Sunday, January 29, 2017

ಆಟೋಗ್ರಾಫ್ ಮತ್ತು ಜೋಗಿ...

ನಮ್ಮೂರಿನಲ್ಲಿದ್ದ ವಿಷ್ಣು ಅಭಿಮಾನಿಯೊಬ್ಬ ವಿಷ್ಣುವರ್ಧನ್ ಅವರಿಗೆ ನಾನು ನಿಮ್ಮ ಅಭಿಮಾನಿ ಎಂದು ಪತ್ರ ಬರೆದಿದ್ದ. ವಿಷ್ಣುವರ್ಧನ್ ತಮ್ಮ ಫೋಟೋವೊಂದಕ್ಕೆ ಸಹಿ ಹಾಕಿ ಕಳುಹಿಸಿದ್ದರು, ಅವನು ಊರಿಗೆಲ್ಲಾ ತೋರಿಸಿಕೊಂಡು ಸಂಭ್ರಮ ಪಟ್ಟಿದ್ದ.
ನಾನು ಅಭಿಮಾನದ ಆಟೋಗ್ರಾಫ್ ಗೆ ತೆರೆದುಕೊಂಡದ್ದು ಹೀಗೆ. ನೆಚ್ಚಿನ ನಟ, ನಿರ್ದೇಶಕ ನಟಿ ಹೀಗೆ ಯಾರೇ ಸಿಕ್ಕರೂ ಅವರದ್ದೊಂದು ಆಟೋಗ್ರಾಫ್ ಪಡೆದುಕೊಳ್ಳಬೇಕು ಎಂಬುದು ಆವಾಗ ಗೊತ್ತಾಯಿತು. ಸರಿ, ಅದನ್ನು ಇಟ್ಟುಕೊಂಡು ಏನು ಮಾಡುವುದು? ನಾನು ಅದನ್ನೇ ಕೇಳಿದ್ದೆ. ಅವನು ಇದು ಅಣ್ಣನ ಆಟೋಗ್ರಾಫ್..ಅದಿದ್ರೆ ವಿಷ್ಣು ಅಣ್ಣಾನೆ ಹತ್ರ ಇದ್ದಂಗೆ ಎಂದೇನೋ ಹೇಳಿ, ಆನಂತರ ಮುಂದೇನು ಹೇಳಬೇಕೆಂದುಗೊತ್ತಾಗದೆ ಸುಮ್ಮನಾಗಿದ್ದ.
ಆದರೆ ನಾನು ಆಟೋಗ್ರಾಫ್ ಗಳನ್ನೂ ತೆಗೆದುಕೊಳ್ಳಲು ಶುರು ಮಾಡಿದ್ದಕ್ಕೆ ಕಾರಣರಾದದ್ದು ಯಂಡಮೂರಿ ವೀರೇಂದ್ರನಾಥ್. ನಾನು ಮೊದಲ ಪಿಯುಸಿಯಲ್ಲಿದ್ದಾಗ ಅವರ ದುಡ್ಡು ಪವರ್ ಆಫ್ ದುಡ್ಡು ಓದಲು ಸಿಕ್ಕಿತ್ತು. ಅದಕ್ಕೂ ಮುನ್ನ ಯಾವಾಗಲೊಮ್ಮೆ ತುಷಾರ, ಮಯೂರ ಮುಂತಾದ ಸಾಪ್ತಾಹಿಕ, ಮಾಸಿಕಗಳನ್ನ ತಂದಾಗ ಅದರಲ್ಲಿ ಯಂಡಮೂರಿ ಅವರ ಧಾರಾವಾಹಿಗಳ ಬಗ್ಗೆ ತಿಳಿದಿದ್ದೆ. ಆದರೆ ಕಂತು ಕಂತು ಕೂಡಿಟ್ಟುಕೊಂಡು ಓದುವುದು ಸಾಧ್ಯವಿರಲಿಲ್ಲ. ಆದರೆ ನಂಜನಗೂಡಿನ ಗ್ರಂಥಾಲಯವನ್ನು ಸೋಸುತ್ತಿದ್ದಾಗ ಅಚಾನಕ್ ಆಗಿ ಸಿಕ್ಕಿದ್ದು ಯಂಡಮೂರಿ ವೀರೇಂದ್ರನಾಥ್ ಅವರ ದುಡ್ಡು ಟು ದಿ ಪವರ್ ಆಫ್ ದುಡ್ಡು. ಒಂದೇ ಗುಕ್ಕಿನಲ್ಲಿ ಇಡೀ ಕಾದಂಬರಿ ಓದಿ ಮುಗಿಸಿದ್ದೆ. ಅಷ್ಟರಲ್ಲಾಗಲೇ ಕನ್ನಡದ ಬಹುತೇಕ ಗಣ್ಯರ ಬರಹ-ಕಾದಂಬರಿಗಳನ್ನು ಓದಿ ಬಿಟ್ಟಿದ್ದೆ. ಎಸ್.