ ಟೆಂಟ್ ಗೆ ಹೋಗಿದ್ದ ಎಂದರೆ ಸಾಕು ಅವನು ಯಾವುದೋ ಅಸಹ್ಯಕರವಾದ ಕೆಲಸ ಮಾಡಿ ಬಂದ ಎನ್ನುವ ರೀತಿಯಲ್ಲಿ ನಮ್ಮೂರಿನ ಜನ ಅವನನ್ನು ಮಾತಾಡಿಸುತ್ತಿದ್ದರು. ನಾಗರತ್ನ ಟೆಂಟ್ ಚಿತ್ರದ ಪೋಸ್ಟರ್ ಕೂಡ ಹಾಗೆಯೇ ಇರುತ್ತಿದ್ದವು. ಅದ್ಯಾವುದೇ ಭಾಷೆಯಾದರೂ ವಯಸ್ಕರ ಚಿತ್ರವನ್ನೇ ಹುಡುಕಿ ಹುಡುಕಿ ತರುತ್ತಿದ್ದ ಅದರ ಮಾಲೀಕನಿಗೆ ದುಡ್ಡು ಹೇರಳವಾಗಿಯೇ ಸಂಪಾದನೆಯಾಗುತ್ತಿತ್ತು. ಆದರೆ ಆ ಟೆಂಟ್ ಗೆ ಹೆಂಗಸರ್ಯಾರೂ ಹೋಗುತ್ತಿರಲಿಲ್ಲ.
ಅಲ್ಲಿನ ವ್ಯವಸ್ಥೆಯೇ ಬೇರೆಯಿತ್ತು. ಚಿತ್ರಮಂದಿರದ ಸುತ್ತ ಮುತ್ತಾ ಸಿನಿಮಾ ಪ್ರಾರಂಭವಾಗುವವರೆಗೂ ಯಾರೂ ಇರುತ್ತಿರಲಿಲ್ಲ. ಅದಕ್ಕೆ ಕಾರಣ ಭಯ. ಯಾರಾದರೂ ನೋಡಿ ಬಿಟ್ಟರೆ..! ಆದರೆ ಚಿತ್ರ ಪ್ರಾರಂಭವಾಗಿ ಹತ್ತೇ ನಿಮಿಷಕ್ಕೆ ಇಡೀ ಚಿತ್ರಮಂದಿರ ತುಂಬಿ ಹೋಗುತ್ತಿತ್ತು.
ಆ ಚಿತ್ರಮಂದಿರದಲ್ಲಿ ಇನ್ನೂ ಒಂದು ವಿಶೇಷವಿತ್ತು. ಪೋಸ್ಟರ್ ನೋಡಿಕೊಂಡು ಸಿನಿಮಾಕ್ಕೆ ಹೋದರೆ ಪಿಗ್ಗಿಬೀಳುವ ಸಂಭವ ಇದ್ದೇ ಇತ್ತು. ಯಾಕೆಂದರೆ ಚಿತ್ರಮಂದಿರದ ಹೊರಗಿನ ಪೋಸ್ಟರ್ goo ಒಳಗಿನ ಚಿತ್ರಕ್ಕೂ ಸಂಬಂಧವೇ ಇರುತ್ತಿರಲಿಲ್ಲ. ಜನ ಅದನ್ನು ಕೇಳುತ್ತಲೂ ಇರಲಿಲ್ಲ. ಹಾಗೆಯೇ ಚಿತ್ರದಲ್ಲಿ ತೋರಿಸುತ್ತಿದ್ದ ವಯಸ್ಕರ ದೃಶ್ಯಗಳೂ ಆ ಚಿತ್ರದ್ದು ಆಗಿರಲಿಲ್ಲ.  ಆ ಚಿತ್ರಮಂದಿರದ ಪುಣ್ಯಾತ್ಮ ಯಾವ ಯಾವದೋ ವಯಸ್ಕರ ಚಿತ್ರಗಳ ತುಣುಕುಗಳನ್ನು ಒಟ್ಟು ಮಾಡಿ ಇಪ್ಪತ್ತು ನಿಮಿಶದಷ್ಟನ್ನು ರೀಲು ಮಾಡುತ್ತಿದ್ದ. ಅವನೇ ಮಾಡುತ್ತಿದ್ದನೋ ಅಥವಾ ಹಾಗೆಯೇ ಬರುತ್ತಿತೋ ಯಾರಿಗೆ ಗೊತ್ತು. ಸಿನಿಮಾ ಪ್ರಾರಂಭವಾಗಿ ಸರಿಯಾಗಿ ಅರ್ಧಗಂಟೆಗೆ ಹತ್ತು ನಿಮಷಗಳ ಅದನ್ನು ಪ್ರದರ್ಶಿಸುತ್ತಿದ್ದ. ಅನಂತರ ಮತ್ತೆ ಮಧ್ಯಂತರದ ನಂತರ ಅರ್ಧಗಂಟೆಯ ನಂತರ ಮತ್ತೆ ಹತ್ತು ನಿಮಿಷ ತೋರಿಸುತ್ತಿದ್ದ.
