Thursday, October 8, 2015

ಮೋನಿಕಾ ಮಿಸ್ಸಿಂಗ್ ಗೆ ಜಾಗವಿದೆ..?

ಇದು ಈವತ್ತಿನ ವಿಷಯವಲ್ಲ... ವರ್ಷಗಟ್ಟಲೆ ಹಳೆಯದು. ಜಾಗತಿಕ ಚಿತ್ರಗಳನ್ನು ಅದ್ಯಯನ ಮಾಡಿ ಅವುಗಳಲ್ಲಿನ ನೋಡಲೇಬೇಕಾದ ಚಿತ್ರಗಳನ್ನು ಪಟ್ಟಿ ಮಾಡಿ ಪುಸ್ತಕವೊಂದನ್ನು ರಚಿಸಿದ್ದೆ. ಅದನ್ನು ಪ್ರಕಟಿಸುವ ಉದ್ದೇಶ ಆವಾಗ ಇರಲಿಲ್ಲವಾದರೂ ಒಂದು ಸಿನಿಮಾ ನಿಂತು ಹೋಗಿ ಹಣಕಾಸಿನ ತೊಂದರೆಯಿಂದಾಗಿ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಸಮಯವದು. ಕೆಲಸ ಮುಗಿದ ನಂತರ ಸಿನಿಮಾ ನೋಡುವುದು ಮತ್ತದರ ಬಗ್ಗೆ ನನ್ನದೇ ಗೆಳೆಯರ ಜೊತೆಗೆ ಚರ್ಚಿಸುವುದು ಇದಿಷ್ಟೇ ಕೆಲಸವಿತ್ತು ಆವಾಗ. ಸಿನಿಮಾ ಗೆಳೆಯರನ್ನು ಮೀಟ್ ಮಾಡುತ್ತಿರಲಿಲ್ಲ. ಮತ್ತೆಲ್ಲಿ ಸಿನಿಮಾದ ಕಡೆಗೆ ಮನಸ್ಸು ಹೊರಳಿಬಿಡುತ್ತದೋ ಎರಡು ವರ್ಷ ಸಿನಿಮಾ ಜಗತ್ತು ಬೇಡ ಎಂದು ಕರಾರುವಕ್ಕಾಗಿ ನಿರ್ಧರಿಸಿದ್ದ ದಿನಗಳಾಗಿತ್ತು ಅವು. ಆ ಸಂದರ್ಭದಲ್ಲಿ ಗೆಳೆಯ ಕೃಷ್ಣನ ಜೊತೆಗೆ ಮಾತನಾಡುತ್ತಿದ್ದಾಗ ಆತ ಆಗಲೇ ಒಂದು ಪುಸ್ತಕವನ್ನು ಪ್ರಕಟಿಸಿದ್ದ. ಸರಿ ನಿನ್ನ ಪುಸ್ತಕ ನಾನೇ ಪ್ರಕಟಿಸುತ್ತೇನೆ ಕೊಡು ಎಂದ. ಸಧ್ಯಕ್ಕೆ ಬೇಡ ಬಿಡು ಮಾರಾಯ ಎಂದೇ. ಹಾಗಾದರೆ ಒಂದು ಕೆಲಸ ಮಾಡು, ಕನ್ನಡದಲ್ಲಿ ನೋಡಲೇಬೇಕಾದ  ನೂರೊಂದು ಕನ್ನಡ ಚಿತ್ರಗಳು ಎನ್ನುವ ಪುಸ್ತಕ ಇಲ್ಲ, ಪರಭಾಷೆಯ ಅದರಲ್ಲೋಒ ಜಾಗತಿಕ ಮಟ್ಟದಲ್ಲಿ ಆಯಾ ಭಾಷೆಯಲ್ಲಿ ಸುಮಾರಷ್ಟು ಪುಸ್ತಕಗಳಿವೆ, ಕನ್ನಡದಲ್ಲಿ ಆ ಪ್ರಯತ್ನ ಯಾರೂ ಮಾಡಿಲ್ಲ, ಹೇಗೋ ಸಿನೆಮಾದಿಂದ ಸ್ವಲ್ಪ ದೂರ ಇದ್ದೀಯ, ಯಾಕೆ ಆ ಪುಸ್ತಕ ಬರೆಯಬಾರದು ಎಂದ. ನಾನು ಹೂಂ ಎಂದೆ.