ಎಲ್. ಭೈರಪ್ಪನವರ ಆವತ್ತಿನವರೆಗೆ ಬಿಡುಗಡೆಯಾಗಿದ್ದ ಅಷ್ಟೂ ಕಾದಂಬರಿಗಳನ್ನು ಎರಡೆರೆಡು ಬಾರಿ ಓದಿ ಮುಗಿಸಿದ್ದೆ. ಆನಕೃ, ತರಾಸು, ಮಾಸ್ತಿ, ಬೇಂದ್ರೆ, ಕುವೆಂಪು, ಕಾರಂತರು, ತ್ರಿವೇಣಿ, ಎಂ.ಕೆ.ಇಂದಿರಾ.... ಹೀಗೆ ಎಲ್ಲರೂ ಮುಗಿದಿತ್ತು. ಗೀತಾ ನಾಗಭೂಷಣ್, ಈಚನೂರು ಶಾಂತ, ಈಚನೂರು ಜಯಲಕ್ಷ್ಮಿ, ರೇಖಾ ಕಾಖಂಡಕಿ, ಮಹಾಬಲಮೂರ್ತಿ, ಎಂ ಎಚ್ ನಾಯಕಬಾಡ, ಕುಂವಿ, ಸಾಯಿಸುತೆ, ... ಹೀಗೆ ಕೈಗೆ ಸಿಕ್ಕಿದವರ ಬರವಣಿಗೆಗಳನ್ನೂ ಓದಿಯಾಗಿತ್ತು. ಅಂತಹ ಸಂದರ್ಭದಲ್ಲಿ ಸಿಕ್ಕಿದ್ದು ಯಂಡಮೂರಿ. ಓದಿದ್ದೆ, ಓದಿದ್ದೆ. ಒಂದೇ ವರ್ಷದಲ್ಲಿ ಅವರ ಆವತ್ತಿಗ್ಗೆ ಬಿಡುಗಡೆಯಾಗಿದ್ದ ನಲವತ್ತನಾಲ್ಕು ಪುಸ್ತಕಗಳನ್ನು ಓದಿ ಬಿಟ್ಟೆ. ಆ ಮಧ್ಯದಲ್ಲಿ ಸಿಕ್ಕಿದ್ದೇ ಗ್ರಾಫಾಲಜಿ. ಕೈಬರಹ ನೋಡಿ, ವ್ಯಕ್ತಿತ್ವ ಅಂದಾಜು ಮಾಡುವ ಬಗೆಗಿನ ಪುಸ್ತಕ. ಅಲ್ಲಿಂದ ಶುರುವಾಯಿತು ನೋಡಿ, ಹಸ್ತಾಕ್ಷರ ಪರೀಕ್ಷಿಸುವ ಅಭ್ಯಾಸ. ಆ ಕಾರಣಕ್ಕಾಗಿ ಆಟೋಗ್ರಾಫ್ ತೆಗೆದುಕೊಂಡು ಮನೆಯಲ್ಲಿ ಹೋಗಿ ಅದರ ಅಧ್ಯಯನ ಮಾಡುತ್ತಿದ್ದೆ. ಅದೆಷ್ಟರ ಮಟ್ಟಿಗೆ ಆ ಬರಹದವರ ವ್ಯಕ್ತಿತ್ವ ತಿಳಿಯಿತೋ ಅಥವಾ ತಿಳಿದು ಅದೇನು ಮಾಡಿದೆನೋ ಗೊತ್ತಾಗಲಿಲ್ಲ. ಆದರೆ ಅದೊಂದು ಚಾಳಿ ಮಾತ್ರ ಮುಂದುವರೆಯಿತು. ಸುತ್ತಮುತ್ತಲಿನವರ, ಗೆಳೆಯರ ಕೈಬರಹ ಮುಗಿದ ಮೇಲೆ ಸಾಧಕರ ಹಸ್ತಾಕ್ಷರ ಹುಡುಕುವುದಕ್ಕೆ ಶುರು ಮಾಡಿದೆ. ಸಾಹಿತಿಗಳ, ಚಿತ್ರತಾರೆಗಳ, ಗಾಯಕರ... ಹೀಗೆ ಯಾರೇ ಸಿಕ್ಕರೂ ಪಕ್ಕಾಭಿಮಾನಿಯಂತೆ ಹಸ್ತಾಕ್ಷರ ತೆಗೆದುಕೊಳ್ಳುತ್ತಿದೆ. ಮನೆಯಲ್ಲಿ ಅದನ್ನೇ ನೋಡುತ್ತಾ ಅದೇನೋ ಹುಡುಕುತ್ತಿದ್ದೆ.