ಇದನ್ನು ಅರಿತಿದ್ದ ದಿನಂಪ್ರತಿ ವೀಕ್ಷಕರು ಚಿತ್ರ ಪ್ರಾರಂಭವಾದ ಅರ್ಧಗಂಟೆಹೊತ್ತಿಗೆ ಒಳಹೊಕ್ಕು ಅದಷ್ಟನ್ನು ನೋಡಿ ಹೊರಬಂದು ಬೀಡಿ ಹಚ್ಚಿ ಮತ್ತೆ ಮಧ್ಯಂತರದ ನಂತರ ಅರ್ಧಗಂಟೆ ನಂತರ ಒಳಹೊಕ್ಕು ಅದನ್ನು ನೋಡಿ ಆಮೇಲೆ ಜಾಗ ಖಾಲಿ ಮಾಡುತ್ತಿದ್ದರು.ಚಿತ್ರ ಮುಗಿಯುವವರೆಗೆ ಯಾರೂ ಇರುತ್ತಿರಲಿಲ್ಲ. ಅದರಲ್ಲೂ ರಾತ್ರಿಯ ಆಟಗಳನ್ನು ಆ ತುಣುಕು ದೃಶ್ಯ ಮುಗಿದ ಮೇಲೆ ಕೊನೆ ಮಾಡಿ ಲೈಟ್ ಆಫ್ ಮಾಡಿಯೇ ಬಿಡುತ್ತಿದ್ದರು.
ಆದರೆ ಇದೇ ವಿಷಯಗಳು ಕೆಲವೊಮ್ಮೆ ಅತಿರೇಕಕ್ಕೂ ಹೋಗುತ್ತಿತ್ತು. ತೋರಿಸಿದ ತುಣುಕುಗಳಲ್ಲಿ ಬಿಸಿ ಬಿಸಿ ದೃಶ್ಯಗಳು ಇಲ್ಲದಿದ್ದಾಗ ಅಥವಾ ಕಡಿಮೆಯಿದ್ದಾಗ ಅಥವಾ ರಾತ್ರಿ ಕುಡಿದ ಮತ್ತು ಜಾಸ್ತಿಯಾಗಿ ಜೋಶ್ ಹೆಚ್ಚಾದಾಗ ಸುಖಾಸುಮ್ಮನೆ ಜಗಳಗಳು ನಡೆಯುತ್ತಿದ್ದವು. ಮೊದಲಿಗೆ ಆ ಸಿಟ್ಟಿಗೆ ಬಲಿಯಾಗುತ್ತಿದ್ದದ್ದು ಕುರ್ಚಿಗಳು. ಏನೋ ಹಣ ಕೊಟ್ಟಿಲ್ವಾ ತೋರ್ಸೋಕ್ ಏನೋ ಎಂದದ್ದೆ ಕುರ್ಚಿಗಳಿಗೆ ದಬದಬನೆ ಒದೆಯುತ್ತಿದ್ದರು.
ನಮ್ಮೂರಿನ ಟೆಂಟಿನಲ್ಲಿ ಒಂದು ತೊಂದರೆ ಇತ್ತು. ಅದು ವಿದ್ಯುಚ್ಚಕ್ತಿಯದ್ದು. ಎಲ್ಲಾ ಆಗಿ ಸರಿಹೋಯ್ತು ಎನ್ನುವಷ್ಟರಲ್ಲಿ ಕರೆಂಟ್ ಕೈ ಕೊಡುತ್ತಿತ್ತು. ಯಾವುದೋ ದೃಶ್ಯವನ್ನು ಅಷ್ಟೇ ತನ್ಮಯರಾಗಿ ನೋಡುತ್ತಿದ್ದ ಅಭಿಮಾನಿಗಳಿಗೆ ಸಿಟ್ಟು ಬಂದದ್ದೆ ಅಲ್ಲೇ ಚಿತ್ರಮಂದಿರದಲ್ಲಿ ಕುಣಿದು ಕುಪ್ಪಳಿಸಿ ಬಿಡುತ್ತಿದ್ದರು. ಇಡೀ ಚಿತ್ರಮಂದಿರದ ವ್ಯಕ್ತಿಗಳನ್ನು ವಾಚಾಮಗೋಚರವಾಗಿ ಬಯ್ಯುತ್ತಿದ್ದರಷ್ಟೇ ಅಲ್ಲ, ಚೇರ್ ಗಳನ್ನೂ ಮುರಿಯುವ ಸಾಹಸಕ್ಕೂ ಕೈ ಹಾಕುತ್ತಿದ್ದರು. ತೀರಾ ಮುಂದೆ ಕುಳಿತವರು ಪರದೆಯ ಹತ್ತಿರಕ್ಕೆ ಹೋದದ್ದೇ ಪರದೆಯನ್ನು ಹಿಡಿದು ಜಗ್ಗಿ ಜಾಲಾಡಿ ಹರಿಯುವ ಪ್ರಯತ್ನ ಮಾಡುತ್ತಿದ್ದರು. ಅಷ್ಟರಲ್ಲಿ ಹೇಗೋ ಜನರೇಟರ್ ಸ್ಟಾರ್ಟ್ ಮಾಡಿ ಮತ್ತೆ ಸಿನಿಮಾವನ್ನು ಮುಂದುವರೆಸುತ್ತಿದ್ದರಿಂದ ಅದು ಅಷ್ಟಕ್ಕೇ ನಿಲ್ಲುತ್ತಿತ್ತು. ಜನರೇಟರ್ ಗೆ ಡೀಸೆಲ್ ಅನ್ನು ಪಕ್ಕದ ಊರಿನಿಂದ ತರಬೇಕಾದ್ದರಿಂದ ಚಿತ್ರಮಂದಿರದವರು ಮೊದಲೇ ಕ್ಯಾನ್ ಗಟ್ಟಲೆ ಶೇಖರಿಸಿ ಇಟ್ಟುಕೊಳ್ಳುತ್ತಿದ್ದರೆನೋ ನಿಜ. ಆದರೆ ಕೆಲವೊಮ್ಮೆ ಅದು ಹೇಗೇಗೋ ಕಣ್ತಪ್ಪಿನಿಂದ ಖಾಲಿಯಾಗಿ ಕರೆಂಟ್ ಬರುವವರೆಗೆ ಕಾಯಬೇಕಾದ ಪರಿಸ್ಥಿತಿಯಲ್ಲಿ ಹಣ ವಾಪಸ್ಸು ಕೊಡುತ್ತೇನೆ ಎಂದರೂ ನಾವು ದುಡ್ಡು ಕಂಡಿಲ್ವಾ..ನೀನೋಬ್ಬನೇನಾ ಕಾಸು ಕೊಂಡಿರೋನು..ಪಿಚ್ಚರ್ ನೋಡೋಕ್ ಬಂದಿದ್ದೀವಿ ಪಿಚ್ಚರ್ ಹಾಕಯ್ಯ..ಅಷ್ಟೇ ಎಂದು ಜಬರ್ದಸ್ತ್ ಮಾಡುತ್ತಿದ್ದರು.