ಅಷ್ಟೇ. ಆ ಪುಸ್ತಕ ನನಗೆ ಸರಿ ಸುಮಾರು ಒಂಭತ್ತು ತಿಂಗಳುಗಳ ಸಮಯವನ್ನು ಎಡೆಬಿಡದೆ ತೆಗೆದುಕೊಂಡು ಬಿಟ್ಟಿತ್ತು. ಸಿನಿಮಾ ನೋಡುವ ಚರ್ಚಿಸುವ ಮತ್ತದರ ತುಲನೆ ಮಾಡುವ ನಮ್ಮದೇ ಮಾನದಂಡಗಳಲ್ಲಿ ಅದನ್ನು ವಿಂಗಡಿಸುವ ಹೀಗೆ ಅದರ ಕೆಲಸಗಳನ್ನು ನನ್ನ ನಿದ್ರೆ ಕಸಿದಿದ್ದವು. ಎಲ್ಲಾ ಮುಗಿಸಿ ಪುಸ್ತಕ ಬರೆದು ಮುಗಿಸಿದಾಗ ದೊಡ್ಡ ನಿಟ್ಟುಸಿರು ಬಿಟ್ಟಿದ್ದಾಗಿತ್ತು.
ಆಮೇಲೆ ಅದನ್ನು ಪ್ರಕಟಿಸಲಾಯಿತು. ಓದಿದವರು ಚೆನ್ನಾಗಿದೆ ಎಂದರು. ಒಂದಷ್ಟು ಪತ್ರಿಕೆಗಳಲ್ಲೂ ಅದರ ಬಗ್ಗೆ ಬರೆಯಲಾಯಿತು. ಹಾಗೆಯೇ ಅದೊಂದು ದಿನ ನಿಮ್ಮ ಪುಸ್ತಕ ಹಿಡಿದುಕೊಂಡು ನಮ್ಮ ಕಚೇರಿಗೆ ಬನ್ನಿ ಎಂದರು ಸುದ್ದಿ ವಾಹಿನಿಯವರು. ನಾನು ಖುಷಿಯಾಗಿ ಹೋದೆ. ಪುಸ್ತಕದ ಬಗ್ಗೆ ಮಾತನಾಡಿಸಿ, ಎಂಥ ಅದ್ಭುತವಾದ ಪುಸ್ತಕ ಬರೆದಿದ್ದೀರಿ, ಕನ್ನಡದಲ್ಲಿ ಈ ಸಾಧನೆಯನ್ನು ಬೇರೆ ಯಾರೂ ಮಾಡಿಲ್ಲ, ಒಂದು ಚಿಕ್ಕ ಬೈಟ್ ಕೊಡಿ ಎಂದರು, ಕೊಟ್ಟೆ. ಸಾರ್ ಇದನ್ನು ಪ್ರಸರಿಸುವ ದಿನ ಸಮಯ ನನಗೆ ಹೇಳಿ, ನಾನು ಒಂದಷ್ಟು ಜನರಿಗೆ ಹೇಳುತ್ತೇನೆ, ಪುಸ್ತಕದ ಮಾರಾಟಕ್ಕೆ ಸಹಾಯವಾಗುತ್ತದೆ ಎಂದೆ, ಹೇಯ್ ಖಂಡಿತ ಸಾರ್, ನೀವು ಇಷ್ಟು ಕೆಲಸ ಮಾಡಿದ್ದೀರಿ.. ನಾವು ಇಷ್ಟು ಮಾಡಲಾರೆವಾ? ಸರಿಯಾದ ಸಮಯದಲ್ಲಿ ಹಾಕುತ್ತೇವೆ.. ಎಂದರು. ಖುಷಿಯಾಗಿ ಪ್ರಕಾಶಕರಿಗೆ ಅಲ್ಲೇ ಕರೆ ಮಾಡಿ ವಿಷಯ ತಿಳಿಸಿ, ಮನೆಗೂ ಬಂದು ಹೇಳಿ ಮತ್ತೆ ಕೆಲಸದಲ್ಲಿ ತೊಡಗಿಸಿಕೊಂಡೆ.