ಹಾಗೆಯೇ ಮೊನ್ನೆ ಅಂಕಿತ ಪ್ರಕಾಶನದ ಪುಸ್ತಕದ ಅಂಗಡಿಗೆ ಹೋಗಿದ್ದಾಗ ಎದುರಿಗೆ ಸಿಕ್ಕವರು ಲೇಖಕ ಜೋಗಿ. ನನ್ನ ನೋಡಲೇ ಬೇಕಾದ ನೂರೊಂದು ಚಿತ್ರಗಳು ಪುಸ್ತಕ ಬಿಡುಗಡೆ ಮಾಡಿದವರು. ಬರೀ ಫೋನಿನಲ್ಲಿ ಮಾತನಾಡಿ ಬಿಡುಗಡೆ ನೀವೇ ಮಾಡಬೇಕು ಎಂದಾಗ, ಖಂಡಿತ ಬರುತ್ತೇನೆ, ಆದರೆ ಮುಂದಿನವಾರ ನನ್ನ ಪುಸ್ತಕ ಬಿಡುಗಡಿಯಿದೆ ನೀವು ಬರಲೇಬೇಕು ಎಂದವರು ಸಮಯಕ್ಕೆ ಸರಿಯಾಗಿ ಬಂದಿದ್ದರು. ಆನಂತರ ಒಂದಷ್ಟು ಮಾತನಾಡಿದ್ದು ಬಿಟ್ಟರೆ ಅಂತಹ ಮಾತುಕತೆ ಇರಲಿಲ್ಲ. ಹಾಗಾಗಿ ಎದುರಿಗೆ ಸಿಕ್ಕಾಗ ಮತ್ತೆ ನನ್ನದೇ ಹಿಂಜರಿಕೆ ನನ್ನನ್ನು ಕಾಡತೊಡಗಿತ್ತು. ನಾನು ಇವರಿಗೆ ನೆನಪಿರಬಹುದಾ..?ಅದೊಂದು ಹಿಂಜರಿಕೆ ನನ್ನನ್ನೂ ಯಾವತ್ತಿಗೂ ಕಾಡುತ್ತದೆ. ನಾನು ಹಲವಾರು ಸೆಲೆಬ್ರಿಟಿಗಳ ಜೊತೆಯಲ್ಲಿ ಕೆಲಸ ಮಾಡಿದ್ದೇನೆ. ಆದರೆ ಕೆಲಸದ ನಂತರ ನಾನು ಅವರೊಂದಿಗೆ ಅಂತಹ ಗೆಳೆತನವನ್ನು ಇಟ್ಟುಕೊಳ್ಳುವುದಿಲ್ಲ. ಅದೇಕೋ ಏನೋ? ನನ್ನ ಮೊದಲ ಚಿತ್ರದ ನಾಯಕ ನಾಯಕಿ, ಕಲಾವಿದರು ಹೀಗೆ. ಯಾರೊಂದಿಗೂ ನನ್ನ ಗೆಳೆತನವಿಲ್ಲ. ಆದರೆ ನನ್ನ ಗೆಳೆಯರ ಬಳಗದಲ್ಲಿರುವವರೆ ಬೇರೆ. ಅದರಲ್ಲೂ ಹೆಸರು ಮಾಡಿದವರು ನನಗೆ ಪರಿಚಯವಿದ್ದರೂ ಅಚಾನಕ್ ಆಗಿ ಎಲ್ಲಾದರೂ ಸಿಕ್ಕಾಗ ಮಾತನಾಡಿಸಲು ಹಿಂದೆ ಮುಂದೆ ನೋಡುತ್ತೇನೆ. ಕಾರಣ ಇಷ್ಟೇ.. ಅವರಿಗೆ ನನ್ನ ನೆನೆಪಿರಬಹುದೇ..? ಅವರಿಗೆ ನನ್ನ ಪರಿಚಯ ಇರಬಹುದೇ..? ಅಕಸ್ಮಾತ್ ಮರೆತಿದ್ದರೆ ಅದನ್ನು ನೆನಪಿಸುವ ಸರ್ಕಸ್ ದೊಡ್ಡದು... ಆದರೆ ಇದೆ ನನ್ನ ಮೇಲಿನ ಇಮೇಜ್ ಅನ್ನು ಋಣಾತ್ಮಕವಾಗಿಯೂ ಕೆಲವೊಮ್ಮೆ ಧನಾತ್ಮಕವಾಗಿಯೂ ರೂಪಿಸುತ್ತದೆ.ಗೊತ್ತಿದ್ದರೂ ಮಾತನಾಡಿಸಲಿಲ್ಲ, ಅವನಿಗೆ ದುರಹಂಕಾರ ಎನ್ನುವ ಹಣೆಪಟ್ಟಿಯನ್ನು ವಿನಾಕಾರಣ ಹೊತ್ತುಕೊಳ್ಳುವಂತೆ ಮಾಡಿಬಿಡುತ್ತದೆ
ಆದರೆ ಜೋಗಿ ಮಾತನಾಡಿಸಿ, ಹೇಗಿದ್ದೀರಾ..? ಎಂದರು. ನಾನು ಅವರನ್ನೇ ನೋಡಿದೆ. ನನ್ನಂತಹ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಬರಹಗಾರ ಜೋಗಿ. ಯಾವುದೇ ವಿಷಯದ ಬಗ್ಗೆಯೂ ಅನಿಸಿದ್ದನ್ನು ಅನಿಸಿದ ಹಾಗೆ ಬರೆಯುವ ಜೋಗಿಗೆ ನನ್ನ ನೆನಪಿರಬಹುದಾ..? ಎಂಬ ಪ್ರಶ್ನೆ ಆ ಕ್ಷಣದಲ್ಲಿ ಕಾಡದೆ ಇರಲಿಲ್ಲ. ಮಾತನಾಡಿಸಿ, ಅವರದೇ ಪುಸ್ತಕಕ್ಕೆ ಹಸ್ತಾಕ್ಷರ ತೆಗೆದುಕೊಂಡೆ.

ಕತೆ ಚಿತ್ರ ಕತೆ ಸಂಭಾಷಣೆ ಜೋಗಿ ಬರೆದ ಇತ್ತೀಚಿನ ಪುಸ್ತಕ. ಅವರೇ ಹೇಳುವಂತೆ ಚಿತ್ರರಂಗದ ಜೊತೆಗಿನ ಅವರ ಪ್ರಯೋಗವನ್ನು ಪುಸ್ತಕ ತೆರೆದಿಡುತ್ತದೆ. ಆದರೆ ಚಿತ್ರಕತೆಯ ಆಳಕ್ಕೆ ಪುಸ್ತಕ/ಬರಹ ಇಳಿಯುವುದಿಲ್ಲ. ಒಬ್ಬ ಬರಹಗಾರನಾಗಿ ಜೋಗಿ ತಾನು ಕಂಡುಕೊಂಡ ದೃಶ್ಯಮಾಧ್ಯಮದ ಮಜಲುಗಳನ್ನು ಅಕ್ಷರ ರೂಪಕ್ಕೆ ತಂದಿದ್ದಾರೆ. ಕೆಲವು ಅಧ್ಯಾಯಗಳು ಖುಷಿ ನೀಡಿದರೆ ಕೆಲವು ಅಪೂರ್ಣ ಎನಿಸಿದ್ದು ನನ್ನ ವೈಯಕ್ತಿಕ ಅಭಿಪ್ರಾಯ.

No comments:

Post a Comment