ಈ ಎಲ್ಲಾ ಪ್ರೇಕ್ಷಕರ ಹುಚ್ಚಾಟಗಳಿಂದ ಚಿತ್ರಮಂದಿರದ ಪರದೆ ಹರಿದು ನೆರಿಗೆಗಟ್ಟಿ ಚಿತ್ರವೇ ಒಂದು ರೀತಿಯಾದರೆ ತೆರೆಯ ಮೇಲೆ ವಿಚಿತ್ರವಾಗಿ ಮೂಡುತ್ತಿತ್ತು. ಇದನ್ನೆಲ್ಲಾ ನೋಡಿ ಅನುಭವಿಸಿ ಸಾಕಾದ ಚಿತ್ರಮಂದಿರದ ಮಾಲೀಕರು ಅದಕ್ಕೊಂದು ಸಖತ್ ಉಪಾಯ ಕಂಡುಹಿಡಿದಿದ್ದರು. ಮುಂದಿನ ಪರದೆಯನ್ನು ಸಂಪೂರ್ಣವಾಗಿ ತೆಗೆದುಹಾಕಿಸಿ, ಅದನ್ನು ಗಾರೆಯಿಂದ ಗೋಡೆ ಮಾಡಿಸಿ ಬಿಳಿಯ ಬಣ್ಣ ಹೊಡೆಸಿದ್ದರು. ಈಗ ಏನೇ ಆದರೂ ಪರದೆಗೆ ಚಿಕ್ಕಪುಟ್ಟ ಗೀರುಗಳಾಗುತ್ತಿದ್ದವೆ ವಿನಾ ಬೇರೆ ದೊಡ್ಡ ತರಹದ ನಷ್ಟವಾಗುತಿರಲಿಲ್ಲ.
ನನ್ನ ಗೆಳೆಯನ ಊರಿನಲ್ಲಿ ಒಂದು ಟೆಂಟ್ ಇತ್ತು. ಅದೊಮ್ಮೆ ನಾನು ಅವರ ಊರಿಗೆ ಹೋದಾಗ ರಾತ್ರಿಯ ಆಟಕ್ಕೆ ಹೋಗೋಣ ಎಂದು ಊಟ ಮಾಡಿಕೊಂಡು ಹೊರಡಲು ಸಿದ್ಧರಾದೆವು. ಆದರೆ ಗೆಳೆಯ ಯಾವುದೇ ಉತ್ಸಾಹ ತೋರಿಸದೆ ಆರಾಮವಾಗಿ ಟೆಂಟ್ ಹತ್ತಿರ ಹೋಗೋಣ ಇದ್ರೆ ನೋಡೋಣ ಇಲ್ಲಾಂದ್ರೆ ಆರಾಮವಾಗಿ ವಾಪಸ್ ಬಂದು ಮಲಗಿಕೊಳ್ಳೋಣ ಎಂದದ್ದನ್ನು ಕೇಳಿ ನನಗೆ ಆಶ್ಚರ್ಯವಾಗಿತ್ತು. ಇದು ಚಿತ್ರ ಮಂದಿರದಲ್ಲಿ ಚಿತ್ರ ಇಲ್ಲ ಎಂದರೆ ..? ಆದರೆ ಚಿತ್ರಮಂದಿರದತ್ತ ಹೋದಾಗಲೇ ನನಗೆ ಗೊತ್ತಾದದ್ದು ಕೊನೆಯ ರಾತ್ರಿಯ ಆಟ ಒಂಭತ್ತು ಘಂಟೆಗೆ ಶುರುವಾಗಿ ಹನ್ನೆರಡಕ್ಕೆ ಮುಗಿಯುತ್ತಿದ್ದರಿಂದ ಹೊಸ ಸಾಂಸಾರಿಕ ಚಿತ್ರಗಳಾದರೆ ಮಾತ್ರ ರಾತ್ರಿ ಆಟ ಇರುತ್ತಿತ್ತು. ಜನ ಇಲ್ಲದಿದ್ದರೆ ಆಟವನ್ನು ರದ್ದುಗೊಳಿಸಿಬಿಡುತ್ತಿದ್ದರು. ನಾವೆಲ್ಲಾ ಊಟ ಮುಗಿಸಿ ಚಿತ್ರಮಂದಿರಕ್ಕೆ ಹೊರಟೆವು. ನಮ್ಮ ಅದೃಷ್ಟಕ್ಕೆ ಚಿತ್ರವೂ ಜನರೂ ಇದ್ದರು. ಆದರೆ ತಮಿಳು ಚಿತ್ರವಾಗಿತ್ತು. ಸಮಯ ಕಳೆಯಲು ಯಾವುದಾದರೇನೂ ಎಂದು ಒಳಗೆ ಹೋಗಿ ಕುಳಿತುಕೊಂಡೆವು. ಚಿತ್ರ ಪ್ರಾರಂಭವಾಯಿತು. ಅರ್ಧಗಂಟೆಯಾದರೂ ಚಿತ್ರದ ಕತೆ ಅರ್ಥವಾಗಿರಲಿಲ್ಲ. ಒಂದು ದೃಶ್ಯಕ್ಕೂ ಇನ್ನೊಂದು ದೃಶ್ಯಕ್ಕೂ ಸಂಬಂಧವೇ ಇರಲಿಲ್ಲ. ಉದಾಹರಣೆಗೆ ಒಂದು ದೃಶ್ಯದಲ್ಲಿ ನಾಯಕ ನಾಯಕಿ ಪ್ರೀತಿಸಿ ಹಾದಿ ಕುಣಿದಿದ್ದರೆ ಮುಂದಿನ ದೃಶ್ಯದಲ್ಲಿ ಇಬ್ಬರೂ ಇನ್ನೂ ಪರಿಚಯವಾಗದೇ ಆಗತಾನೆ ಪರಿಚಯವಾಗಿ ಜಗಳವಾಡುತ್ತಿದ್ದರು. ಇದ್ಯಾರು ಉಪೇಂದ್ರ ಶೈಲಿಯಲ್ಲಿ ತಿರುವು ಮುರುವು ಚಿತ್ರಕತೆ ಮಾಡಿ ಸಿನಿಮ ಮಾಡಲು ಹೋಗಿ ತಲೆಬುಡವಿಲ್ಲದ ಚಿತ್ರ ತೆಗೆದಿದ್ದಾನೆ ಎಂದು ಸುಮಾರು ಜನರೊಟ್ಟಿಗೆ ನಾವು ಬೈದುಕೊಂಡು ಬಂದಿದ್ದೆವು. ಬಂದನಂತರ ಇಡೀ ಚಿತ್ರದ ಅಂಶಗಳನ್ನು ಒಟ್ಟಾಗಿಸಿ ಕತೆಯನ್ನು ಗ್ರಹಿಸಲು ಪ್ರಯಾಸ ಪಟ್ಟಿದ್ದೆ. ಆನಂತರ ತಿಳಿದುಬಂದ ವಿಷಯವೆಂದರೆ ಆ ಟೆಂಟಿನ ಪ್ರೊಜೆಕ್ಟರ್ ಆಪರೇಟರ್ ಸಿನಿಮಾದ ರೀಲುಗಳನ್ನು ಸರಿಯಾದ ಕ್ರಮದಲ್ಲಿ ಹಾಕದೆ ಕುಡಿತದ ಗಮ್ಮತ್ತಿನಲ್ಲಿ ಇಷ್ಟಬಂದ ಹಾಗೆ ಹಾಕಿದ್ದ ಎಂಬುದು.