ಒಂದು ವಾರವಾಯಿತು. ಏಕೋ ಪ್ರಸಾರವಾಗಲಿಲ್ಲ. ಫೋನ್ ಮಾಡಿ ಕೇಳುವುದಾದರೂ ಏಕೆ ಎಂದುಕೊಂಡೆ. ಇರಲಿ ಎಂದು ಒಂದು ಫೋನ್ ಒಗಾಯಿಸಿದೆ. ತಕ್ಷಣ ಪ್ರತಿಕ್ರಿಯಿಸಿದ ಆ ಮಂದಿ ಈ ವಾರದಲ್ಲಿ ಪ್ರಸಾರ ಮಾಡುತ್ತೇವೆ ಎಂದರು. ಸಿನಿಮಾ ಕಾರ್ಯಕ್ರಮದಲ್ಲಿಯೇ ಪ್ರಕಟಿಸುತ್ತೇವೆ, ಅಷ್ಟು ಮಾಡಿರೋಅವರಿಗೆ ನಾವಿಷ್ಟು ಮಾಡಲು ಸಾಧ್ಯವಿಲ್ಲವೇ ಎಂದರು. 
ಮತ್ತೆ ಹತ್ತು ಹದಿನೈದು ದಿನ ಕಳೆದವು. ಪ್ರಸಾರವಾಗಲಿಲ್ಲ. ಮತ್ತೆ ಮತ್ತೆ ಕೇಳಿದರೆ ಚನ್ನವೆ? ಇರಲಿ ಎಂದು ಫೋನ್ ಹಾಕಿದೆ. ಸಾರ್.. ಅದನ್ನು ಪ್ರಸಾರಮಾಡಬೇಕು, ಆದರೆ ಸರಿಯಾದ ಸ್ಲಾಟ್ ಸಿಗುತ್ತಿಲ್ಲ, ಸಿಕ್ಕ ತಕ್ಷಣ ಖಂಡಿತ ಪ್ರಸಾರ ಮಾಡುತ್ತೇವೆ, ಆ ಸಮಯದಲ್ಲಿ ನಾವೇ ನಿಮಗೆ ಕರೆ ಮಾಡಿ ಹೇಳುತ್ತೇವೆ ಎಂದರು. ನಾನು ಆಯಿತು ಎಂದೆ.
ವರ್ಷಗಳೇ ಕಳೆದುಹೋಯಿತು.
ಅವರಿಗೆ ಸಮಯ ಸಿಗಲಿಲ್ಲ, ಹಾಗಾಗಿ ಪ್ರಸಾರ ಮಾಡಲು ಆಗಲಿಲ್ಲ.
ನಾನು ಮಾಧ್ಯಮದಲ್ಲಿ ಒಂದಷ್ಟು ದಿನ ಕೆಲಸ ಮಾಡಿದವನೇ/. ಟಿಆರ್ಪಿ ಬೆನ್ನು ಬಿದ್ದಾಗ ಯಾವುದು ಹೆಚ್ಚು ವಿವಾದ ಹುಟ್ಟಿಸುತ್ತದೆ ಎಂಬುದರ ಮೇಲಷ್ಟೇ ಗಮನ ಇರುತ್ತದೆ. ಅದಾದ ನಂತರ ಹುಚ್ಚ ವೆಂಕಟ್ ಥೂ ಕನ್ನಡ ನನ್ನ ಎಕ್ಕಡ ಎಂದರು, ತಕ್ಷಣಕ್ಕೆ ಅತನದೂ ಟಿವಿಯಲ್ಲಿ ನೇರ ಪ್ರಸಾರದ ಜೊತೆಗೆ ವಿಧವಿಧವಾಗಿ ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಆಯಾಮ ಪಡೆದು ದಿನಗಟ್ಟಲೆ ವಾರಗಟ್ಟಲೆ  ಪ್ರಸಾರವಾಯಿತು, ಆ ದಿನದಿಂದ ಕಾರ್ಯಕ್ರಮಗಳನ್ನು ಗಮನಿಸುತ್ತ ಬಂದಾಗ ಚಪ್ಪಲಿಯಲ್ಲಿ ಹೊಡೆದವರು ಹೊಡೆಸಿಕೊಂಡವರು ಸೆಲೆಬ್ರಿಟಿ ಆದದ್ದು ಸಿನಿಮಾ ಜಗತ್ತಿನಲ್ಲಿ ಸಾಧನೆ ಎನಿಸಿಕೊಂಡದ್ದು ನೋಡಿ ಇದೆಂತಹ ವಿಪರ್ಯಾಸ ಎನಿಸಲಿಲ್ಲ. ವರ್ಷಗಟ್ಟಲೆ ಕಷ್ಟಪಟ್ಟು ಕನ್ನಡ ಸಿನಿಮಾದ ಬಗೆಗೆ ಪುಸ್ತಕ ಬರೆದರೆ ಒಂದು ಚಿಕ್ಕ ಬೈಟ್ ಹಾಕಲು, ಪುಸ್ತಕದ ಬಗ್ಗೆ ಚಿಕ್ಕ ವಿವರ ನೀಡಲೂ ಜಾಗವಿಲ್ಲ ಎನ್ನುವವರಿಗೆ ಇದಕ್ಕೆಲ್ಲಾ ಗಂಟೆಗಟ್ಟಲೆ ಸಮಯ ಹೇಗೆ ಸಿಗುತ್ತದೆ ಎನಿಸದಿರಲಿಲ್ಲ. ಆತ ನಾನು ಗಂಡಸಲ್ಲ ಎಂದರೆ ಅದು ದಿನಗಟ್ಟಲೆ ಸುದ್ದಿ, ಸಿನಿಮಾ ಜಗತ್ತಿನಲ್ಲಿ ಯಾರೋ ಹುಡುಗಿಯನ್ನು ಕರೆದರೆ ದಿನಗಟ್ಟಲೆ ಸುದ್ದಿ, ನನ್ನನ್ನು ಆತ ಲೆಕ್ಕವಿಡುವಷ್ಟು ಸಾರಿ ಅತ್ಯಾಚಾರ ಮಾಡಿದ್ದಾನೆ ಎಂದರೆ ಅದಕ್ಕೂ ದಿನವೆಲ್ಲಾ ಸಮಯವಿದೆ..ಅದೆಲ್ಲಾ ಓಕೆ. ಮಧ್ಯ ಮಧ್ಯ ಇಂತಹದ್ದಕ್ಕೂ ಮೂರ್ನಾಲ್ಕು ನಿಮಿಷ ಎತ್ತಿಟ್ಟರೆ ಖುಷಿಯಾಗುತ್ತದೆ ಅಲ್ಲವೇ?
ಇದೆಲ್ಲಾ ನೆನಪಿಗೆ ಬಂದದ್ದು ನಿನ್ನೆ ಮೋನಿಕಾ ಮಿಸ್ಸಿಂಗ್ ವಿವಾದ ಸುದ್ದಿ ವಾಹಿನಿಯಲ್ಲಿ ನೇರಪ್ರಸಾರವಾದಾಗ. ಆಸ್ಕರ್ ಕೃಷ್ಣ ಮೋನಿಕಾ ಮಿಸ್ಸಿಂಗ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಷ್ಟೇ ಗಂಟೆಗಟ್ಟಲೆ ಟಿವಿಯಲ್ಲಿ ಕುಳಿತು ಮಾತನಾಡಬೇಕಾಯಿತು. ಆದರೆ ಇದೇ ವ್ಯಕ್ತಿ ಹಣ ಖರ್ಚು ಮಾಡಿ ನೋಡಲೇ ಬೇಕಾದ ಕನ್ನಡದ ನೂರೊಂದು ಚಿತ್ರಗಳು ಪುಸ್ತಕ ಪ್ರಕಟಿಸಿದಾಗ ಯಾರೂ ಮಾತು ಆಡಿಸಲಿಲ್ಲ. ಇದೇನು ಈ ತರಹದ್ದೊಂದು ಒಳ್ಳೆಯ ಪುಸ್ತಕ ಪ್ರಕಟಿಸಿದ್ದೀರಾ ಬನ್ನಿ ಕಾರ್ಯಕ್ರಮ ಮಾಡೋಣ ಎನ್ನಲಿಲ್ಲ.. 
ಇದಲ್ಲವೇ ವಿಪರ್ಯಾಸ...

No comments:

Post a Comment