ಹೀಗೊಮ್ಮೆ  ನನ್ನ ನೆಂಟರ ಮನೆಗೆ ಹೋಗಿದ್ದೆ. ಆಗ ಅಲ್ಲಿ ಸಿಕ್ಕ ನನ್ನ ಗೆಳೆಯನೊಬ್ಬ ಈವತ್ತು ಇಂಗ್ಲಿಷ್ ಸಿನೆಮಾಗೆ ಹೋಗೋಣ ಎಂದ. ನಾನು ಯಾವುದು ಎಂದದ್ದಕ್ಕೆ ಗೊತ್ತಿಲ್ಲ, ಸಂಜೆ ಗೊತ್ತಾಗುತ್ತದೆ ಎಂದ. ಇದೆಂತಹ ಟೆಂಟ್ ಎನಿಸದಿರಲಿಲ್ಲ. ಸರಿ ಎಂದದ್ದೆ ರಾತ್ರಿ ಅಲ್ಲಿಗೆ ಹೋದರೆ ಅದೊಂದು ಮನೆ . ಮನೆಯ ಕಂಪೌಂಡ್ ಮೇಲೆ ಸೀಮೆ ಸುಣ್ಣವನ್ನು ನೀರಿಗೆ ಅದ್ದಿ ಡಾಳಾಗಿ ಚಿತ್ರದ ಹೆಸರು ಬರೆದಿದ್ದರೇ ಹೊರತು ಯಾವುದೇ ಪೋಸ್ಟರ್ ಅಂಟಿಸಿರಲಿಲ್ಲ. ಇರಲಿ ಎಂದದ್ದೇ ಬಾಗಿಲು ಹತ್ತಿರ ಹೋದರೆ ಅಲ್ಲಿ ನಿಂತಿದ್ದ ದ್ವಾರಪಾಲಕ ನಮ್ಮಿಂದ ಒಂದಷ್ಟು ಹಣ ತೆಗೆದುಕೊಂಡು ಒಳಬಿಟ್ಟ. ಮನೆಯ ಒಳಗೆ ಶಾಲೆಯ ಡೆಸ್ಕ್ ತರಹದ ಮರದ ಉದ್ದನೆಯ ಕುರ್ಚಿಗಳನ್ನು ಜೋಡಿಸಿದ್ದರು ಎಲ್ಲಾ ಸೇರಿ ಒಂದತ್ತು ಸಾಲಿದ್ದಿರಬಹುದು. ಎದುರಿಗೆ ಒಂದು ದೊಡ್ಡ ಟಿವಿ ಇತ್ತು. ಎರಡೂ ಕಡೆಗೆ ಎರಡು ಟೇಬಲ್ ಫ್ಯಾನ್ ಇದ್ದವು. ಅಲ್ಲಿದ್ದ ವಿಸಿ ಆರ್ ಒಳಗೆ ಯಾವುದೋ ಆಂಗ್ಲ ಚಿತ್ರದ ಕ್ಯಾಸೆಟ್ ತುರುಕಿದರು. ಆ ಹಬೆಯ ತರಹದ ಬಿಸಿಯಲ್ಲಿ ಬಿಸಿಗಾಳಿಯ ಜೊತೆ ಆ ಗುಹೆಯಲ್ಲಿ ಯಾತನಾಮಯವಾಗಿ ಅದ್ಯಾವ ಚಿತ್ರವನ್ನೂ ನೋಡಿದೆನೋ ಸರಿಯಾಗಿ ನೆನಪಿಲ್ಲವಾದರೂ ಆ ಯಮಯಾತನೆ ಇಂದಿಗೂ ನೆನಪಿದೆ.
ಈಗೀಗ ಆ ಎಲ್ಲಾ ಪರಿಕಲ್ಪನೆ ಬದಲಾಗಿರಬಹುದಾ..? ಯಾಕೆಂದರೆ ಈವತ್ತು ಮನೆಯಲ್ಲಿಯೇ ದಿನಪೂರ ಎಲ್ಲಾ ಭಾಷೆಯ ಚಿತ್ರಗಳು ಪ್ರಸಾರವಾಗುತ್ತವೆ. ಅಗ್ಗದ ಮೊಬೈಲಿನಲ್ಲೂ ಸಿನಿಮಾ ನೋಡುವ ವ್ಯವಸ್ಥೆ ಇದೆ. ಹಾಗಾಗಿಯೇ ನಾನು ಹೋದೆಡೆಯಲ್ಲ ಸ್ವಲ್ಪ ಅಚ್ಚುಕಟ್ಟಾದ ಚಿತ್ರಮಂದಿರಗಳೇ ಇವೆ ಎನಿಸುತ್ತದೆ.